ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಭಿವ್ಯಕ್ತಿ ಟ್ರಸ್ಟ್ನಿಂದ ಮೇ9 ಮತ್ತು 10ರಂದು ಕರ್ನಾಟಕ ಸಂಘದಲ್ಲಿ ಅಕ್ಷರಗಳ ಸಂಭ್ರಮ ಶಿವಮೊಗ್ಗ ಸಾಹಿತ್ಯ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿನ ಮುಖ್ಯಸ್ಥ ಡಾ.ಸುಧೀಂದ್ರ ಪಿ.ಆರ್. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ವಿಶಿಷ್ಠ ರೀತಿಯ ಸಾಹಿತ್ಯ ಕಾರ್ಯಕ್ರಮವಾಗಿದೆ. ಈ ಸಾಹಿತ್ಯಹಬ್ಬದಲ್ಲಿ ಚರ್ಚಾಗೋಷ್ಠಿಗಳು, ಸಾಹಿತ್ಯ ಸಂವಾದ, ಕವಿಗೋಷ್ಠಿ, ಲೇಖಕರೊಂದಿಗೆ ಸಂವಾದ, ಪುಸ್ತಕ ಮಾರಾಟ, ಕೇಳುಗರೊಂದಿಗೆ ಮಾತು ಮುಂತಾದ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
Also read: ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ರಿವರ್ ಸ್ಟೋರ್ಗೆ ಮಾಜಿ ಡಿಸಿಎಂ ಈಶ್ವರಪ್ಪ ಚಾಲನೆ
ಮೇ.9ರ ಶನಿವಾರ ಸಂಜೆ ಉದ್ಘಾಟನಾಗೋಷ್ಠಿ-1ರಲ್ಲಿ ಭಾರತೀಯ ಸಾಹಿತ್ಯದಲ್ಲಿ ರಸಧ್ವನಿ ಔಚಿತ್ಯ ಕಾರ್ಯಕ್ರಮವಿರುತ್ತದೆ. ಸಂವಾದನಾಕಾರರಾಗಿ ಡಾ.ಎಸ್.ಆರ್.ಲೀಲಾ, ಸೂರ್ಯಪ್ರಕಾಶ್ ಪಂಡಿತ್ ಭಾಗವಹಿಸುತ್ತಾರೆ. ಸಂಜೆ 7ಗಂಟೆಗೆ ನಾದೋಲ್ಲಾಸ ವಿಶೇಷ ವಯಲಿನ್ ಕಾರ್ಯಕ್ರಮವಿರುತ್ತದೆ. ಭಾನುವಾರ ಬೆಳಿಗ್ಗೆ 10ಗಂಟೆಗೆ ಗೋಷ್ಠಿ-2ರಲ್ಲಿ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಸಮನ್ವಯತೆ ಕುರಿತು ಸಂವಾದ ಇದೆ. ಟಿ.ಎಲ್.ಪ್ರವೀಣ್, ಅಶ್ವಿನಿದೇಸಾಯ್, ರೋಹಿತ್ ಚಕ್ರತೀರ್ಥ ಭಾಗವಹಿಸುತ್ತಾರೆ. 11 ಗಂಟೆಗೆ ಭೈರಪ್ಪನವರ ಸಾಹಿತ್ಯ ಕನ್ನಡ ಓದುಗ ವಲಯವನ್ನು ಉಳಿಸಿ-ಬೆಳೆಸಿದ ಪರಿ ಗೋಷ್ಠಿ, 12ಕ್ಕೆ ಅಕ್ಕ ಅಲ್ಲಮ ಅರಿವಿನ ಆಯಾಮಗಳು ಗೋಷ್ಠಿ ಹಾಗೂ ಮಧ್ಯಾಹ್ನ 2ಗಂಟೆಗೆ ಪರಿಸರ ಅವ್ಯಕ್ತ ವಿಸ್ಮಯಗಳ ಆಗರ ಗೋಷ್ಠಿ ಇರುತ್ತದೆ. ಹಾಗೆಯೇ ಮಧ್ಯಾಹ್ನ 3.30ಕ್ಕೆ ಸಾಮಗಾನ ಜಿ.ಎಸ್.ಕಾವ್ಯಸಂವಾದ ಇರುತ್ತದೆ. 4.30ಕ್ಕೆ ಸಮಾರೋಪ ಗೋಷ್ಠಿ, 7ರಲ್ಲಿ ಕಲೆ ಮತ್ತು ಸಾಹಿತ್ಯದಿಂದ ಸಾಮಾಜಿಕ ಸ್ವಾಥ್ಯ ಕುರಿತು ಗೋಷ್ಠಿಯಿದ್ದು, ಸಂವಾದಕಾರರಾಗಿ ರೋಹಿತ್ ಚಕ್ರವರ್ತಿ, ಸಹನಾ ವಿಜಯಕುಮಾರ್, ಎಂ.ಆರ್. ದತ್ತಾತ್ರಿ, ಸಮನ್ವಯಕಾರರಾಗಿ ಡಾ.ಅಜಕ್ಕಳ ಗಿರೀಶ್ಭಟ್ ಇರುತ್ತಾರೆ ಎಂದರು.
ಶಿವಮೊಗ್ಗ ಲಿಟ್ ಫೆಸ್ಟ್ ಎಂಬ ಪರಿಕಲ್ಪನೆಯನ್ನು ಮಲೆನಾಡಿನ ಈ ನೆಲದಲ್ಲಿ ಭಾರತೀಯ ಮೌಲ್ಯಗಳನ್ನು ಹೆಚ್ಚಿಸುವ ಹಾಗೂ ಭಾರತೀಯ ಕಲ್ಪನೆಗಳನ್ನು ಪ್ರತಿಪಾದಿಸುವ ಸಾಹಿತ್ಯದ ಹಬ್ಬವಾಗಿ ಇದನ್ನು ಆಯೋಜಿಸಲಾಗಿದೆ. ಇದು ಹೊಸ ಚಿಂತನೆಗೆ ದಾರಿಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಯ್ ಶಿವಮೊಗ್ಗ, ದುರ್ಗಾಪ್ರಸಾದ್, ಡಾ.ರಂಜನಿ ಬಿದರಳ್ಳಿ, ನವೀನ್ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 













Comments 1