ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತವು #India ಪಾಕಿಸ್ತಾನ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ತನ್ನ ಆಂತರಿಕ ಸಮಸ್ಯೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳಿಂದ ಗಮನ ಹರಿಸಲು ಪಾಕಿಸ್ತಾನ ತಪ್ಪು ಮಾಹಿತಿ ಮತ್ತು ದಾರಿತಪ್ಪಿಸುವ ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದೆ.
ವಾರದ ಮಾಧ್ಯಮ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ #MEA ವಕ್ತಾರ ರಂಧೀರ್ ಜೈಸ್ವಾಲ್, #RandhirJaiswal ಪಾಕಿಸ್ತಾನವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ #PoJK ಪ್ರದೇಶದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮರೆಮಾಚಲು ಸುಳ್ಳು ಕಥಾನಕಗಳನ್ನು ಹರಡುತ್ತಿದೆ ಎಂದು ಆರೋಪಿಸಿದರು.
Also Read>> ಯಶವಂತಪುರ–ವಿಜಯಪುರ ವಿಶೇಷ ರೈಲು ವಾರದಲ್ಲಿ ಎರಡು ಬಾರಿ ಸಂಚಾರ; ಗದಗ ಬೈಪಾಸ್ ನಿಲುಗಡೆ ರದ್ದು
“ಪಾಕಿಸ್ತಾನದಿಂದ ನಕಲಿ ಸುದ್ದಿ ಮತ್ತು ವಿಡಿಯೋಗಳ ಹರಿವು ಮುಂದುವರಿದಿದೆ. ಇದು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳಿಂದ ಗಮನ ತಿರುಗಿಸಲು ಮಾಡುವ ನಿರಾಶಾದಾಯಕ ಪ್ರಯತ್ನ,” ಎಂದು ಜೈಸ್ವಾಲ್ ಹೇಳಿದರು.
PoJK ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಆರ್ಥಿಕ ಸಂಕಷ್ಟ, ಆಡಳಿತ ಸಮಸ್ಯೆಗಳು ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ವೇಳೆ ಪೊಲೀಸ್ ಹಿಂಸಾಚಾರದ ಆರೋಪಗಳೂ ಕೇಳಿಬಂದಿವೆ ಎಂದು ಹೇಳಿದರು.
“ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಪೊಲೀಸ್ ಹಿಂಸಾಚಾರದಲ್ಲಿ ಹಲವರು ಸಾವನ್ನಪ್ಪಿ, ಅನೇಕರಿಗೆ ಗಾಯಗಳಾಗಿವೆ ಎಂಬ ವರದಿಗಳು ಬರುತ್ತಿವೆ,” ಎಂದು ಅವರು ತಿಳಿಸಿದರು.
Also Read>> ಬಾಗಲಕೋಟೆ : ನೀರಿನ ಟ್ಯಾಂಕ್ಗೆ ಬಿದ್ದು 18 ತಿಂಗಳ ಮಗು ಸಾವು, ಉಪ್ಪಿನಲ್ಲಿಟ್ಟು ಬದುಕಿಸಲು ಪೋಷಕರ ಯತ್ನ
“ಈ ಬೆಳವಣಿಗೆಗಳನ್ನು ಅಂತರರಾಷ್ಟ್ರೀಯ ಸಮುದಾಯ ಗಮನಿಸಬೇಕು ಹಾಗೂ ಪಾಕಿಸ್ತಾನ ತನ್ನ ದುಷ್ಕೃತ್ಯಗಳಿಗೆ ಹೊಣೆ ಹೊರುವಂತೆ ಮಾಡಬೇಕು,” ಎಂದು ಜೈಸ್ವಾಲ್ ಹೇಳಿದರು.
ಇತ್ತೀಚಿನ ವರದಿಗಳ ಪ್ರಕಾರ, PoJK ಪ್ರದೇಶದ ಹಲವೆಡೆ ಬೆಲೆ ಏರಿಕೆ, ವಿದ್ಯುತ್ ಶುಲ್ಕ ಹೆಚ್ಚಳ, ಆಡಳಿತ ವೈಫಲ್ಯ ಹಾಗೂ ರಾಜಕೀಯ ಪ್ರತಿನಿಧಿತ್ವದ ಕೊರತೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿರುವ ಮಾಹಿತಿ ಇದೆ.
ಇನ್ನೊಂದೆಡೆ, ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕೂಡ ಭಾರತವು ಪಾಕಿಸ್ತಾನವನ್ನು ಟೀಕಿಸಿದೆ. ಅಫ್ಘಾನಿಸ್ತಾನ ಪರಿಸ್ಥಿತಿ ಕುರಿತು ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್ ಮಾತನಾಡಿ, ಪಾಕಿಸ್ತಾನ ತನ್ನದೇ ದೇಶದೊಳಗಿನ ಉಗ್ರ ಗುಂಪುಗಳನ್ನು “ಫಿತ್ನಾ ಅಲ್ ಹಿಂದೂಸ್ತಾನ್” ಎಂದು ಕರೆಯುತ್ತಿರುವುದನ್ನು ಖಂಡಿಸಿದರು.
“ಇದು ಧಾರ್ಮಿಕ ಪದಪ್ರಯೋಗವನ್ನು ಬಳಸಿ ಅಧಿಕೃತವಾಗಿ ತಪ್ಪು ಮಾಹಿತಿ ಹರಡುವ ಪ್ರಯತ್ನ. ಇದು ಪಾಕಿಸ್ತಾನದ ಆಂತರಿಕ ಸಮಸ್ಯೆಗಳಿಂದ ಗಮನ ಹರಿಸಲು ನಡೆಸುವ ಯತ್ನ,” ಎಂದು ಹರೀಶ್ ಹೇಳಿದರು.
ಅವರು ಪಾಕಿಸ್ತಾನದ ಅಫ್ಘಾನಿಸ್ತಾನದಲ್ಲಿನ ಸೈನಿಕ ಕ್ರಮಗಳನ್ನೂ ಟೀಕಿಸಿ, ನಾಗರಿಕರ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದರು.“ಹತ್ಯೆಯನ್ನು ಸೈನಿಕ ಕಾರ್ಯಾಚರಣೆ ಎಂದು ಕರೆಯುವುದರಿಂದ ತಪ್ಪು ಕಡಿಮೆಯಾಗುವುದಿಲ್ಲ. ನಾಗರಿಕರನ್ನು ಕೊಲ್ಲುವುದು ಭಯೋತ್ಪಾದನೆ ವಿರುದ್ಧದ ಕ್ರಮವಲ್ಲ,” ಎಂದು ಅವರು ಹೇಳಿದರು.
ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳಿಗೆ ನೆರೆ ದೇಶಗಳನ್ನು ಕಾರಣವೆಂದು ಆರೋಪಿಸುವ ಇತಿಹಾಸ ಹೊಂದಿದೆ ಎಂದು ಭಾರತದ ಪ್ರತಿನಿಧಿ ಅಭಿಪ್ರಾಯಪಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news




















