ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ಜಿಲ್ಲೆಯ ನವನಗರದ ಸೆಕ್ಟರ್ ನಂ. 38ರಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಎದುರಿನ ಮನೆಯ ನೀರಿನ ಸಂಪ್ಗೆ ಬಿದ್ದು 18 ತಿಂಗಳ ಹೆಣ್ಣು ಮಗು ಮೃತಪಟ್ಟಿದೆ. ಮೃತ ಮಗುವನ್ನು ಅಮೀನಾ ಪಟಾಣ್ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೆರೆಮನೆಯ ನೀರಿನ ಸಂಪ್ಗೆ ಬಿದ್ದಿದೆ. ಈ ಘಟನೆ ತಡವಾಗಿ ಗಮನಕ್ಕೆ ಬಂದಿದ್ದು, ಅಷ್ಟರಲ್ಲೇ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಢನಂಬಿಕೆಯ ನೆರಳಿನಲ್ಲಿ ವಿಲಕ್ಷಣ ಪ್ರಯತ್ನ
ಮಗುವಿನ ಸಾವನ್ನು ಒಪ್ಪಿಕೊಳ್ಳಲಾರದ ಪೋಷಕರು ಮತ್ತು ಕುಟುಂಬಸ್ಥರು, ಆಕೆಯನ್ನು ಬದುಕಿಸಲು ಮೂಢನಂಬಿಕೆಯ ಆಶ್ರಯ ಪಡೆದಿದ್ದಾರೆ. ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಳುಗಿಸಿದರೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆಯಿಂದ, ಮಗುವಿನ ದೇಹವನ್ನು ಸಂಪೂರ್ಣವಾಗಿ ಉಪ್ಪಿನಲ್ಲಿ ಮುಳುಗಿಸಿ, ಮುಖವನ್ನು ಮಾತ್ರ ಹೊರಗೆ ಬಿಟ್ಟಿದ್ದಾರೆ.
Also read: ಯಶವಂತಪುರ–ವಿಜಯಪುರ ವಿಶೇಷ ರೈಲು ವಾರದಲ್ಲಿ ಎರಡು ಬಾರಿ ಸಂಚಾರ; ಗದಗ ಬೈಪಾಸ್ ನಿಲುಗಡೆ ರದ್ದು
ಆಸ್ಪತ್ರೆಯಲ್ಲಿಯೂ ಮುಂದುವರಿದ ಪ್ರಯತ್ನ
ಮಗುವಿನ ಶವವನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ತರಲಾಗಿದ್ದರೂ, ಪೋಷಕರ ಪ್ರಯತ್ನ ನಿಂತಿಲ್ಲ. ಶವಾಗಾರ ಬಳಿಯೇ ಮಗುವನ್ನು ಉಪ್ಪಿನಲ್ಲಿ ಇಟ್ಟು, ಮೊಬೈಲ್ನಲ್ಲಿ ಕುರಾನ್ ಪ್ರಾರ್ಥನೆಗಳನ್ನು ಹಾಕಿ ಜೀವಂತಗೊಳಿಸಲು ಪ್ರಯತ್ನಿಸಿದ್ದಾರೆ.
ಈ ದೃಶ್ಯವನ್ನು ಕಂಡ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ. ಮಗುವಿಗೆ ಮತ್ತೆ ಜೀವ ಬರಬಹುದು ಎಂಬ ಭರವಸೆಯಲ್ಲಿ ಕುಟುಂಬಸ್ಥರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಇದೇ ರೀತಿ ಮುಂದುವರಿಸಿದ್ದಾರೆ.
ವೈದ್ಯರ ಮನವೊಲಿಕೆ – ಕೊನೆಗೂ ಒಪ್ಪಿಗೆ
ಅಂತಿಮವಾಗಿ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ಸಮಜಾಯಿಷಿ ನೀಡಿ ವೈದ್ಯಕೀಯ ಸತ್ಯಾಂಶವನ್ನು ತಿಳಿಹೇಳಿದ್ದಾರೆ. ಬಳಿಕ ಕುಟುಂಬಸ್ಥರು ಮಗುವಿನ ದೇಹವನ್ನು ಉಪ್ಪಿನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ.
ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಶವಪರೀಕ್ಷೆ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















