ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರಣ್ಯ ಸಂರಕ್ಷಣೆಗೆ ಅನೇಕ ಕಾಯ್ದೆ ಕಾನೂನುಗಳು ಇದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅತಿಕ್ರಮಣ ಸಕ್ರಮಾತಿ ಆಗುತ್ತದೆ ಎಂಬ ಭರವಸೆಗಳು ಮುಂತಾದವೇ ಅರಣ್ಯ-ಕೃಷಿ ಸಂಘರ್ಷಕ್ಕೆ ಕಾರಣ ಎಂದು ನಿವೃತ್ತ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ. ಅಣ್ಣಯ್ಯ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಒಂದು ದಿನದ ಮಲೆನಾಡು ಕೃಷಿ-ಅರಣ್ಯ ಸಂಘರ್ಷ ಮತ್ತು ಸಾಮರಸ್ಯ ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಬರೆದ ಪಶ್ಚಿಮ ಘಟ್ಟಗಳ ಅರಣ್ಯ-ಕೃಷಿ ಸಂಘರ್ಷ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಗುಜರಾತ್ನಿಂದ ಕರ್ನಾಟಕ ಮೂಲಕ ಕೇರಳಂವರೆಗೆ ಹಾದುಹೋದ ಪಶ್ಷಿಮಘಟ್ಟ ಸುಮಾರು 1600 ಕಿಲೋ ಮೀಟರ್ ಉದ್ದವಿದ್ದು, ಜಗತ್ತಿನ ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದೆ. ಜೀವ ವೈವಿಧ್ಯತೆ ಪ್ರಾಣಿ ಸಂಕುಲಗಳು, ಅರಣ್ಯ ಸಂಪತ್ತು ಇರುವ ಶಿವಮೊಗ್ಗ ಜಿಲ್ಲೆ ಒಂದು ಪುಣ್ಯಭೂಮಿಯಾಗಿದೆ. ಕಾನೂನು ಬಿಗಿಯಾಗಿದ್ದರೂ ಈ ಪ್ರದೇಶದಲ್ಲಿ ಪರಿಸರ ನಾಶ ಅವ್ಯಾಹತವಾಗಿ ನಡೆಯುತ್ತಿದೆ. 1963ರಲ್ಲಿಯೇ ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗಿ ಅದರಿಂದ ನಿರಾಶ್ರಿತಗೊಂಡ ಜನರಿಗೆ ಇನ್ನೂ ಭೂಮಿಯ ಹಕ್ಕುಪತ್ರ ಸಿಕ್ಕಿಲ್ಲ. ಕಾನೂನಿನ ಅವಾಂತರಗಳೇ ಅಧಿಕಾರಿಗಳ ಕೈಬಿಗಿಯಾಗುವಂತೆ ಮಾಡಿದೆ. ಇದು ಸ್ಥಳೀಯ ಜನರ ಜೊತೆ ಸಂಘರ್ಷಕ್ಕೆ ನಾಂದಿಯಾಗಿದೆ ಎಂದರು.
ರಾಷ್ಟ್ರಕವಿ ಕುವೆಂಪು ಅವರು 1930ರ ದಶಕದಲ್ಲಿ ರಚಿಸಿದ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಮೊದಲಾದ ಕಾದಂಬರಿಗಳಲ್ಲಿ ಪಶ್ಚಿಮಘಟ್ಟದ ಸಹ್ಯಾದ್ರಿ ಶ್ರೇಣಿಗಳಲ್ಲಿನ ಭೂರಮೆಯ ವರ್ಣನೆಗಳಿವೆ. ಪ್ರತಿಯೊಬ್ಬರೂ ಇಂತಹ ಕಾದಂಬರಿಗಳನ್ನು ಓದಲೇಬೇಕು. ಇಲ್ಲಿಯ ಅರಣ್ಯ, ಪರಿಸರ, ಜನಜೀವನ, ಪ್ರಾಣಿ ಸಂಕುಲಗಳ ಬಗ್ಗೆ ಅತ್ಯುತ್ತಮ ಮಾಹಿತಿ ದೊರಕುತ್ತದೆ. ಶಿರಾಳಕೊಪ್ಪದಲ್ಲಿದ್ದ ಚಂದ್ರಕಲಾ ಅರಣ್ಯ, ಸೊರಬ ತಾಲ್ಲೂಕಿನ ಕಾನುಕಾಡು, ಶರಾವತಿ ಕಣಿವೆ ಮೊದಲಾದ ಪ್ರದೇಶಗಳಲ್ಲಿನ ಅರಣ್ಯ, ಜೀವ ವೈವಿಧ್ಯತೆಗಳ ಮಹತ್ವವನ್ನು ತಿಳಿಸಿದ ಅವರು ಅರಣ್ಯ ಸಂರಕ್ಷಣೆಗೆ ಸಾರ್ವಜನಿಕರು ಅರಣ್ಯ ಕಾನೂನುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಟಿ.ಎಸ್.ಹೂವಯ್ಯಗೌಡ ಅವರು, ಸಮಾಜ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದರ ಜೊತೆಗೆ ವಿನಾಶದತ್ತ ತೆರಳುತ್ತಿರುವುದೂ ವಿಷಾಧನೀಯ. ನಮ್ಮ ಕಾನೂನುಗಳೇ ನಮಗೆ ತೊಡಕಾಗಿವೆ. ಜಗತ್ತು ಅಭಿವೃದ್ಧಿಯತ್ತ ಸಾಗಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ವಿನಾಶವೂ ಆಗುತ್ತಿದೆ. ಇದ್ದ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ.ಟಿ.ಎನ್.ಕಮ್ಮರಡಿ, ಪಶ್ಚಿಮಘಟ್ಟಗಳಲ್ಲಿ ಕೃಷಿ-ಅರಣ್ಯ ಸಂಘರ್ಷ ನಡೆಯುತ್ತಿರುವುದು ಕೇವಲ ಪರಿಸರ ಅಥವಾ ಕೃಷಿ ಬಿಕ್ಕಟ್ಟಲ್ಲ. ಇದು ಸಹಬಾಳ್ವೆಯ ಬಿಕ್ಕಟ್ಟು ಅರಣ್ಯ, ಕೃಷಿ ಮತ್ತು ಸಮುದಾಯಗಳ ನಡುವಿನ ಕಳಚಿಹೋದ ಬಾಂಧವ್ಯಗಳನ್ನು ಮರುಜೋಡಿಸಿ, ಸಂಘರ್ಷದ ಭೂದೃಶ್ಯವನ್ನು ಮತ್ತೆ ಸಹಬಾಳ್ವೆಯ ಭೂದೃಶ್ಯವನ್ನಾಗಿ ಪರಿವರ್ತಿಸುವುದು ಇಂದಿನ ಅಗತ್ಯವಾಗಿದೆ ಎಂದರು.
Also read: ರೌಡಿಶೀಟರ್ ನರಸಿಂಹನ ಹತ್ಯೆ: ಐವರ ಬಂಧನ
ಕಾರ್ಯಾಗಾರದಲ್ಲಿ ತಾಂತ್ರಿಕಗೋಷ್ಠಿಗಳು ನಡೆದಿದ್ದು, ಜಿ.ಎಲ್.ಜನಾರ್ಧನ, ಅಖಿಲೇಶ್ ಚಿಪ್ಳಿ, ಬಿ.ಎ.ರಮೇಶ್ ಹೆಗ್ಡೆ, ಡಾ. ವಿಜಯಕುಮಾರ್, ಕೆ.ಟಿ.ಗಂಗಾಧರ್, ಬಿ.ಆರ್.ಜಯಂತ್, ಹೆಚ್.ಆರ್.ಬಸವರಾಜಪ್ಪ, ರಾಮಣ್ಣ ಹಸಲರ್, ಶೈಲೇಂದ್ರ ಬಂದಗದ್ದೆ, ಪೂರ್ಣಿಮಾ ಮೊದಲಾದವರು ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಮಂಡಿಸಿದರು.
ಈ ಕಾರ್ಯಾಗಾರವು ಬೆಂಗಳೂರಿನ ಪೃಥ್ವಿಟ್ರಸ್ಟ್, ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ, ಮಲೆನಾಡಿನ ರೈತ, ಬುಡಕಟ್ಟು ಮತ್ತು ಪರಿಸರ ಸಂಘಟನೆಗಳು ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಂಯುಕ್ತಾಶ್ರಯದಲ್ಲಿ ಆಯೋಜನೆಯಾಗಿತ್ತು.
ಕಾರ್ಯಕ್ರಮದಲ್ಲಿ ಪರಿಸರ ಅಧ್ಯಯನ ಕೇಂದ್ರದ ಜಿ.ಎಲ್.ಜನಾರ್ಧನ, ಕವಿತಾ, ಡಾ.ಸೀಮಾ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Comments 1