ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ತೆಪ್ಪೋತ್ಸವ #Kote Anjaneya Temple Theppothsava ಸಮಿತಿ ವತಿಯಿಂದ ಡಿ.28ರಿಂದ ಜ.5ರವರೆಗೆ ನಡೆಯುವ ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವದ ಅಂಗವಾಗಿ ಜ.3ರ ಸಂಜೆ 7.30ರಿಂದ ವೈಭವದ ತೆಪ್ಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಎಚ್.ನಾಗೇಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇವಾಲಯದಲ್ಲಿ ಅವಿಚ್ಚಿನ್ನವಾಗಿ 65 ವರ್ಷಗಳ ದೀರ್ಘಕಾಲದ ಶ್ರೀ ಸ್ವಾಮಿಯವರ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದ ಭಕ್ತ ಶಿರೋಮಣಿ ಅರ್ಚಕ ಅನಂತರಾಮ ಐಯ್ಯಂಗಾರರ ಕಾಲದಲ್ಲಿ ಕಳೆದ 74 ವರ್ಷಗಳ ಹಿಂದೆ ಈ ಕಲ್ಯಾಣೋತ್ಸವದಲ್ಲಿ ತೆಪ್ಪೋತ್ಸವವನ್ನು ಸೇರಿಸಿದರು. ಮೊದಲ 8-10 ವರ್ಷಗಳ ಕಾಲ ಬಿದರು ಬೊಂಬುಗಳ ತೆಪ್ಪದಲ್ಲಿ ಭೀಮನ ಮಡುವಿನಲ್ಲಿ ತೆಪ್ಪೋತ್ಸವ ನಡೆಯುತ್ತಿತ್ತು. ನಂತರ ಜೋಡಿ ದೋಣಿಯಲ್ಲಿ ಅದೇ ಜಾಗದಲ್ಲಿ ಐದು ವರ್ಷ ತೆಪ್ಪೋತ್ಸವ ಮುಂದುವರಿಯಿತು ಎಂದರು.
ಭೀಮನ ಮಡುವಿನ ಜಾಗ ದರ್ಶನಾಕಾಂಕ್ಷಿ ಭಕ್ತರ ಮತ್ತು ಉತ್ಸವಮೂರ್ತಿಯ ಸುರಕ್ಷತೆಗೆ ಸೂಕ್ತ ತಾಣವಲ್ಲ ಎಂದು ಕೋರ್ಪಲಯ್ಯ ಛತ್ರದ ಬಳಿ ಸ್ಥಳಾಂತರಗೊಂಡಿತು. ಅಂದಿನಿಂದ ತೆಪ್ಪೋತ್ಸವದ ಸ್ವರೂಪದಲ್ಲಿ ಕಾಲ ಕಾಲಕ್ಕೆ ನವೀನರೀತಿಯಲ್ಲಿ ತೆಪ್ಪವನ್ನು ನಿರ್ಮಿಸಿ ಉತ್ಸವ ನಡೆಸಲಾಗುತ್ತಿದೆ ಎಂದರು.
ಕಲ್ಯಾಣೋತ್ಸವ ಸಮಿತಿಯ ಮೇಲ್ವೀಚಾರಣೆಯಲ್ಲಿ ನಡೆಸಲಾಗುತ್ತಿದ್ದ ತೆಪ್ಪೋತ್ಸವವನ್ನು ಒಂದು ಸ್ವತಂತ್ರ ಸಮಿತಿಯನ್ನು ರಚಿಸಿಕೊಂಡು ಅದರ ಮೇಲ್ವಿಚಾರಣೆಯಲ್ಲಿ ಮತ್ತಷ್ಟು ಅದ್ದೂರಿಯಾಗಿ ವೈಭವದಿಂದ ನಡೆಸಲು ಯೋಚಿಸಿ ಕಳೆದ 25 ವರ್ಷಗಳಿಂದ ತೆಪ್ಪೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ಬಾರಿಯ ವೈಭವದ ತೆಪ್ಪೋತ್ಸವದಲ್ಲಿ ಬಣ್ಣಬಣ್ಣದ ಹೂ ಬೆಳಕನ್ನು ಹೊರಹಾಕುವ ಸಿಡಿಮದ್ದುಗಳು ಝಗಝಗಿಸುವ ವಿದ್ಯುತ್ ಅಲಂಕಾರ, ಭಕ್ತಿ ಸಂಗೀತ, ಕುಮಾರ್ ಸ್ವಾಮಿಯವರ ಸ್ಯಾಕ್ಸೋ ಫೋನ್, ಭಜನೆ ಇವೆಲ್ಲವುಗಳು ಇದ್ದು, ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ಸಂಜೆ 6 ಗಂಟೆಯಿಂದಲೇ ತುಂಗಾ ಮಂಟಪದ ಬಳಿ ಕಾರ್ಯಕ್ರಮ ಜರುಗಲಿದೆ ಎಂದರು. ನಗರದ ಸಾರ್ವಜನಿಕರು ಈ ತೆಪ್ಪೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಂ.ಎಲ್.ಲಕ್ಷ್ಮೇಗೌಡ, ಕೋಶಾಧಿಕಾರಿ ಕೆ.ಮಂಜುನಾಥ್, ಸಮಿತಿ ಸದಸ್ಯರಾದ ಟಿ.ಎಸ್.ಬದರಿನಾಥ್, ಜಿ.ವಿಜಯ್ಕುಮಾರ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















