ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಅತ್ಯಂತ ಪೂಜನೀಯ ಹಾಗೂ ಪವಿತ್ರವಾದದ್ದು ಎಂದು ಶಿಕಾರಿಪುರ (Shikaripura) ಶಾಲೆಯ ಪೋಷಕರಾದ ಶುಭ ರಘು ಅವರು ಹೇಳಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಬೌದ್ಧಿಕ ನೀಡಿದರು.
ಅವರು ಮಾತನಾಡಿ, ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ತೋರಿಸುವ, ಬದುಕಿಗೆ ಸರಿಯಾದ ಮಾರ್ಗದರ್ಶನ ನೀಡುವ ವ್ಯಕ್ತಿಯೇ ಗುರು ಎಂದರು.
Also read>> ಜು.31ರಂದು ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ | ವಿಜಯೇಂದ್ರ ಘೋಷಣೆ | ಕಾರಣವೇನು?
ತಂದೆ-ತಾಯಿಗಳಂತೆ ಗುರುವಿಗೂ ದೇವರಿಗೆ ಸಮಾನವಾದ ಉನ್ನತ ಸ್ಥಾನವಿದೆ. ವಿದ್ಯೆ, ಸಂಸ್ಕಾರ ಹಾಗೂ ಜೀವನದ ನೈಜ ಅರ್ಥವನ್ನು ಕಲಿಸಿ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಅಮೂಲ್ಯವಾಗಿದೆ. “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂಬಂತೆ ಗುರುವನ್ನು ಸಾಕ್ಷಾತ್ ದೇವರೆಂದು ಭಾವಿಸಿ ಗೌರವಿಸಲಾಗುತ್ತದೆ. ಕತ್ತಲಿನಿಂದ ಬೆಳಕಿನಡೆಗೆ, ಅಸತ್ಯದಿಂದ ಸತ್ಯದ ಕಡೆಗೆ ಕರೆದೊಯ್ಯುವ ದಾರಿದೀಪ ಗುರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ ಅವರು ಮಾತನಾಡಿ, ಗುರು ಪೂರ್ಣಿಮೆಯು ಅಜ್ಞಾನವನ್ನು ತೊಳೆದು ಜ್ಞಾನ ನೀಡುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ ಎಂದರು.
ಕೆಲವು ಸಂಪ್ರದಾಯಗಳಲ್ಲಿ ಭಗವಾಧ್ವಜ ಅಥವಾ ಕಾವಿ ಧ್ವಜವನ್ನು ಗುರುವಿನ ಪ್ರತೀಕವಾಗಿ ಪೂಜಿಸಲಾಗುತ್ತದೆ ಮತ್ತು ಗುರುದಕ್ಷಿಣೆಯಾಗಿ ಕಾಣಿಕೆ ಸಮರ್ಪಿಸಲಾಗುತ್ತದೆ. ಕೇಸರಿ ಬಣ್ಣದ ಧ್ವಜವು ತ್ಯಾಗ, ಪರಿಶುದ್ಧತೆ ಮತ್ತು ಜ್ಞಾನದ ಬೆಳಕನ್ನು ಸೂಚಿಸುತ್ತದೆ. ಅಮೂರ್ತ ರೂಪದ ಈ ಧ್ವಜವನ್ನು ಗುರುವೆಂದು ಭಾವಿಸಿ ಪೂಜೆ ಸಲ್ಲಿಸಲಾಗುತ್ತದೆ. ಧ್ವಜವು ಗುರುವಿನ ಆದರ್ಶಗಳನ್ನು ಮತ್ತು ಸಮಾಜಮುಖಿ ಚಿಂತನೆಗಳನ್ನು ಸದಾ ಸ್ಮರಿಸಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ಅವರು ಮಾತನಾಡಿ, ಗುರುವಿನಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು. ಆದರೂ ಸಾಂಕೇತಿಕವಾಗಿ ಕಾಣಿಕೆ ನೀಡುವುದರಿಂದ ಗುರುವಿನ ಋಣದಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಪಡೆಯಬಹುದು ಎಂಬ ನಂಬಿಕೆಯಿದೆ. ಗುರು ಪೂರ್ಣಿಮೆಯ ದಿನ ನೀಡುವ ಕಾಣಿಕೆಯು ನಿಸ್ವಾರ್ಥ ಭಾವದಿಂದ ಕೂಡಿದ್ದು, ಇದು ಶಿಷ್ಯನ ಸಮರ್ಪಣಾ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಪೂಜೆ, ಅರ್ಪಣೆ ಮತ್ತು ವಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಶ್ಲೋಕ, ಅಮೃತಬಿಂದು, ವಚನ, ಕಗ್ಗ ಹಾಗೂ ದೋಹೆಗಳನ್ನು ನುಡಿಸಿದರು.
ವಿದ್ಯಾರ್ಥಿಗಳಾದ ವರ್ಷಿಣಿ ಮತ್ತು ನಂದಿನಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿಯರಾದ ವಿಜಯಲಕ್ಷ್ಮೀ ಮತ್ತು ಮಮತಾ ಪ್ರಾರ್ಥನೆ ನಡೆಸಿದರು. ದೀಕ್ಷಾ ಸ್ವಾಗತಿಸಿ, ಜಿ.ಎಸ್. ಕಾರ್ತಿಕ್ ವಂದಿಸಿದರು. ಅಭಿಜ್ಞ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








