ಕಲ್ಪ ಮೀಡಿಯಾ ಹೌಸ್ | ಉಡುಪಿ |
ಬದುಕು (Life) ಮೌಲಿಕವಾಗಬೇಕಾದರೆ ಇಂತಹ ಗುರುಗಳ ಮಾರ್ಗದರ್ಶನ ಹಾಗೂ ಆದರ್ಶಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಇ. ದೇವನಾಥನ್ ಉಡುಪಿ (Udupi) ಜಿಲ್ಲೆಯ ಬಾರ್ಕೂರು ಭಂಡಾರಕೇರಿ ಮಠದಲ್ಲಿ ಅಭಿಪ್ರಾಯಪಟ್ಟರು.
ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಮತ್ತು ಚಾತುರ್ಮಾಸ್ಯ ಸಂದರ್ಭ 18 ವಿದ್ವಾಂಸರಿಗೆ ಜಯಶ್ರೀ ಕಂಬುಕಂಠ’ ಪ್ರಶಸ್ತಿ, ಸ್ಮರಣಿಕೆ, ಸಂಭಾವನೆಗಳನ್ನು ನೀಡುವ ಮೂಲಕ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ವಿದ್ಯೇಶತೀರ್ಥರು ಭಂಡಾರಕೇರಿಯಂತಹ ಚಿಕ್ಕಗ್ರಾಮದಲ್ಲಿ ಚಾತುರ್ಮಾಸ್ಯದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡುತ್ತಿದ್ದಾರೆ ಎಂದು ಹೇಳಿದರು.
ಶ್ರೀ ವಿದ್ಯೇಶತೀರ್ಥರ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಾರಾಯಣ, ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಚಿಂತನೆ ಹಾಗೂ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಗ್ರಾಮೀಣ ಭಾಗದ ಕೆಲವು ಪ್ರದೇಶದಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಿದರೆ ಆರೋಗ್ಯ ಸುಧಾರಿಸಬಹುದು. ಆದರೆ ಮನಸ್ಸು ಶುದ್ಧವಾಗುವುದು ಬಲು ಕಷ್ಟ. ಭಂಡಾರಿಕೇರಿ ಮಠಾಧೀಶರ ಸಂಕಲ್ಪದಂತೆ ನಡೆಯುತ್ತಿರುವ ಈ ಪಾರಾಯಣ ಯಜ್ಞವು ದೇಹ ಮತ್ತು ಮನಸ್ಸುಗಳನ್ನು ಏಕ ಕಾಲಕ್ಕೆ ಶುದ್ಧೀಕರಣ ಮಾಡುತಿದೆ. ಇದರಲ್ಲಿ ನಾವೆಲ್ಲರೂ 9 ದಿನ ಭಾಗವಹಿಸಿದ್ದೇ ಒಂದು ಪುಣ್ಯ.
-ಪಂಡಿತ ಬಿ. ಗೋಪಾಲಾಚಾರ್ಯ, ಹಿರಿಯ ವಿದ್ವಾಂಸ, ಉಡುಪಿ
ಮಹಾಭಾರತ ತಿಳಿಸಿದ ಮೌಲ್ಯಗಳನ್ನು ಅರಿತು ಬದುಕಿ
ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಮಹಾಭಾರತ ತಿಳಿಸಿದ ಮೌಲ್ಯಗಳನ್ನು ಅರಿತುಕೊಂಡು ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
Also Read>> ನಟ ಅನಂತನಾಗ್ ನಿವಾಸಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ; ಅಭಿನಂದನೆ ಸಲ್ಲಿಕೆ
ವೇದಗಳಲ್ಲಿ ಹೇಳದ ಅನೇಕ ಸಂಗತಿಗಳನ್ನು ಮಹಾಭಾರತ ನಿರೂಪಿಸಿದೆ. ಪಂಚ ಪಾಂಡವರು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದಾರೆ. ಕೃಷ್ಣನು ಸರಳಾತಿ ಸರಳವಾಗಿ ಬದುಕಿ ತೋರಿಸಿ ಸರ್ವೋತ್ತಮ ಎನಿಸಿದ್ದಾನೆ. ಅಸುರೀ ಶಕ್ತಿಗಳ ವಿರುದ್ಧ ದೈವೀ ಶಕ್ತಿ ವಿಜಯ ಸಾಧಿಸಿದ್ದಕ್ಕೆ ಮಹಾಭಾರತ ಅತಿ ದೊಡ್ಡ ಉದಾಹರಣೆಯಾಗಿದೆ. ಇದರಂತೆ ನಮ್ಮಲ್ಲಿ ಇರುವ ಅಸುರೀ ಶಕ್ತಿಗಳು ನಾಶವಾಗಬೇಕು. ಎಲ್ಲರೂ ದೈವಿಕ ಶಕ್ತಿಗಳ ಪ್ರತೀಕವಾಗಿ ಬದುಕಬೇಕು ಎಂದರೆ ಮಹಾಭಾರತ ಹೇಳಿದಂತೆ ಜೀವನ ನಡೆಸಬೇಕು ಎಂದರು.
ಈ ಮಹಾನ್ ಗ್ರಂಥ ಅರ್ಥಗಳಿಂದ ಭರಿತವಾಗಿದೆ. ಇದಕ್ಕೆ ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚನೆ ಮಾಡಿ ನಮ್ಮೆಲ್ಲರನ್ನು ಉದ್ಧರಿಸಿದ್ದಾರೆ. ನಾಡಿನ ವಿವಿಧ ಭಾಗದ 18 ಪಂಡಿತರು 9 ದಿನಗಳ ಕಾಲ ಮಠದಲ್ಲೇ ಇದ್ದು ಮಹಾ ಭಾರತ ತಾತ್ಪರ್ಯ ನಿರ್ಣಯ ಪಾರಾಯಣ ಮಾಡಿ ಇಂದು ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ವಿದ್ಯೇಶ ತೀರ್ಥರ 47ನೇ ಚಾತುರ್ಮಾಸ್ಯವು ಒಂದು ವಿಭಿನ್ನ ಅನುಭವದ ಗಣಿಯಾಗಿದೆ. ಭಂಡಾರಕೇರಿ ಮಠದಲ್ಲಿ ನಡೆಯುತ್ತಿರುವ ತಾತ್ಪರ್ಯ ನಿರ್ಣಯ ಪಾರಾಯಣ, ಉಪನ್ಯಾಸ, ಸಂಗೀತ, ಊಟೋಪಚಾರಗಳು ನಾಡಿನ ಪಂಡಿತರಿಗೆ, ವಿದ್ವಾಂಸರಿಗೆ ಕಲಾವಿದರಿಗೆ ಮನ್ನಣೆ ನೀಡಿ ತವರು ಮನೆಯ ಪ್ರೀತಿ ತೋರುತ್ತಿವೆ. ತಾತ್ಪರ್ಯ ನಿರ್ಣಯ ಗ್ರಂಥ ಪಾರಾಯಣ ಮಾಡುವ ಸದವಕಾಶ ನನಗೂ ದೊರೆತದ್ದು ಒಂದು ಯೋಗವೇ ಆಗಿದೆ.
-ಬಿ.ಆರ್. ವೆಂಕಟೇಶಾಚಾರ್ಯ ಧಾರವಾಡ, ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ್ದ ಪಂಡಿತ
Udupi : ಪ್ರಶಸ್ತಿ ಪ್ರದಾನ
ಪಂಡಿತರಾದ ಬಿ. ಗೋಪಾಲಾಚಾರ್ಯ, ನರಹರಿ ಆಚಾರ್ಯ(ಉಡುಪಿ), ಗುರುಪವನಾಚಾರ್ಯ , ಅಜಿತಾಚಾರ್ಯ ಉಡುಪಿ, ಗುರುರಾಜಾಚಾರ್ಯ ಕುಲಕರ್ಣಿ, ಸುಧೀಂದ್ರಾಚಾರ್ಯ, ಸಂಜೀವಾಚಾರ್ಯ, ಗುರು ರಾಜಾಚಾರ್ಯ ಕಲ್ಕೂರ, ಸುಶೀಲೇಂದ್ರಾಚಾರ್ಯ ಗೊಗ್ಗಿ, ಫಣಿರಾಜಾಚಾರ್ಯ , ಗುರುಮೂರ್ತಿ ಆಚಾರ್ಯ(ಬೆಂಗಳೂರು), ಅನಂತಾಚಾರ್ಯ ದಿದ್ದಿಗಿ ಹೈದರಾಬಾದ್, ಬಿ. ಆರ್. ವೆಂಕಟೇಶಾಚಾರ್ಯ ಧಾರವಾಡ, ಭೀಮಸೇನಾಚಾರ್ಯ, ವೇದವ್ಯಾಸಾಚಾರ್ಯ ಜೋಷಿ (ಮಂತ್ರಾಲಯ), ರಾಘವೇಂದ್ರಾಚಾರ್ಯ(ಚೆನ್ನೈ), ನರಸಿಂಹಾಚಾರ್ಯ ಗೋಠೆ ಕೊಯಂಬತ್ತೂರು, ಅನಿಲಾಚಾರ್ಯ ದೇಸಾಯಿ ರಾಯಚೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









