ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಬರಹ: ಶಿವಮೊಗ್ಗ ರಾಂ |
ನಗರದ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಉದಯೋನ್ಮುಖ ಪ್ರತಿಭೆ ರಜಿತಾ ದಿನೇಶ್ ಅವರು ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.
ಗುರು, ವಿದುಷಿ ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಜಿತಾ, ಜೂನ್ 12 ರಂದು ಭರತನಾಟ್ಯ ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ರಂಗಾರೋಹಣ ಮಾಡಲಿದ್ದು, ಕಲಾ ರಸಿಕರ ಸಮ್ಮುಖ ನೃತ್ಯದ ವಿವಿಧ ಆಯಾಮಗಳನ್ನು ಅನಾವರಣಗೊಳಿಸುತ್ತಿದ್ದಾರೆ.
ಇದುವರೆಗೆ ನಾನು 25- 30 ರಂಗಪ್ರವೇಶಗಳಿಗೆ ಯುವ ಕಲಾವಿದೆಯರನ್ನು ತರಬೇತುಗೊಳಿಸುವ ಕಾರ್ಯದಲ್ಲಿ ಗುರು ಸುಪರ್ಣಾ ಅವರಿಗೆ ಸಹಕರಿಸಿದ್ದೇನೆ. ನನಗೆ ಸದಾ ಕಲಿಕೆಯಲ್ಲೇ ಹಂಬಲ. ನನ್ನ ತಾಯಿಯ ಅಪೇಕ್ಷೆಯನ್ನು ನಾನು ಈಡೇರಿಸಿದ್ದೇನೆ. ನನ್ನ ಕನಸುಗಳನ್ನು ನನ್ನ ಮಗಳು ಸಂಪೂರ್ಣ ನೆರವೇರುವಂತೆ ಮಾಡುತ್ತಾಳೆಂಬ ಭರವಸೆ ಇದೆ.
-ವೀಣಾ, ನೃತ್ಯ ಶಿಕ್ಷಕಿ ಮತ್ತು ರಜಿತಾ ಅವರ ತಾಯಿ
ನೃತ್ಯ ಶಿಕ್ಷಕಿ, ವಿದುಷಿ ಸಿ. ವೀಣಾ ಮತ್ತು ಎಂ. ದಿನೇಶ್ ಕುಮಾರ್ ಅವರ ಪುತ್ರಿ ರಜಿತಾ ಇದೀಗ ಮಲ್ಲೇಶ್ವರದ ಕ್ಲೂನಿ ಕಾನ್ವೆಂಟ್ ಹೈಸ್ಕೂಲಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಎಳವೆಯಿಂದಲೇ ಭರತನಾಟ್ಯ ಕಲಿಕೆ ದೊರಕಿರುವುದು ಸೌಭಾಗ್ಯ. ತಾಯಿಯೇ ನೃತ್ಯ ಶಿಕ್ಷಕಿಯಾಗಿದ್ದು, ಗುರು ಸುಪರ್ಣಾ ವೆಂಕಟೇಶ ಅವರ ಗರಡಿಯಲ್ಲಿ ಮಗಳ ಕಲಿಕೆಗೆ ಅನುವು ಮಾಡಿಕೊಟ್ಟಿರುವುದು ಬಹು ವಿಶೇಷ.
ವಿದುಷಿ ಶ್ವೇತಾ ವೆಂಕಟೇಶ ಅವರಲ್ಲಿ ಕಥಕ್ ನೃತ್ಯದ ಪಟ್ಟುಗಳನ್ನೂ ಅಭ್ಯಾಸ ಮಾಡುತ್ತಿರುವ ರಜಿತಾ, ಈಗಾಗಲೇ ಗುರುವಿನೊಂದಿಗೆ ಹಲವು ವೇದಿಕೆಗಳಲ್ಲಿ ನೃತ್ಯ ಪ್ರಸ್ತುತಿ ಮಾಡಿದ್ದಾರೆ. ವಿದ್ವಾನ್ ಶರತ್ ಸುಬ್ರಹ್ಮಣ್ಯರ ಬಳಿ ನಟುವಾಂಗ ತರಬೇತಿ ಪಡೆದಿದ್ದಾರೆ. ಒಟ್ಟಾರೆ ಈಕೆ
ಒಬ್ಬ ಉದಯೋನ್ಮುಖ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನೂ ಈಗಾಗಲೇ ಪಡಮೂಡಿಸುತ್ತಿರುವುದು ಗಮನಾರ್ಹ ಅಂಶವಾಗಿದೆ.
ಯಾವುದೇ ಕಲೆಯನ್ನು ಆರಾಧನೆ ಮಾಡಬೇಕು ಎಂದರೆ ಮೊದಲು ಬದ್ಧತೆ ಬೇಕು. ನಿರಂತರ ಅಭ್ಯಾಸ ಬೇಕು. ಆಗ ಮಾತ್ರ ಕಲೆ ಸಹಜವಾಗಿಯೇ ಹೊರ ಬರುತ್ತದೆ. ನಾನು ನೃತ್ಯ ರಂಗದಲ್ಲಿ ಒಬ್ಬ ಉತ್ತಮ ವೇದಿಕೆ ಕಲಾವಿದೆ ಆಗಬೇಕು ಎಂದು ಬಯಸಿದ್ದೇನೆ. ಇದರೊಂದಿಗೆ ಶಾಲಾ ಶಿಕ್ಷಣವೂ ಮುಖ್ಯ. ರೋಬಾಟಿಕ್ಸ್ ನನ್ನ ಇಷ್ಟದ ಕ್ಷೇತ್ರ. ಇದರೊಂದಿಗೆ ನಮ್ಮ ಸಂಪ್ರದಾಯಗಳ ಬಗ್ಗೆಯೂ ವಿಶೇಷ ಗೌರವಾದರಗಳಿವೆ. ಉತ್ತಮವಾದ ಯಾವ ಸಂಗತಿಯನ್ನೂ ಬಿಡಬಾರದು. ನಮ್ಮದನ್ನಾಗಿ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಗುರು ಅನುಗ್ರಹ ಬೇಕೇ ಬೇಕು.
-ರಜಿತಾ ದಿನೇಶ್, ಯುವ ಕಲಾವಿದೆ
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದುಷಿ ಶುಭಾ ಶ್ರೀಧರ, ಕಲಾ ವಿಮರ್ಷಕ ಎಸ್. ನಂಜುಂಡ ರಾವ್ ಮತ್ತು ಐಸಿಎಟಿಟಿ ಫೌಂಡೇಷನ್ ಅಧ್ಯಕ್ಷೆ ಡಾ. ಶಾಲಿನಿ ನಲ್ವಾಡ್ ಆಗಮಿಸುತ್ತಿದ್ದಾರೆ.
ಹಿಮ್ಮೇಳ
ನಟುವಾಂಗದಲ್ಲಿ ಗುರು ಸುಪರ್ಣಾ, ಗಾಯನದಲ್ಲಿ ವಿದ್ವಾನ್ ನಂದಕುಮಾರ ಉನ್ನೀಕೃಷ್ಣನ್, ಕೊಳಲಿನಲ್ಲಿ ವಿದ್ವಾನ್ ವೇಣುಗೋಪಾಲ ಹೆಮ್ಮಿಗೆ, ಮೃದಂಗದಲ್ಲಿ ವಿದ್ವಾನ್ ಗುರುಮೂರ್ತಿ, ಪಿಟೀಲಿನಲ್ಲಿ ವಿದ್ವಾನ್ ಪ್ರಾದೇಶ ಆಚಾರ್ಯ, ರಿದಂ ಪ್ಯಾಡ್ನಲ್ಲಿ ವಿದ್ವಾನ್ ಪ್ರಸನ್ನ ಕುಮಾರ್ ಸಹಕಾರ ನೀಡಲಿದ್ದಾರೆಂದು ಸಂಸ್ಥೆ ನಿರ್ದೇಶಕ ಸಾಯಿ ವೆಂಕಟೇಶ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















