ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ 2025 ನೇ ಸಾಲಿನ ಕೆಯುಡಬ್ಲೂ?ಯಜೆಯ ರಾಜ್ಯ ಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಶಿವಮೊಗ್ಗ ಮೂವರು ಪತ್ರಕರ್ತರು ಈ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿಗೆ ಬೆಂಗಳೂರಿನ ವಿಜಯವಾಣಿ ಪತ್ರಿಕೆಯ ಶ್ರೀಕಾಂತ್ ಭಟ್, ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿಗೆ ಹೊಸದಿಗಂತದ ಶಿವಮೊಗ್ಗ ಸ್ಥಾನಿಕ ಸಂಪಾದಕ ಜಿ.ವಾದಿರಾಜ್ ಕಮರೂರು ಹಾಗೂ ಎಂ. ನಾಗೇಂದ್ರ ರಾವ್ ಪ್ರಶಸ್ತಿಗೆ ಶಿವಮೊಗ್ಗ ಉಷಾಮಹಿ ಪತ್ರಿಕೆಯ ಹಿರಿಯ ಪತ್ರಕರ್ತ ಕಣ್ಣಪ್ಪ ಇವರು ಭಾಜನರಾಗಿದ್ದಾರೆ.
ಜಿ. ವಾದಿರಾಜ್ ಕಮರೂರು: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಶಿವಮೊಗ್ಗ ಜಿಲ್ಲೆಯ ಖ್ಯಾತ ನಾವಿಕ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ. ಕಳೆದ 17 ವರ್ಷಗಳಿಂದ ಹೊಸದಿಗಂತ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ, ಉಪಸಂಪಾದಕರಾಗಿ, ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕಾ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ವೃತ್ತಿಪರತೆಯನ್ನು ಗುರುತಿಸಿ ಎಸ್ ಎಚ್ ರಂಗಸ್ವಾಮಿ ದತ್ತಿಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Also read: Delhi Protest | ವಿದ್ಯಾರ್ಥಿಗಳ ಹೆಸರಿನಲ್ಲಿ ಗೂಂಡಾಗಿರಿ: ಮಾಜಿ ಡಿಸಿಎಂ ಈಶ್ವರಪ್ಪ
ಶ್ರೀಕಾಂತ್ ಭಟ್: ಶಿವಮೊಗ್ಗ ಜಿಲ್ಲೆಯಿಂದ ಪತ್ರಕರ್ತ ವೃತ್ತಿಯನ್ನು ಆರಂಭಿಸಿದ ಶ್ರೀಕಾಂತ್ ಭಟ್ ರಾಜ್ಯಮಟ್ಟದಲ್ಲಿ ಗಮನಸೆಳೆದ ಕ್ರಿಯಾಶೀಲ ಪತ್ರಕರ್ತ, ಜಿಲ್ಲೆಯ ಹಲವಾರು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದು, ಬೆಂಗಳೂರಿನಲ್ಲಿ ಕನ್ನಡ ಪ್ರಭ ಸೇರಿದಂತೆ ಅನೇಕ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವೃತ್ತಿ ಕೌಶಲ್ಯ ತೋರಿದ್ದಾರೆ. ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ರಾಜಕೀಯ ವಿಭಾಗದ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೃತ್ತಿಬದ್ದತೆ ಮತ್ತು ಸೇವೆಯನ್ನು ಪರಿಗಣಿಸಿ ಮಿಂಚು ಶ್ರೀನಿವಾಸ್ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಣ್ಣಪ್ಪ: ಜಿಲ್ಲೆಯ ಕಂಠೀರವ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ವೃತ್ತಿ ಆರಂಭಿಸಿದ್ದು, ಕಳೆದ 35 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಸ್ತುತ ಉಷಾಮಹಿ ಕನ್ನಡ ದಿನಪತ್ರಿಕೆಯ ಸುದ್ದಿ ಸಂಪಾದಕರೂ ಆಗಿದ್ದಾರೆ. ಪತ್ರಿಕಾ ಸಂಘಟನೆಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಭದ್ರಾವತಿ ಪ್ರೆಸ್ ಟ್ರಸ್ಟ್ನ ನಾಯಕತ್ವ ವಹಿಸಿಕೊಂಡು ಪತ್ರಕರ್ತರ ಕ್ಷೇಮಾಭಿವೃದ್ದಿಗೆ ದುಡಿಯುತ್ತಾ ಬಂದಿದ್ದಾರೆ. ಸಾಮಾಜಿಕ ಸಂಘಟನೆಗಳಲ್ಲೂ ಇವರ ಸೇವೆ ಅನನ್ಯವಾದುದ್ದು, ಪತ್ರಿಕೋದ್ಯಮದಲ್ಲಿ ಇವರ ಸೇವೆಯನ್ನು ಗುರುತಿಸಿ ಎಂ.ನಾಗೇಂದ್ರ ರಾವ್ ದತ್ತಿ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ
ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5 ಸಾವಿರ ನಗದು, ಕೆಯುಡಬ್ಲ್ಯೂಜೆ ಗೌರವಾದರಗಳನ್ನು ಒಳಗೊಂಡಿದೆ. ಚಿಕ್ಕಮಗಳೂರಿನಲ್ಲಿ ಜುಲೈ 25ಕ್ಕೆ ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಅಭಿನಂದನೆ: ಪ್ರಶಸ್ತಿಗೆ ಭಾಜನರಾಗಿರುವ ವಾದಿರಾಜ್, ಶ್ರೀಕಾಂತ್ ಭಟ್, ಕಣ್ಣಪ್ಪ ಇವರುಗಳಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಂಘದ ನಿರ್ದೇಶಕರಾದ ಎನ್.ರವಿಕುಮಾರ್, ಕೆ.ವಿ.ಶಿವಕುಮಾರ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಯು.ವೈದ್ಯನಾಥ್, ಉಪಾಧ್ಯಕ್ಷ ದೇಶಾದ್ರಿ ಹೊಸ್ಮನಿ, ಸತ್ಯನಾರಾಯಣ, ಹುಚ್ಚರಾಯಪ್ಪ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಸದಸ್ಯರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








