ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು (Bengaluru) ಶ್ರೀ ರಾಘವೇಂದ್ರ ಸೇವಾ ಸಮಿತಿ ಹಾಗೂ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಹಿಂದೂಧರ್ಮ ಪ್ರಚಾರ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 1ರಿಂದ 6ರವರೆಗೆ ‘ಶ್ರೀ ಜಯತೀರ್ಥರ ಜೀವನ ಮತ್ತು ಸಾಧನೆ’ ವಿಷಯದ ಕುರಿತು ವಿಶೇಷ ಧಾರ್ಮಿಕ ಪ್ರವಚನ ಸರಣಿ ಆಯೋಜಿಸಲಾಗಿದೆ.
ಈ ಕುರಿತು ಟಿಟಿಡಿ ಹಿಂದೂಧರ್ಮ ಪ್ರಚಾರ ಪರಿಷತ್ನ ಸಂಚಾಲಕರಾದ ಡಾ. ಪಿ. ಭುಜಂಗರಾವ್ ಮಾಹಿತಿ ನೀಡಿದ್ದು, ಪ್ರತಿದಿನ ಸಂಜೆ 7 ಗಂಟೆಗೆ ಮಠಾಧೀಶರಾದ ಮಹಾಮಹೋಪಾಧ್ಯಾಯ ಶಾಸ್ತ್ರಸಿಂಧು ಶ್ರೀ ಚಂದ್ರಶೇಖರ ಆಚಾರ್ಯರು ಶ್ರೀ ಜಯತೀರ್ಥರ ಆರಾಧನೆ ಪ್ರಯುಕ್ತ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರವಚನ ಕಾರ್ಯಕ್ರಮವು ಮಲ್ಲೇಶ್ವರದ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದ್ದು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಹರಿನಾಮ ಸಂಕೀರ್ತನೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ
ಇದೇ ವೇಳೆ, ಬೆಂಗಳೂರಿನ ಯಲಹಂಕ ಉಪನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಹರಿನಾಮ ಸಂಕೀರ್ತನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರಾಮ್ ರಕ್ಷಿತ್ ಅವರು ಪ್ರಸಿದ್ಧ ಹರಿದಾಸರ ಕೀರ್ತನೆಗಳನ್ನು ಭಕ್ತಿಭಾವದಿಂದ ಪ್ರಸ್ತುತಪಡಿಸಿದರು. ಅವರ ಗಾಯನಕ್ಕೆ ಭರತ್ ದರೋಜಿ ಹಾರ್ಮೋನಿಯಂನಲ್ಲಿ, ಶರಣು ಗೋಗಿ ತಬಲಾದಲ್ಲಿ ಹಾಗೂ ಸುಧೀಂದ್ರ ಕುಲಕರ್ಣಿ ತಾಳದಲ್ಲಿ ಸಾಥ್ ನೀಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
Also read: BHIM QR, ಸೌಂಡ್ ಬಾಕ್ಸ್ ಬಳಕೆಗೆ ಉತ್ತೇಜನ; ಶಿವಮೊಗ್ಗ ಕೆನರಾ ಬ್ಯಾಂಕ್ನ ವಿನೂತನ ಪ್ರಯತ್ನ
ಕಾರ್ಯಕ್ರಮದಲ್ಲಿ ಟಿಟಿಡಿ ಹಿಂದೂಧರ್ಮ ಪ್ರಚಾರ ಪರಿಷತ್ನ ಸಂಚಾಲಕರಾದ ಡಾ. ಪಿ. ಭುಜಂಗರಾವ್ ಕಲಾವಿದರನ್ನು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.
ಧಾರ್ಮಿಕ ಪ್ರವಚನ ಮತ್ತು ಹರಿನಾಮ ಸಂಕೀರ್ತನೆ ಕಾರ್ಯಕ್ರಮಗಳ ಮೂಲಕ ಶ್ರೀ ಜಯತೀರ್ಥರ ಜೀವನ, ತತ್ವಚಿಂತನೆ ಹಾಗೂ ಹರಿದಾಸರ ಭಕ್ತಿ ಪರಂಪರೆಯನ್ನು ಜನರಿಗೆ ಪರಿಚಯಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮಗಳಿಗೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










