ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅರಮನೆ ನಗರಿ ಮೈಸೂರಿನಲ್ಲಿ ಶ್ರೀ ಸತ್ಯಾತ್ಮ ದಿಗ್ವಿಜಯ
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ‘ಮೈಸೂರು ದಿಗ್ವಿಜಯ’
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾರಥ್ಯ
ಮೇ 17ರಿಂದ ಜೂನ್ 15ರ ವರೆಗೆ 33 ದಿನಗಳ ಕಾಲವೂ ವೈಭವೋಪೇತ ಕಾರ್ಯಕ್ರಮ
ಮೇ 14 ರಂದು ಶ್ರೀ ಸತ್ಯಾತ್ಮ ತೀರ್ಥರ ಗುರುಗಳ ಪುರ ಪ್ರವೇಶ
ಜೂನ್ 13 ರಂದು ಶ್ರೀನಿವಾಸ ಕಲ್ಯಾಣೋತ್ಸವ
ಪ್ರತಿದಿನ ಸಂಜೆ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾರಥ್ಯದಲ್ಲಿ ಅರಮನೆ ನಗರಿ ಮೈಸೂರಿನಲ್ಲಿ 33 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಸರಣಿ ‘ಮೈಸೂರು ದಿಗ್ವಿಜಯ’ ಆಯೋಜನೆಗೊಂಡಿದೆ.
ಮೇ 17ರಿಂದ ಜೂನ್ 15ರ ವರೆಗೆ ನಗರದ ಅಗ್ರಹಾರದಲ್ಲಿ ಇರುವ ಶ್ರೀ ಧನ್ವಂತರಿ ಕ್ಷೇತ್ರ (ಶ್ರೀ ಸತ್ಯ ಸಂಕಲ್ಪರು ಮತ್ತು ಶ್ರೀ ಸತ್ಯ ಸಂತುಷ್ಟ ತೀರ್ಥರ ಮೂಲ ವೃಂದಾವನ ಸನ್ನಿಧಾನ) ಶ್ರೀ ಉತ್ತರಾದಿ ಮಠದಲ್ಲಿ #UttaradiMatha ಶ್ರೀಗಳಿಂದ ಶ್ರೀ ಮೂಲ ರಾಮ ದೇವರ ಸಂಸ್ಥಾನ ಪೂಜಾದಿಗಳು ನೆರವೇರಲಿವೆ. ಅಧಿಕ ಮಾಸದ ವಿಶೇಷ ಹೋಮ, ಹವನಾದಿಗಳು ಸಂಪನ್ನಗೊಳ್ಳಲಿವೆ. 33 ದಿನಗಳ ಕಾಲವೂ ವೈಭವೋಪೇತ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಉತ್ತರಾದಿ ಮಠದ ಮೈಸೂರು ಶಾಖೆ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ತಿಳಿಸಿದ್ದಾರೆ.
Also Read>> ಯಶವಂತಪುರ-ತಾಳಗುಪ್ಪ ವೀಕ್ಲಿ ಎಕ್ಸ್’ಪ್ರೆಸ್ ಇನ್ಮುಂದೆ ಪರಮ್ನೆಂಟ್ | ರೈಲು ಸಂಖ್ಯೆ ಬದಲು
ಬೃಹತ್ ಮೆರವಣಿಗೆ
ಮೈಸೂರು ದಿಗ್ವಿಜಯ-ಅಧಿಕ ಮಾಸದ ಕಾರ್ಯಕ್ರಮ ಸರಣಿ ಆರಂಭೋತ್ಸವದ ಅಂಗವಾಗಿ ಮೇ 14 ರಂದು ಶ್ರೀ ಸತ್ಯಾತ್ಮ ತೀರ್ಥರ #SatyatmaThirthaSwamiji ಗುರುಗಳ ಪುರ ಪ್ರವೇಶ, ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
14ರಂದು ಸಂಜೆ 4.30ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಿಂದ ಅಗ್ರಹಾರದ ಧನ್ವಂತರಿ ಕ್ಷೇತ್ರ ಉತ್ತರಾದಿ ಮಠದ ವರೆಗೆ ಹಲವು ಕಲಾತಂಡಗಳೊಂದಿಗೆ ಪಲ್ಲಕ್ಕಿ ಸಹಿತ ಮೆರವಣಿಗೆ ನಡೆಯಲಿದೆ. 33 ದಿನಗಳ ಕಾರ್ಯಕ್ರಮಕ್ಕೆ ಶ್ರೀ ಸತ್ಯಾತ್ಮ ತೀರ್ಥರನ್ನು ವೈಭವದಿಂದ ಬರಮಾಡಿಕೊಳ್ಳಲಾಗುವುದು. ಮೆರವಣಿಗೆಯಲ್ಲಿ ನಾದಸ್ವರ, ವೀರಗಾಸೆ ಕುಣಿತ, ಚಂಡೆ ನಗಾರಿ, ಡೊಳ್ಳು, ಬೊಂಬೆ ವೇಷ, ಕಂಸಾಳೆ, ಚೆನ್ನೈನ ಚಿತ್ತಾರದ ಆನೆ ಹಾಗೂ ವಿವಿಧ ಭಜನಾ ಮಂಡಳಿಗಳು ಇರಲಿವೆ.
ನಂತರ ಉಡುಪಿಯ ತಂಡದಿಂದ ಬಾಣ ಬಿರುಸು ಪ್ರದರ್ಶನವಿದೆ. ಮೆರವಣಿಗೆಯಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ.ಹರೀಶ್ಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ಕುಮಾರ್, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಇತರರು ಭಾಗವಹಿಸಲಿದ್ದಾರೆ.
17ರಂದು ಉದ್ಘಾಟನೆ
ಅಧಿಕ ಮಾಸದ ಅಂಗವಾಗಿ ಅಗ್ರಹಾರ ಮುಖ್ಯ ರಸ್ತೆಯಲ್ಲಿರುವ ಶ್ರೀ ರುದ್ರ ದೇವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಮೇ 17ರಂದು ‘ಮೈಸೂರು ದಿಗ್ವಿಜಯ’ ಅಧಿಕ ಮಾಸೋತ್ಸವ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಗರದ ಗಣ್ಯರು, ಪಂಡಿತರು ಭಾಗವಹಿಸಲಿದ್ದಾರೆ. ಮೇ 18 ರಿಂದ ಜೂನ್ 15ರ ವರೆಗೆ ನಿತ್ಯವೂ ಸಂಜೆ 5.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ನಂತರ ಶ್ರೀ ಸತ್ಯಾತ್ಮ ಶ್ರೀಗಳಿಂದ ಅಮೃತೋಪದೇಶವಿದೆ.
ಸಂಜೆ ಸಾಂಸ್ಕೃತಿಕ ವೈವಿಧ್ಯ
ಮೇ 18ರಂದು ವಿದ್ವಾನ್ ಪ್ರಸನ್ನ ಗುಡಿ ಅವರಿಂದ ದಾಸವಾಣಿ, 19ರಂದು ವಿದುಷಿ ವಿದ್ಯಾ ತಡಕೋಡ ಅವರಿಂದ ಹರಿಕಥೆ, 20ರಂದು ದಾಸ ಲಹರಿ- ಜುಗಲ್ ಬಂದಿ: ಯುವ ಪ್ರತಿಭೆಗಳಾದ ಕೌಸಲ್ಯಾ ರಘುರಾಮ ಮತ್ತು ಎ.ಆರ್. ಅಪ್ರಮೇಯ ಅವರಿಂದ ಗಾಯನ ನೆರವೇರಲಿದೆ.
21 ರಂದು ಮೈಸೂರಿನ ವಿದುಷಿ ಡಾ. ತುಳಸಿ ರಾಮಚಂದ್ರ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ, 22ರಂದು ವಿದುಷಿ ಸ್ಮಿತಾ ಕಿರಣರಿಂದ ವೇಣುವಾದನ, 23 ರಂದು ಸಂವಾದ ಗೋಷ್ಠಿ ನೆರವೇರಲಿದೆ. ವಿದ್ವಾಂಸರಾದ ಅರುಣಾಚಾರ್ಯ, ಪ್ರವೀಣ ಆಚಾರ್ಯ, ಭೀಮಸೇನಾಚಾರ್ಯ ಕುಲಕರ್ಣಿ ಮತ್ತು ರವಿ ಆಚಾರ್ಯ ಮತ್ತಿಹಳ್ಳಿ ಭಾಗವಹಿಸಲಿದ್ದಾರೆ.
Also Read>> ಹರಿಹರ-ಹೊಸಪೇಟೆ, ಧಾರವಾಡ-ಬೆಂಗಳೂರು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ
24 ರಂದು ಖ್ಯಾತ ಕಲಾವಿದ ರಾಹುಲ್ ವೆಲ್ಲಾಳ್ ಅವರಿಂದ ದಾಸವಾಣಿ, 25 ರಂದು ಸತ್ಯಾತ್ಮಾ ಬ್ಯಾಂಡ್ನ ಕಲಾವಿದ ಮೋಹನ್ನೆಲಗೋಳ, ವಾದಿರಾಜ ಕಾಖಂಡಕಿ ಅವರಿಂದ ದಾಸವಾಣಿ ಇದೆ. ಮೇ 26ರಂದು ದಾಸ ಲಹರಿ – ಅನಂತ ರಾಜ್ ಮಿಸ್ತ್ರಿ ಮತ್ತು ದಿವ್ಯಾ ಗಿರಿಧರ ಅವರಿಂದ ಗಾಯನವಿದೆ. 27 ರಂದು ರೂಪಶ್ರೀ ಪ್ರಭಂಜನ ಅವರಿಂದ ದಾಸವಾಣಿ, 28 ರಂದು ಸುಮಂತ ವಸಿಷ್ಟರಿಂದ ದಾಸಾಂಜಲಿ, 29ರಂದು ಪಂಡಿತ ಆನಂದ ತೀರ್ಥ ಆಚಾರ್ಯರಿಂದ ವೇಣುಗಾನವಿದೆ.

ವಾರ್ಷಿಕೋತ್ಸವ
30 ರಂದು ಉತ್ತರಾದಿ ಮಠದ ದಾಸ ಸಾಹಿತ್ಯ ಅಧ್ಯಯನ ಸಂಸ್ಥೆ- ಸೌರಭ ವಿದ್ಯಾಲಯದ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ. ಕೊಪ್ಪಳದ ಪಂಡಿತ ಮತ್ತು ವಿದ್ಯಾಲಯದ ನೇತಾರ ಪ್ರಮೋದ ಆಚಾರ್ಯ ಪೂಜಾರ ನೇತೃತ್ವ ವಹಿಸಲಿದ್ದಾರೆ. 31 ರಂದು ಖ್ಯಾತ ಗಾಯಕ ವಿದ್ವಾನ್ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ರಂಜಿಸಲಿದೆ.
ಜೂನ್ 1 ರಂದು ರಜತ ಕುಲಕರ್ಣಿ ಅವರಿಂದ ದಾಸರಂಜನಿ, 2 ರಂದು ನರ್ತಕಿಯರಾದ ಭಾವನಾ ಮತ್ತು ಭೂಮಿಕಾ ಅವರಿಂದ ಭಾರತನಾಟ್ಯ, 3 ರಂದು ವಿದುಷಿ ಲಕ್ಷ್ಮಿ ಬೆಳ್ಮಣ್ಣು ಅವರಿಂದ ದಾಸಾಂಜಲಿ, 4 ರಂದು ಖ್ಯಾತ ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ದಾಸವಾಣಿ ವಿಜೃಂಭಿಸಲಿದೆ.

ನಾಟಕ ಪ್ರದರ್ಶನ
5 ರಂದು ‘ವಿಜಯಾಗ್ರಜ ಜಯ ನಾಟಕವು ಮೈಸೂರಿನ ಯುವಾತ್ಮಾ ತಂಡದಿಂದ ಪ್ರದರ್ಶನಗೊಳ್ಳಲಿದೆ. 6 ರಂದು ಖ್ಯಾತ ವಿದ್ವಾನ್ ರಾಯಚೂರು ಶೇಷಗಿರಿ ದಾಸರಿಂದ ದಾಸಾಂಜಲಿ ಮೊಳಗಲಿದೆ.
7 ರಂದು ವಿದ್ವಾನ್ ಶ್ರೀಬಾಲು ಮಾಸ್ತಿ ಅವರಿಂದ ವೀಣಾ ವಾದನ, 8 ರಂದು ಪಂಡಿತ ವ್ಯಾಸ ತೀರ್ಥಾಚಾರ್ಯರಿಂದ ಭರತನಾಟ್ಯ, 9ರಂದು ವಿದುಷಿಯರಾದ ಭಾರತೀ ಸಮೀರ, ಇಂದಿರಾ ವಾದಿರಾಜರಿಂದ ದಾಸ ಲಹರಿ, 10 ರಂದು ಪಂಡಿತ ಕೊರ್ಲಹಳ್ಳಿ ಶ್ರೀನಿವಾಸ ಆಚಾರ್ಯ ಮತ್ತು ಸುಧಾ ತಂಡದಿಂದ ವೀಣಾ ವಾದನ, 11 ರಂದು ಗುಂಡಾಚಾರ್ಯ ಮತ್ತು ಜಯಸಿಂಹರಿಂದ ದಾಸವಾಣಿ ಇದೆ.

ಸಂಗೀತಾ ಕಟ್ಟಿ ಗಾಯನ
ಜೂನ್ 12ರಂದು ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಂದ ದಾಸಾಂಜಲಿ, 13 ರಂದು ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ. 14 ರಂದು ಸುಧಾಂಶು ಕಟ್ಟಿ ಮತ್ತು ಶ್ರೇಷ್ಠ ಕೌಲಗಿ ಅವರಿಂದ ಬಾನ್ಸುರಿ- ಸಂತೂರ್ ವಾದನವಿದೆ. 15 ರ ಸಂಜೆ ಅಧಿಕ ಮಾಸೋತ್ಸವ ಸಮಾರೋಪ ಸಮಾರಂಭವಿದೆ. ಉತ್ಸವ ಪರ್ಯಂತ ಸೇವ ಸಲ್ಲಿಸಿದವರಿಗೆ ಗೌರವಾರ್ಪಣೆ, ಶ್ರೀ ಸತ್ಯಾತ್ಮ ಶ್ರೀಗಳಿಂದ ಅನುಗ್ರಹ ಸಂದೇಶವಿದೆ.
ಸುವ್ಯವಸ್ಥೆ
ಪರ ಸ್ಥಳಗಳಿಂದ ಬರುವ ಭಕ್ತರಿಗೆ ವಸತಿ ಇತ್ಯಾದಿಗಳ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮಠದ ಕೌಂಟರಿನಲ್ಲಿ ಮಾಹಿತಿ ಪಡೆಯಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















