ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗದಲ್ಲಿರುವ ಏಕೈಕ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿಗೆ ನಿವೇಶನ ಹಾಗೂ ಸ್ವಂತ ಕಟ್ಟಡ ಮಂಜೂರು ಮಾಡುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ನೇತೃತ್ವದಲ್ಲಿ ಸಚಿವ ಮಧುಬಂಗಾರಪ್ಪನವರಿಗೆ #Minister Madhu Bangarappa ಇಂದು ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದ ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ನೀಡುತ್ತಾ ಬರುತ್ತಿರುವ ಪ್ರತಿಷ್ಠಿತ ಕಾಲೇಜಾಗಿದ್ದು, ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸದರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಸಾವಿರಾರು ವಿದ್ಯಾರ್ಥಿನಿಯರು ಪ್ರತಿವರ್ಷ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಸ್ಥಳಾವಕಾಶದ ಕೊರತೆ ಹಿನ್ನಲೆಯಲ್ಲಿ ಅನೇಕ ವಿದ್ಯಾರ್ಥಿನಿಯರು ಪ್ರವೇಶಾವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
2014ರಿಂದ ಶಿವಮೊಗ್ಗದ ಕರ್ನಾಟಕ ಸಂಘದ ಪಕ್ಕದಲ್ಲಿರುವ ಶಾಲಾ ಕಟ್ಟಡದಲ್ಲಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ತರಗತಿಗಳು ನಡೆಯುತ್ತಿದ್ದು, ಕಾಲೇಜು ಸಾಕಷ್ಟು ಸ್ಥಳಾವಕಾಶದ ಕೊರತೆ ಅನುಭವಿಸುತ್ತಿದೆ. ಅದೇ ಆವರಣದಲ್ಲಿ ಮಹಿಳಾ ಪಿಯು ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳು ಇರುವುದರಿಂದ, ಒಮ್ಮೆ 1ನೇ ತರಗತಿ ಪ್ರವೇಶ ಪಡೆದ ಹೆಣ್ಣು ಮಗಳು ಪದವಿಯನ್ನು ಪಡೆದು ಹೊರಬರಲು ಅವಕಾಶವಿದೆ. ಆದ್ದರಿಂದ ಈಗ ಕಾಲೇಜು ನಡೆಯುತ್ತಿರುವ ಆವರಣದಲ್ಲಿಯೇ ಕಾಲೇಜಿಗೆ ನಿವೇಶನ ಹಾಗೂ ಕಟ್ಟಡವನ್ನು ಒದಗಿಸಿ ಕೊಡಬೇಕಾಗಿ ರಮೇಶ್ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕಿಶ್ಬಾನು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಲೀಂಪಾಷಾ, ಕಲಗೋಡು ರತ್ನಾಕರ್, ದೇವಿಕುಮಾರ್ ವಿಜಯಕುಮಾರ್ ಯು. ಶಿವಾನಂದ, ಜಿ.ಡಿ. ಮಂಜುನಾಥ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















