ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶದ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಿರುವ ಟಾಟಾ ಮೋಟಾರ್ಸ್ ಫೌಂಡೇಶನ್, Tata Motors Foundation ತನ್ನ ಹೆಮ್ಮೆಯ ಸಮಗ್ರ ಗ್ರಾಮ ವಿಕಾಸ ಯೋಜನೆಯನ್ನು (ಐವಿಡಿಪಿ) ದೇಶಾದ್ಯಂತ 5 ರಾಜ್ಯಗಳ 103 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 200 ಹಳ್ಳಿಗಳಿಗೆ ಯಶಸ್ವಿಯಾಗಿ ವಿಸ್ತರಿಸಿದೆ. ಈ ಮೂಲಕ ದೇಶದ ಅತ್ಯಂತ ಹಿಂದುಳಿದ ಬುಡಕಟ್ಟು ವಲಯಗಳು ಮತ್ತು ಕೃಷಿ ಪ್ರಧಾನ ಹಳ್ಳಿಗಳಲ್ಲಿ ಸಮುದಾಯದ ನೇತೃತ್ವದಲ್ಲೇ ಸುಧಾರಣೆ ತರುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ.
ಕಳೆದ 2025-26ರ ಆರ್ಥಿಕ ವರ್ಷವೊಂದರಲ್ಲೇ ಈ ಕಾರ್ಯಕ್ರಮವು 1,15,000 ಕ್ಕೂ ಹೆಚ್ಚು ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಗ್ರಾಮೀಣ ಭಾಗದಲ್ಲಿ ತಳಮಟ್ಟದ ಆಡಳಿತವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸಂಪನ್ಮೂಲಗಳು ಜನರಿಗೆ ಸುಲಭವಾಗಿ ತಲುಪುವಂತೆ ಮಾಡಲು ₹20 ಕೋಟಿ ಮೌಲ್ಯದ 50 ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಈ ಕಾರ್ಯಕ್ರಮದ ಅಡಿಯಲ್ಲಿ ಯಶಸ್ವಿಯಾಗಿ ಸಂಯೋಜಿಸಲಾಗಿದೆ.
ಕಳೆದ 2018 ರಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಜವ್ಹಾರ್ ಎಂಬ ಬುಡಕಟ್ಟು ತಾಲೂಕಿನ ಒಂದೇ ಒಂದು ಗ್ರಾಮ ಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಈ ಯೋಜನೆ, ಇಂದು ದೇಶಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಸಮುದಾಯದ ಸ್ವಾವಲಂಬನೆಗೆ ಒಂದು ಅತ್ಯುತ್ತಮ ರಾಷ್ಟ್ರೀಯ ಮಾದರಿಯಾಗಿ ಹೊರಹೊಮ್ಮಿದೆ. ಸುಸ್ಥಿರ ಅಭಿವೃದ್ಧಿ ಎಂದರೆ ಕೇವಲ ಸಿಮೆಂಟ್, ಕಾಂಕ್ರೀಟ್ ನ ಮೂಲಸೌಕರ್ಯಗಳನ್ನು ನಿರ್ಮಿಸುವುದಲ್ಲ; ಬದಲಿಗೆ ಸರ್ಕಾರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ತಾವಾಗಿಯೇ ಪಡೆದುಕೊಂಡು, ಬಳಸಿಕೊಳ್ಳುವಂತೆ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವುದೇ ನಿಜವಾದ ಪ್ರಗತಿ ಎಂಬ ತತ್ವದ ಆಧಾರದ ಮೇಲೆ ಇವಿಡಿಪಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಕಲ್ಯಾಣ ಯೋಜನೆಗಳ ವ್ಯಾಪ್ತಿ ವಿಸ್ತಾರವಾಗಿದ್ದರೂ, ಸೂಕ್ತ ಮಾಹಿತಿ ಅಥವಾ ದಾಖಲೆಗಳ ಕೊರತೆಯಿಂದಾಗಿ ಹಳ್ಳಿಗಳ ಕೊನೆಯ ವ್ಯಕ್ತಿಗೆ ಸೌಲಭ್ಯಗಳು ತಲುಪುತ್ತಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಮುಂದಾಗಿರುವ ಐವಿಡಿಪಿ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮತ್ತು ದಾಖಲಾತಿಗಳ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಹಳ್ಳಿಗಳು ದೀರ್ಘಾವಧಿಯಲ್ಲಿ ಯಾರಿಗೂ ಕಾಯದೆ, ಸ್ವತಂತ್ರವಾಗಿ ತಮ್ಮ ಪ್ರಗತಿಯನ್ನು ಕಾಯ್ದುಕೊಳ್ಳುವ ಆಡಳಿತಾತ್ಮಕ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ನೆರವಾಗಿದೆ.
ತನ್ನ ಸಮಗ್ರ ವಿಧಾನದ ಯಶಸ್ಸನ್ನು ಸಾಬೀತುಪಡಿಸಿರುವ ಈ ಯೋಜನೆಯು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಗಮನಾರ್ಹ ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ತಂದಿದೆ. ಈ ಯೋಜನೆಯಡಿ ಒಳಪಡುವ ಹಳ್ಳಿಗಳಲ್ಲಿ ಕಾಲೋಚಿತ ವಲಸೆಯು ಶೇ. 80 ರಿಂದ ಶೇ. 25 ಕ್ಕೆ ಕುಸಿದಿದೆ. ಅಷ್ಟೇ ಅಲ್ಲದೆ, ರೈತರ ಆದಾಯದಲ್ಲಿ ಶೇ. 55 ರಷ್ಟು ಹೆಚ್ಚಳವಾಗಿದ್ದು, ಮಕ್ಕಳ ಅಪೌಷ್ಟಿಕತೆ ಪ್ರಮಾಣದಲ್ಲಿ ಶೇ. 95 ರಷ್ಟು ಅಭೂತಪೂರ್ವ ಇಳಿಕೆ ಕಂಡುಬಂದಿದೆ. ಈ ಮಹತ್ತರ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಟಾಟಾ ಮೋಟಾರ್ಸ್ ಫೌಂಡೇಶನ್, ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ವಿವಿಧ ರಾಜ್ಯಗಳ ಹಿಂದುಳಿದ ಹಾಗೂ ಮಹತ್ವಾಕಾಂಕ್ಷಿ ಜಿಲ್ಲೆಗಳಿಗೆ ಐವಿಡಿಪಿ ಯೋಜನೆಯನ್ನು ವಿಸ್ತರಿಸಿದೆ.
ಮಹಾರಾಷ್ಟ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿರುವ ಐವಿಡಿಪಿ 2.0 ಯೋಜನೆಯ ಮೂಲಕ ಟಾಟಾ ಮೋಟಾರ್ಸ್ ಫೌಂಡೇಶನ್ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ನೆರವಿನಿಂದ ಈ ಕಾರ್ಯಕ್ರಮವನ್ನು 82 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸುತ್ತಿದೆ. ಈ ಮೂಲಕ ಕೇವಲ ಯೋಜನೆಯ ಅನುಷ್ಠಾನಕ್ಕಷ್ಟೇ ಸೀಮಿತವಾಗದೆ, ಸರ್ಕಾರದ ನೀತಿಗಳಿಗೆ ಪೂರಕವಾಗಿ ಹಾಗೂ ವ್ಯವಸ್ಥಿತ ಪರಿವರ್ತನೆಗೆ ಕಾರಣವಾಗುವಂತಹ ಜಂಟಿ ಸಹಭಾಗಿತ್ವದ ಮಾದರಿಯನ್ನು ರೂಪಿಸಲಾಗುತ್ತಿದೆ.
ಯೋಜನೆಯ ವಿಸ್ತರಣೆಯ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಕುಲಕರ್ಣಿ ಅವರು, “ದೇಶದಾದ್ಯಂತ ಸುಮಾರು 200 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಮಗ್ರ ಗ್ರಾಮ ವಿಕಾಸ ಯೋಜನೆಯು (ಐವಿಡಿಪಿ), ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಅರ್ಥಪೂರ್ಣ ಬದಲಾವಣೆ ತರುವಲ್ಲಿ ಸರ್ಕಾರಿ ಯೋಜನೆಗಳ ಸಂಯೋಜನೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ಸಮುದಾಯದ ಮಾಲೀಕತ್ವದ ಶಕ್ತಿಯನ್ನು ಸಾಬೀತುಪಡಿಸಿದೆ. ಸುಸ್ಥಿರ ಗ್ರಾಮೀಣಾಭಿವೃದ್ಧಿಯು ಸಮುದಾಯದ ನೇತೃತ್ವದ ಹಾಗೂ ವ್ಯವಸ್ಥಿತ ಪ್ರಕ್ರಿಯೆಯಾಗಿರಬೇಕು ಎಂಬ ನಮ್ಮ ನಂಬಿಕೆಯನ್ನು ಇದು ಸ್ಪಷ್ಟಪಡಿಸಿದೆ. ಇದಕ್ಕಾಗಿ ನಾವು ಏಳು ಹಂತಗಳ ವಿಶೇಷ ಕಾರ್ಯವಿಧಾನವನ್ನು ರೂಪಿಸಿದ್ದೇವೆ, ಅದೇನೆಂದರೆ ಅಡೆತಡೆಗಳನ್ನು ಗುರುತಿಸುವುದು, ಸರಿ ಮಾಡಬಹುದಾದ ಅಂಶವನ್ನು ಕಂಡುಕೊಳ್ಳುವುದು, ಸಾಮರ್ಥ್ಯ ಬೆಳೆಸುವ ಮುನ್ನ ಆತ್ಮವಿಶ್ವಾಸ ಮೂಡಿಸುವುದು, ಜಂಟಿ ಮಾಲೀಕತ್ವ ಜವಾಬ್ದಾರಿ ಒದಗಿಸುವುದು, ಕಾರ್ಪೊರೇಷನ್ ಅನ್ನು ಕೇವಲ ಹಣಕಾಸು ನೆರವು ನೀಡುವ ಸಂಸ್ಥೆಯಾಗಿ ಮಾಡದೆ ಬದಲಾವಣೆಯ ವಾಸ್ತುಶಿಲ್ಪಿಯನ್ನಾಗಿ ರೂಪಿಸುವುದು, ಮೊದಲ ದಿನದಿಂದಲೇ ಹಂತಹಂತವಾಗಿ ಯೋಜನೆಯಿಂದ ಹೊರಬರುವಂತೆ ಕಾರ್ಯತಂತ್ರ ರೂಪಿಸುವುದು ಮತ್ತು ಇಡೀ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದು. ನಾವು ವಿಸ್ತರಣೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ನೀತಿಗಳು ಮತ್ತು ಕಲ್ಯಾಣ ಯೋಜನೆಗಳಲ್ಲಿ ಅಂತರ್ಗತವಾಗಿರುವ, ಸುಲಭವಾಗಿ ವಿಸ್ತರಿಸಬಹುದಾದ ಹಾಗೂ ಇತರ ಕಡೆಗಳಲ್ಲೂ ಅಳವಡಿಸಬಹುದಾದ ಗ್ರಾಮೀಣಾಭಿವೃದ್ಧಿ ಮಾದರಿಯನ್ನು ಅಭಿವೃದ್ಧಿಪಡಿಸುವುದರ ಕಡೆಗೇ ನಮ್ಮ ಗಮನ ಮುಂದುವರಿಯುತ್ತದೆ,” ಎಂದು ತಿಳಿಸಿದರು.
ಗ್ರಾಮೀಣ ಭಾಗದ ಕಾಂಕ್ರೀಟ್ ಮೂಲಸೌಕರ್ಯಗಳನ್ನು ಬಲಪಡಿಸುವುದನ್ನು ಹೊರತುಪಡಿಸಿ, ಐವಿಡಿಪಿ ಯೋಜನೆಯು ಪ್ರಮುಖವಾಗಿ ಗ್ರಾಮೀಣ ಸಂಸ್ಥೆಗಳ ಬಲವರ್ಧನೆ ಮತ್ತು ಕೊನೆಯ ಮೈಲಿಗಲ್ಲಿನವರೆಗೂ ಸೇವೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಸುಧಾರಿಸಲು ಹೆಚ್ಚಿನ ಒತ್ತು ನೀಡುತ್ತದೆ. ಉತ್ತರ ಪ್ರದೇಶದ ಶ್ರಾವಸ್ತಿ ಮತ್ತು ಬಲರಾಮ್ ಪುರದಂತಹ ಆಕಾಂಕ್ಷಿ ಜಿಲ್ಲೆಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವು ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಲಭ್ಯತೆಯನ್ನು ಸುಲಭಗೊಳಿಸಿವೆ ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿವೆ. ಇದರೊಂದಿಗೆ, ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗಿರುವ ಇ-ದೋಸ್ತ್ ನಂತಹ ಯೋಜನೆಗಳು ಗ್ರಾಮೀಣ ಸಮುದಾಯಗಳಿಗೆ ಡಿಜಿಟಲ್ ವೇದಿಕೆಗಳ ಬಳಕೆಯನ್ನು ಸುಲಭವಾಗಿಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಮತ್ತು ಗ್ರಾಮೀಣ ಭಾಗದಲ್ಲಿನ ಡಿಜಿಟಲ್ ಕಂದಕವನ್ನು ಯಶಸ್ವಿಯಾಗಿ ನೀಗಿಸುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















