ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾರಾಜ ಟ್ರೋಫಿ (Maharaja Trophy) KSCA ಟಿ20–2026ರ (KSCA T20 2026) ಫೈನಲ್ನಲ್ಲಿ ಶಿವಮೊಗ್ಗ ಯೋಧಾಸ್ ತಂಡದ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಭವ್ಯ ವಿಜಯೋತ್ಸವಕ್ಕೆ ಸಾಕ್ಷಿಯಾಯಿತು.
ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಶಿವಮೊಗ್ಗ ಯೋಧಾಸ್ ತಂಡದ ಗೌರವಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಶಿವಮೊಗ್ಗ ವಲಯ ವತಿಯಿಂದ ಅದ್ದೂರಿ ವಿಜಯೋತ್ಸವ ರ್ಯಾಲಿ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಶಿವಮೊಗ್ಗದ ಬೆಕ್ಕಿನಕಲ್ಮಠದಿಂದ KSCA ಕ್ರೀಡಾಂಗಣದವರೆಗೆ ನಡೆದ ವಿಜಯೋತ್ಸವ ರ್ಯಾಲಿಗೆ ವಿಧಾನ ಪರಿಷತ್ ಶಾಸಕರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಹಾಗೂ KSCA ಶಿವಮೊಗ್ಗ ವಲಯ ಸಂಚಾಲಕ ಡಿ. ಎಸ್. ಅರುಣ್ ಅವರು ಆತ್ಮೀಯ ಸ್ವಾಗತ ಕೋರಿದರು. ಬಳಿಕ ತಂಡದ ಆಟಗಾರರು, ತರಬೇತುದಾರರು ಹಾಗೂ ಸದಸ್ಯರನ್ನು KSCA ಕ್ರೀಡಾಂಗಣದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
Also read>> Bandhan Bank – ಷೇರು 13.78% ಕುಸಿತ: ಮಾರ್ಜಿನ್ ಒತ್ತಡದ ಎಚ್ಚರಿಕೆ
ಈ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್, ಶಿವಮೊಗ್ಗ ಯೋಧಾಸ್ ತಂಡದ ಮಾಲೀಕ ಮಿಥುನ್, ಸೂಡ ಅಧ್ಯಕ್ಷ ಸುಂದರೇಶ್, ವಿನೋಬನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂತೋಷ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ಕ್ರೀಡಾಪಟುಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ರಣಜಿ ಕ್ರಿಕೆಟ್ ಆಟಗಾರ ಹಾಗೂ ಶಿವಮೊಗ್ಗದ ಹೆಮ್ಮೆಯ ಪ್ರತಿಭೆ ಅಕ್ಷಯ್ ಅವರ ಕುಟುಂಬಕ್ಕೆ ತಂಡದ ಮಾಲೀಕರಾದ ಮಿಥುನ್ ಅವರು ₹5 ಲಕ್ಷ ಆರ್ಥಿಕ ನೆರವು ನೀಡಿದರು. ಅಕ್ಷಯ್ ಅವರ ಸಾಧನೆಯನ್ನು ಸ್ಮರಿಸಿ, ಕುಟುಂಬದೊಂದಿಗೆ ಎಲ್ಲರೂ ಸಂತಾಪ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ KSCA ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್, ಮಾಜಿ ವಲಯ ಸಂಚಾಲಕರಾದ ಸದಾನಂದ್, ಡಿ.ಆರ್. ನಾಗರಾಜ್, ರಾಜೇಂದ್ರ ಕಾಮತ್, ಸುಬ್ರಮಣ್ಯ, ಸುಕುಮಾರ್ ಪಟೇಲ್, ಐಡಿಯಲ್ ಗೋಪಿ, ಅನಿಲ್ ಉತ್ತಿ, ಯಶವಂತ್, ಸಂಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








