ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಡಾ. ಶಿವಮೊಗ್ಗ ಸುಬ್ಬಣ್ಣ ರವರು ಆಕಾಶವಾಣಿಯ ಕಲಾವಿದರಾದಾಗ ಹಾಡಿದ ಮೊದಲ ಹಾಡೇ “ದೂರ ದೂರಕೆ ಬಹು ಬಹು ದೂರಕೆ ಹಾರುವೆ ಗಾನ ವಿಮಾನಲಿ” ಎಂಬ ಹಾಡನ್ನೇ ಶೀರ್ಷಿಕೆಯಾಗಿಸಿ, ಅವರ ಜೀವನ, ಗುಣ, ಕಾರ್ಯ, ಸಾಧನೆಗಳು ಹಾಗೂ ಅವರೊಂದಿಗೆ ಇರುವ ನೆನಪುಗಳನ್ನು ಹೃದಯಪೂರ್ಣವಾಗಿ, ಭಾವನಾತ್ಮಕವಾಗಿ ರೂಪಿಸಿ ನಿಜ ಅರ್ಥದಲ್ಲಿ ಸಂಸ್ಮರಣೆಯಾಗಿಸಿ ಗೀತ ನಮನ ಸಲ್ಲಿಸಿದ್ದು ಅದರಲ್ಲೂ ಶಿವಮೊಗ್ಗದ ಕಲಾವಿದರಿಂದಲೇ ಹಾಗೂ ಹಿಂದೆ ಸುಬ್ಬಣ್ಣನವರಿಗೆ ಪಕ್ಕ ವಾದ್ಯದಲ್ಲಿ ಸಾತ್ ನೀಡಿದವರೇ ಆಗಮಿಸಿದ್ದೂ ಒಳಗೊಂಡಂತೆ ಒಟ್ಟಾರೆ ಕಾರ್ಯಕ್ರಮ ಅರ್ಥಪೂರ್ಣವಾಗಿ ರಂಗಮಂದಿರದಲ್ಲಿ ಸಂಪನ್ನಗೊಂಡಿತು.
“ಅಪಾರೇ ಕಾವ್ಯ ಸಂಸಾರೇ ಕವಿರೇಕಃ ಪ್ರಜಾಪತಿಃ” ಎಂಬಂತೆ ಕವಿಯ ಮನಸ್ಸಿನಲ್ಲಿ ಮೂಡಿದ ಭಾವವನ್ನು ಆತ ತನ್ನ ಕವಿತೆಗಳಲ್ಲಿ ಕಟ್ಟಿಕೊಡುವ ಕೆಲಸ ಮಾಡುತ್ತಾನೆ. ಆ ಭಾವಕ್ಕೆ ತಕ್ಕದಾಗಿ ಜೀವ ನೀಡುವವನು ಅದನ್ನು ಹಾಡುವ ಗಾಯಕ. ಅದಕ್ಕೆ ಉತ್ತಮ ಸಂಗೀತ ರಚನೆ ಮಾಡುವವನ ಪಾಲೂ ಸಹ ಇದರಲ್ಲಿ ಇದೆ ಅನ್ನಿ. ಯಾರೇನೇ ಮಾಡಿದರೂ ಗಾಯಕ ಅದನ್ನು ತನ್ನೊಳಗೆ ಇಳಿಸಿ ತನ್ನದೇ ಭಾವ ಎನ್ನುವ ರೀತಿಯಲ್ಲಿ ಏಕಾತ್ಮತೆ ತಂದು ಹಾಡದೆ ಹೋದರೆ ಶರೀರ ಮಾತ್ರ ಶಾರೀರ ಇರುವುದಿಲ್ಲ ಅಲ್ಲಿ. ಈ ರೀತಿಯಾಗಿ ನೋಡಿದರೆ ಕೆಲವೊಂದು ಕವಿಗಳ ಕವಿತೆಗಳು ಗಾಯಕರಿಗಾಗಿಯೇ ರಚಿತವಾಗಿರುವುದೇನೋ ಅನಿಸುವಷ್ಟರ ಮಟ್ಟಿಗೆ ಕವಿಯ ಭಾವಕ್ಕೆ ಜೀವ ತುಂಬಿ ಹಾಡುತ್ತಿದ್ದವರಲ್ಲಿ ನಮ್ಮ ಶಿವಮೊಗ್ಗದ ಹೆಮ್ಮೆಯನ್ನುಬಹುದಾದ ಕಂಚಿನ ಕಂಠದ ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಸಹ ಒಬ್ಬರು. ಏಕೆಂದರೆ ಭಾವಗೀತೆ ಅಥವಾ ಸುಗಮ ಸಂಗೀತದ ಪ್ರಕಾರವೇ ಒಂದು ವೈಶಿಷ್ಟ್ಯ ಪೂರ್ಣವಾದದ್ದು. ಇಲ್ಲಿ ಸಿನಿಮಾದಂತೆ ಯಾವುದೇ ಹೀರೋಗಳು ಇರುವುದಿಲ್ಲ ಅವರಿಗಾಗಿ ಕವಿತೆ ಬರೆಯೋಣ ಎಂದರೆ ಮತ್ತೆ ಯಾವ ನಾಯಕ-ನಾಯಕಿಯನ್ನೂ ಇಲ್ಲಿ ಬಿಂಬಿಸುವ ಹಾಗೂ ಇಲ್ಲ. ಇಲ್ಲಿ ಗಾಯಕ ಅಥವಾ ಗಾಯಕಿಯೇ ಹೀರೋ. ಕವಿಯ ಭಾವವನ್ನು ತನ್ನೊಳಗೆ ತಿಳಿದುಕೊಂಡು ಪೂರ್ಣ ಅನುಭವಿಸಿ ಹಾಡಿದಾಗ ಮಾತ್ರ ಪರಿಪೂರ್ಣತೆ. ಇಷ್ಟನ್ನು ಬರೆಯುವಾಗ ಕಣ್ಣೆದುರಿಗೆ ಬಂದ ಹಾಡೆ ಕುವೆಂಪು ವಿರಚಿತ “ಆನಂದಮಯ ಈ ಜಗ ಹೃದಯ” ಎನ್ನುವುದು ಈ ಸಾಹಿತ್ಯದಲ್ಲಿ ಪ್ರತಿಯೊಂದು ಸಾಲನ್ನೂ ನಮಗೆ ಅನುಭವಿಸುವಂತೆ ಮಾಡಿದ್ದು ಶಿವಮೊಗ್ಗ ಸುಬ್ಬಣ್ಣನವರ ಕಂಚಿನ ಕಂಠ.
ಕನ್ನಡದ ಭಾವಗೀತೆಯ ಲೋಕದಲ್ಲಿ ಅಪರೂಪದ ಸ್ಥಾನ ಪಡೆದ ಕವಿ, ಗಾಯಕ, ಸಂಗೀತಕಾರ ಡಾ.ಶಿವಮೊಗ್ಗ ಸುಬ್ಬಣ್ಣ. ಅವರ ಕಾವ್ಯ ಮತ್ತು ಗಾನ ಎರಡೂ ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ಮೃದುವಾಗಿ ಸ್ಪರ್ಶಿಸುವ ಶಕ್ತಿ ಹೊಂದಿದ್ದು ಗ್ರಾಮೀಣ ಬದುಕು, ಪ್ರಕೃತಿ, ಮಾನವೀಯತೆ, ಪ್ರೀತಿ, ವಿರಹ, ಬದುಕಿನ ನೋವು, ನಂಬಿಕೆಗಳು ಅವರ ಭಾವಗೀತೆಗಳ ಮೂಲಸ್ರೋತ. ಶಿವಮೊಗ್ಗ ಸುಬ್ಬಣ್ಣ ಭಾವಗೀತೆಯನ್ನು ಜನಸಾಮಾನ್ಯರ ಹೃದಯಕ್ಕೆ ಇನ್ನಷ್ಟು ಹತ್ತಿರ ತಂದವರು. ಸಭೆ, ಸಂಗೀತ ಕಾರ್ಯಕ್ರಮಗಳಿಗಷ್ಟೇ ಅಲ್ಲ ದಿನನಿತ್ಯದ ಬದುಕಿನಲ್ಲೂ ಹಾಡಿಕೊಳ್ಳಬಹುದಾದ ಗೀತೆಗಳನ್ನು ನೀಡಿದ್ದು ಅವರ ಸಾಧನೆ. ಕೇವಲ ಸಾಹಿತ್ಯವಲ್ಲದ ಅನುಭವವೇ ಆಗಿರುವುದು ಭಾವಗೀತೆ. ಆ ಅನುಭವವನ್ನು ಶುದ್ಧವಾಗಿ ಎಲ್ಲರಿಗೂ ತಲುಪಿಸುವಲ್ಲಿ ಸುಬ್ಬಣ್ಣ ಅವರ ಪಾತ್ರ ಮಹತ್ವದ್ದು. ಹಾಗಾಗಿಯೇ ಕನ್ನಡ ಭಾವಗೀತೆಯ ಪರಂಪರೆಯಲ್ಲಿ ಅವಿಸ್ಮರಣೆಯರಾದವರು ಇವರು. ಭಾವ ಪ್ರಧಾನತೆಯು ಸುಬ್ಬಣ್ಣನವರ ಹಾಡುಗಳಲ್ಲಿನ ಶಕ್ತಿ. ಕೇಳುವವನು ತನ್ನದೇ ಬದುಕನ್ನು ಅಲ್ಲಿ ಕಾಣಬಲ್ಲ ಅಲ್ಲದೆ ಸರಳತೆಯೇ ಅವರ ವೈಶಿಷ್ಟ್ಯ. ಗಾಳಿ, ಮಳೆ,ಮಣ್ಣು ಇವು ಕೇವಲ ದೃಶ್ಯಗಳಾಗಿರದೆ ಭಾವದ ಪಾತ್ರಗಳಾಗಿವೆ ಅವರ ಹಾಡುಗಳಲ್ಲಿ. ಜನಸಾಮಾನ್ಯರ ಕವಿಯಾದ ಅವರು ಭಾವಗೀತೆಯನ್ನು ಸಾಹಿತ್ಯದಿಂದ ಅನುಭವದ ಮಟ್ಟಕ್ಕೆ ತಂದು ಸರಳತೆಯನ್ನು ಮೈಗೂಡಿಸಿಕೊಂಡ ಗಾಯಕ. ಹಾಗಾಗಿಯೇ ಅವರ ಅಭಿಪ್ರಾಯದಲ್ಲಿ -“ಸುಗಮ ಸಂಗೀತವೆಂದರೆ ಕಾವ್ಯ ಸರಸ್ವತಿಯನ್ನು ಹೊತ್ತ ಸಂಗೀತದ ಅಂಬಾರಿ”ಎಂದರು. ಗಂಭೀರ ಹಾಡುಗಳಿಗೆ ಹದವಾದ ಧ್ವನಿ. ರಾಷ್ಟ್ರಕವಿ ಕುವೆಂಪು ಅವರ ಎದುರಿಗೇ ಅವರ ಗೀತೆಗಳನ್ನು ಹಾಡಿ ಶಹಬ್ಬಾಸ್ ಎನಿಸಿಕೊಂಡಿದ್ದರು. ಮಂದ್ರ ಸ್ಥಾಯಿ, ಶ್ರೀಮಂತ ಗಂಭೀರ ಧ್ವನಿಯನ್ನು ಕನ್ನಡದ ಖ್ಯಾತ ನಿರೂಪಕಿ ಅಪರ್ಣ “ಕನ್ನಡದ ಸಿರಿಕಂಠ” ಎಂದಿದ್ದರು. ಅವರನ್ನು ನೋಡಿ – ‘ಸುಣ್ಣ ಬಣ್ಣ ಇದ್ರೆ ಮಾತ್ರ ಸುಬ್ಬಣ್ಣ’ ಎಂದು ಪತ್ರಕರ್ತ ವೈಎನ್ಕೆ ಹೇಳಿದ್ದರು. ಕುವೆಂಪು ಅವರು – ” ಎಲ್ಲರೂ ನನ್ನ ಗೀತೆಗಳನ್ನು ಹತ್ತಿಕೊಂಡು ಹೋಗುತ್ತಾರೆ ಆದ್ರೆ ಸುಬ್ಬಣ್ಣ ಮಾತ್ರ ಹೊತ್ತುಕೊಂಡು ಹೋಗುತ್ತಾರೆ” ಎಂದು ಹೇಳಿದ್ದರಂತೆ.
ಸಂಗೀತಕ್ಕೊಂದು ಮಾಂತ್ರಿಕ ಶಕ್ತಿ ಇದೆ. ಒಮ್ಮೊಮ್ಮೆ ಕೆಲವೊಂದು ಹಾಡುಗಳು ತನಗೆ ತಾನೇ ದಂತಕಥೆ ಆಗಿಬಿಡುತ್ತವೆ. ಆ ಸಾಲಿನಲ್ಲಿ ನಿಲ್ಲುವ ಹಾಡೆಂದರೆ ಕಾಡ ಕುದುರೆ ಓಡಿ ಬಂದಿತ್ತಾ…. ಎಂಬುದು. ಇವರು ಪ್ರಣಯ ಗೀತೆಯನ್ನು ಆಕಾಶವಾಣಿಯ ತಿಂಗಳ ಹೊಸ ಹಾಡಿನಲ್ಲಿ ಚೆಂಗುಲಾಬಿಯ ನಡುವೆ ನಾ ನಿನ್ನ ಕಂಡೆ ಹಾಡಿ ಪ್ರಸಿದ್ಧರಾಗಿದ್ದರು.ಇವರು ಜಾನಪದ ಗೀತೆಯನ್ನೂ ಸಹ ಹಾಡಿದ್ದಾರೆ ಅದರಲ್ಲಿ ಒಂದು ಮುತ್ತ ಕಂಡೇನವ್ವಾ ನಾನೊಂದು…. ಸಂತ ಶಿಶುನಾಳ ಷರೀಫರ ಗೀತೆಗಳಂತೂ ಇವರ ಧ್ವನಿಗಾಗಿಯೇ ರಚಿತವಾದವುಗಳೋ ಎನಿಸುವಂತೆ ಸಿ. ಅಶ್ವಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ತುಂಬಾ ಜನಪ್ರಿಯವಾದವುಗಳು ಕೋಡಗಾನ ಕೋಳಿ ನುಂಗಿತ್ತಾ, ಬಿದ್ದೀಯಬ್ಬೇ ಮುದುಕಿ ಬಿದ್ದೀಯಬ್ಬೇ, ಅಳಬೇಡಾ ತಂಗಿ ಅಳಬೇಡಾ, ಸ್ನೇಹ ಮಾಡಬೇಕಿಂಥವಳಾ…. ಅಲ್ಲದೇ ಕನ್ನಡದ ಖ್ಯಾತ ಕವಿಗಳಾದ ಕುವೆಂಪು, ಜಿ ಎಸ್ ಎಸ್, ಕೆ ಎಸ್ ನ ಮುಂತಾದ ಅನೇಕ ದಿಗ್ಗಜರ ಗೀತೆಗಳನ್ನು ಹಾಡಿ ಆ ಹಾಡಿಗೆ ಜೀವನದಲ್ಲಿ ಯಶಸ್ವಿಯಾದವರು ಶಿವಮೊಗ್ಗ ಸುಬ್ಬಣ್ಣನವರು.
ಇಷ್ಟೆಲ್ಲ ಸಂಗತಿಗಳನ್ನು ನಮಗೆ ತಿಳಿಸಿದ್ದೇ ಸಂಸ್ಮರಣೆಯ ಅಂಗವಾಗಿ ನಡೆದ “ಗಾನವಿಮಾನ” ಕಾರ್ಯಕ್ರಮ. ಇತ್ತೀಚೆಗಷ್ಟೇ ನಗರಕ್ಕೆ ಆಗಮಿಸಿದ ನ್ಯಾಯಮೂರ್ತಿಗಳಾದ ಶ್ರೀಶ್ರೀಶಾನಂದರು ಹೇಳಿದ ಮಾತಾದ-“ಶಿವಮೊಗ್ಗದಲ್ಲಿ ಒಂದು ಬೀದಿಯಲ್ಲಿ ನಿಂತು ಕಲ್ಲನ್ನ ಹೊಡೆದರೆ, ಒಬ್ಬ ಕಲಾವಿದನ ಮನೆಗೆ ಬೀಳುತ್ತದೆ” ಎಂಬುದಂತೂ ಅಕ್ಷರಶಃ ಸತ್ಯ ಅನಿಸಿತು. ಈ ಕಾರ್ಯಕ್ರಮದಲ್ಲಿನ ಪ್ರತಿಯೊಬ್ಬ ಕಲಾವಿದರೂ ಶಿವಮೊಗ್ಗದವರೇ ಆಗಿದ್ದುದು ವಿಶೇಷ. ಶಿವಮೊಗ್ಗ ಸುಬ್ಬಣ್ಣನವರ ತಮ್ಮನ ಮಗ ಕವಿ, ಸಾಹಿತಿ, ನಟ, ಕಲಾವಿದ, ಗಾಯಕ, ಸಹೃದಯಿ ಹೀಗೆ ಸಕಲಕಲಾವಲ್ಲಭನಾದ ಶ್ರೀವಿನಯ್ ಶಿವಮೊಗ್ಗ ಅವರ ಪರಿಕಲ್ಪನೆ ಹಾಗೂ ನಿರೂಪಣೆಯಲ್ಲಿ ನಿಜಕ್ಕೂ ಆಗಲೇಬೇಕಾಗಿದ್ದ ಕಾರ್ಯಕ್ರಮ ಬಹು ಅರ್ಥಪೂರ್ಣವಾಗಿ ಸುಬ್ಬಣ್ಣರ ಬದುಕು ಭಾವಗಳನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾದರು. ಅವರ ಪ್ರತಿಯೊಂದು ವಿಚಾರಗಳು ಸಹ ಸುಬ್ಬಣ್ಣನವರನ್ನು ಹಾಗೂ ಕುವೆಂಪುರವರ ಜೊತೆ ಜೊತೆಗೇ ಕನ್ನಡದ ಶ್ರೇಷ್ಠ ಕವಿಗಳ ಅಂತರಾತ್ಮದ ಒಳನೋಟವನ್ನು ಪ್ರೇಕ್ಷಕರಿಗೆ ತೆರೆದಿಟ್ಟರು. ಕವಿತೆಗಳ ಸಾಹಿತ್ಯದ ಕುರಿತು ವಿವರಣೆ ನೀಡಿದ್ದು ಅರ್ಥಗರ್ಭಿತ ಹಾಗೂ ಔಚಿತ್ಯಪೂರ್ಣವಾಗಿತ್ತು. ಸುಬ್ಬಣ್ಣನವರ ತಂಗಿಯ ಮಗಳಾದ ಶ್ರೀಮತಿ ಶ್ರುತಿ ರಾಘವೇಂದ್ರನ್ ಹಾಗೂ ಶ್ರೀಮತಿ ಸುರೇಖಾ ಹೆಗಡೆ ತಮ್ಮ ಜೇನ್ದನಿಯಿಂದಲೇ ಎಲ್ಲರಿಗೂ ಅಮೃತದ ಸವಿ ಉಣಬಡಿಸಿದರು.
ಶೃತಿಯವರು ಮೊದಲು ಹಾಡಿದ ಮೆಡ್ಲೆ ತೇನ ವಿನಾ ತೃಣಮಪಿ ಹಾಗೂ ಕೊನೆಯದಾದ ಅನಿಕೇತನ ಹಾಗೆಯೇ ಸುರೇಖಾ ಅವರ ಯಾವ ಹಾಡ ಹಾಡಲಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ವಿನಯ್ ನಾಡಿಗ್ ಅವರಂತೂ ತಮ್ಮ ಆನಂದಮಯ ಈ ಜಗ ಹೃದಯವೇ ಮೊದಲಾದ ಹಾಡುಗಳಲ್ಲಿ ನಮಗೆ ಶಿವಮೊಗ್ಗ ಸುಬ್ಬಣ್ಣ ಅವರನ್ನೇ ನೆನಪಿಸಿದರು. ನಾಗಲಾಪುರ ಸಹೋದರರಲ್ಲಿ ಕಾರ್ತಿಕ ಬಿದ್ದೀಯಬ್ಬೆ ಮುದುಕಿ ಹಾಡನ್ನು ಸೊಗಸಾಗಿ ಹಾಡಿದರೆ ವಿಶಾಖ್ ಅಂತೂ ನಾ ನಿನ್ನ ಕಂಡಾಗ ಎಷ್ಟೊಂದು ನಲವಿತ್ತೇ ಹಾಡನ್ನು ಅನುಭವಿಸಿ ಹಾಡಿದ ಪರಿ ಅದ್ಭುತವಾಗಿತ್ತು. ಪಾರ್ಥನಂತೂ ಹುಣ್ಣಿಮೆಯ ಆಗಸದ ಬಣ್ಣದ ಛತ್ರಿಯು ಹಾಡ್ತಾ ಇದ್ರೆ, ಹುಣ್ಣಿಮೆಯ ಚಂದಿರನನ್ನೇ ನೋಡಿದ ಹಾಗೆ ಆಯ್ತು. ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಎಂದು ಪೃಥ್ವಿ ಗೌಡ ಹಾಡಿ ಮನಕಾನಂದ ನೀಡಿದರೆ ಅತಿಥಿಯಾಗಿ ಬಂದ ಪಂಚಮ ಹಳಿಬಂಡಿ ಅವರು ಸಹ ಅದ್ಭುತವಾಗಿ ಹಾಡಿದರು. ಇನ್ನು ಎಲ್ಲರೂ ಸೇರಿ ಹಾಡಿದ ಕರಿಮಾಯಿ ಹಾಗೂ ಕಾಡು ಕುದುರೆ ಓಡಿ ಬಂದಿತ್ತಾ ಈ ಹಾಡುಗಳು ಶೋತ್ರ ವರ್ಗವನ್ನು ಕುಣಿಸುವ ಹಾಗಿದ್ದವು. ಹೀಗೆ ಆಯ್ಕೆಯ ಪ್ರತಿ ಹಾಡಿನಲ್ಲೂ ಸುಬ್ಬಣ್ಣನವರ ವೈಶಿಷ್ಟ್ಯತೆ ಹಾಗೂ ಕುವೆಂಪು ಮೊದಲಾದ ಕವಿಗಳ ಸಾಹಿತ್ಯದ ಭಾವವನ್ನು ಚಿತ್ರಿಸಿ ರೂಪಿಸಿದ್ದು ಮನೋಹರವಾಗಿತ್ತು.
ವಾದ್ಯ ಸಹಕಾರದಲ್ಲಿ ಜೊತೆಯಾದ ಪಕ್ವ ವಾದ್ಯದವರೇ ಆದ ಕೀಬೋರ್ಡ್ ನಲ್ಲಿ ಶ್ರೀ ಕೃಷ್ಣ ಉಡುಪ, ಶ್ರೀ ನಾಗಭೂಷಣ ಉಡುಪ, ತಬಲದಲ್ಲಿ ಶ್ರೀ ಪ್ರದ್ಯುಮ್ನ, ಕೊಳಲಿನಲ್ಲಿ ಶ್ರೀ ರಮೇಶ್, ಶ್ರೀ ಯಶೋಧರ ಇವರುಗಳು ಶಿವಮೊಗ್ಗ ಸುಬ್ಬಣ್ಣನವರಿಗೂ ತಮ್ಮ ವಾದ್ಯ ಸಹಕಾರದ ಸಾತ್ ನೀಡಿರುವುದು ಸಹ ವಿಶೇಷವಾಗಿತ್ತು. ಅವರೆಲ್ಲರೂ ತಮ್ಮ ಅತ್ಯುತ್ತಮ ಸಂಗೀತದ ಸಾತ್ ನೀಡಿ ಕೇಳುವರ ಮನದಲ್ಲಿ ಅಚ್ಚಳಿಯದೆ ಉಳಿದರು. ಸೌಂಡ್ ಸಿಸ್ಟಮ್ ನ ಚಿನ್ನು ರವರನ್ನು ಹಾಗೂ ಬ್ಯಾಗ್ರೌಂಡ್ ನಲ್ಲಿ ಬರುತ್ತಿದ್ದ ಎಲ್ಲ ಚಿತ್ರಗಳೂ ವಿಡಿಯೋಗಳನ್ನು ಬಹಳ ಸೊಗಸಾಗಿ ಎಡಿಟ್ ಮಾಡಿದ ಮಧು ಇವರಿಬ್ಬರನ್ನು ಸ್ಮರಿಸದೆ ಹೋದರೆ ತಪ್ಪಾದೀತು.
ಈ ಕಾರ್ಯಕ್ರಮದ ಪರಿಕಲ್ಪನೆ ವಿಭಿನ್ನ ಅನ್ನೋದಕ್ಕೆ 24 ಹಾಡುಗಳು, ನಡುವೆ ಸಣ್ಣ ಸಭಾ ಕಾರ್ಯಕ್ರಮವಾದರೂ ಅದು ಸಹ ಸಂಸ್ಕರಣೆಯ ಅಂಗವಾದಂತೆ ಇತ್ತು. ಜೊತೆಯಲ್ಲಿ 2 ಕಿರುಚಿತ್ರ ಸುಬ್ಬಣ್ಣನವರನ್ನು ಕುರಿತು ಹಾಗೂ ಬಿ.ಆರ್.ಲಕ್ಷ್ಮಣ್ ರಾವ್, ನಗರ ಶ್ರೀನಿವಾಸ ಉಡುಪ,ಸುಪ್ರಿಯಾ ರಘುನಂದನ್, ಮಂಗಳಾ ರವಿ,ಅರ್ಚನಾ ಉಡುಪ, ಕೆ. ಯುವರಾಜ್ ಇವರುಗಳ ವಿಡಿಯೋಗಳು ಸಹ ಸುಬ್ಬಣ್ಣನವರ ವ್ಯಕ್ತಿತ್ವ ಕಟ್ಟಿಕೊಡುವಲ್ಲಿ ಜೊತೆಯಾದವು. ಹೀಗೆ ಬರೋಬ್ಬರಿ ನಾಲ್ಕು ಗಂಟೆಯ ಕಾರ್ಯಕ್ರಮ ದೀರ್ಘವಾದರೂ ದೀರ್ಘವೆಂದೆನಿಸದ, ತುಂಬಿದ ಸಹೃದಯ ಪ್ರೇಕ್ಷಕರಿಂದ ಕೂಡಿದ ಕುವೆಂಪು ರಂಗಮಂದಿರವೇ ಹೇಳ್ತಾ ಇತ್ತು ಕಾರ್ಯಕ್ರಮ ಯಶಸ್ವಿಯಾಯಿತೆಂದು.
ಅಭಿರುಚಿಯ ರುಚಿಯೇ ಹಾಗೆ ಅನ್ನುವಂತೆ ಸಾಬೀತುಪಡಿಸಿದ ಕಾರ್ಯಕ್ರಮ ಇದಾಗಿತ್ತು. ಇಷ್ಟೊಂದು ಪರಮಾನಂದ ನೀಡುವ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಶಾಮಣ್ಣ ಟ್ರಸ್ಟ್, ಕುವೆಂಪು ಪ್ರತಿಷ್ಠಾನ ಕುಪ್ಪಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ಬೆಂಬಲವಾಗಿ ನಿಂತ ಶ್ರೀ ಎಸ್. ಜಿ. ಗೋಪಾಲ್ ಎಲ್ಲರಿಗೂ ನಗರದ ಸಂಗೀತಾಸಕ್ತ ಸಹೃದಯ ಪ್ರೇಕ್ಷಕರ ಪರವಾಗಿ ಅನಂತಾನಂತ ಧನ್ಯವಾದಗಳು. ಒಟ್ಟಿನಲ್ಲಿ ಗಾನ ವಿಮಾನವನ್ನು ಏರಿ ಸಂಭ್ರಮಿಸಿದ ನಮಗೆ ಬರೆದಿದ್ದೇ ದೀರ್ಘ ಎನಿಸಿದರೂ ಇನ್ನಷ್ಟು ಮತ್ತಷ್ಟು ಬರೆಯಲು ಸ್ಫೂರ್ತಿ ನೀಡಿದ ಕಾರ್ಯಕ್ರಮ ಎಂದರೆ ಅತಿಶಯೋಕ್ತಿಯೇನಲ್ಲ. ಯಾರೆಲ್ಲಾ ಇದಕ್ಕೆ ಬರದೇ ಮಿಸ್ ಮಾಡಿಕೊಂಡಿದ್ದೀರೋ ಅವರು ಸಧ್ಯದಲ್ಲೇ ಸಾರಥಿ ಯೂಟ್ಯೂಬ್ ಚಾನೆಲ್ನಲ್ಲಿ ಬಿತ್ತರಗೊಳ್ಳುತ್ತದೆ ಅಲ್ಲಿ ವೀಕ್ಷಿಸಿ ಸಂಭ್ರಮಿಸಿ ಎನ್ನುತ್ತಾ ಮತ್ತೊಮ್ಮೆ ಮಗದೊಮ್ಮೆ ಕಾರ್ಯಕ್ರಮದ ಆಯೋಜಕರಿಗೆ ಹೃದಯಾಂತರಾಳದ ನಮನಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















