ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧುಮೇಹ ರೋಗಿಗಳಿಗೆ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ನ.30ರಂದು ಬೆಳಿಗ್ಗೆ 9ರಿಂದ ಜೈಲ್ ಸರ್ಕಲ್ನಲ್ಲಿರುವ ಆದರ್ಶ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಉಚಿತ ರೆಟಿನೋಪತಿ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಆ ಆಸ್ಪತ್ರೆಯ ರೆಟಿನಾ ತಜ್ಞೆ ಡಾ. ದೀಪಾ ಎಂ.ಜೆ. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತದಲ್ಲಿ ಸುಮಾರು ಶೇ.12.5 ಜನರಲ್ಲಿ ಸಕ್ಕರೆ ಖಾಯಿಲೆ ಕಂಡು ಬಂದಿದೆ. ಪ್ರತಿಮೂರು ಜನ ಸಕ್ಕರೆ ಖಾಯಿಲೆ ಉಳ್ಳವರಲ್ಲಿ ಒಬ್ಬರಿಗೆ ಕಣ್ಣಿನ ರೆಟಿನಾ ಸಮಸ್ಯೆ ಕಂಡು ಬಂದಿದೆ. ಭಾರತದಲ್ಲಿ ಶೇ.85ರಷ್ಟು ಸಕ್ಕರೆ ಖಾಯಿಲೆ ಉಳ್ಳವರಿಗೆ ತಮಗೆ ಕಣ್ಣಿನ ತೊಂದರೆ ಇದೆ ಎಂಬ ವಿಷಯವೇ ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಉಂಟುಮಾಡಲು ತಮ್ಮ ಆಸ್ಪತ್ರೆಯು ಲಕ್ಷ್ಮೀದೇವಿ ಚಿಟ್ಟ ಚಾರಿಟೇಬಲ್ ಟ್ರಸ್ಟ್ನ ಸಹಯೋಗದೊಂದಿಗೆ ಈ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.
ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸದಿರಬಹುದು ಆದರೆ ನಿಯಮಿತ ಕಣ್ಣಿನ ತಪಾಸಣೆ ಮುಖ್ಯವಾಗಿದೆ. ದೃಷ್ಟಿಯ ಏರಿಳಿತ, ಕಪ್ಪು ಎಳೆಗಳು ಅಥವಾ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುವುದು, ದೃಷ್ಟಿ ಮಂದವಾಗುವುದು, ತೀವ್ರವಾದ ಹಂತದಲ್ಲಿ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಳ್ಳುವುದು ಮೊದಲಾದವು. ಡಯಾಬಿಟಿಕ್ ರೆಟಿನೋಪತಿಯ ಲಕ್ಷಣಗಳಾಗಿವೆ. ಆದ್ದರಿಂದ ಸಾರ್ವಜನಿಕರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಅಶೋಕ್, ಸಿಬ್ಬಂದಿಗಳಾದ ಪ್ರಶಾಂತ, ಪಂಕಜ, ರವೀಶ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















