ಬೆಂಗಳೂರು: ಶನಿವಾರ ನಿಧನರಾದ ರಾಜಕಾರಣಿ ಹಾಗೂ ಹಿರಿಯ ನಟ ಅಂಬರೀಶ್ ಅವರ ಅಂತ್ಯಸಂಸ್ಕಾರ ಕೆಲವೇ ಕ್ಷಣಗಳಲ್ಲಿ ನೆರವೇರಲಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಕುಟುಂಬಸ್ತರ ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಮಂಡ್ಯದಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ನಂತರ ಸೇನಾ ವಿಮಾನದಲ್ಲಿ ಎಚ್ಎಎಲ್ ಗೆ ಪಾರ್ಥಿವ ಶರೀರವನ್ನು ತರಲಾಯಿತು. ಅಲ್ಲಿಂದ ಅಲಂಕೃತ ವಾಹನದಲ್ಲಿ ಸುಮಾರು 13 ಕಿಲೋ ಮೀಟರ್ ದೂರದವರೆಗೂ ಬೃಹತ್ ಮೆರವಣಿಗೆಯಲ್ಲಿ ಶರೀರವನ್ನು ತರಲಾಯಿತು.
ದಾರಿಯುದ್ದಕ್ಕೂ ಸಾವಿರಾರು ಅಭಿಮಾನಿಗಳ ಜಮಾಯಿಸಿ, ಅಗಲಿದ ನಟನಿಗೆ ಅಶ್ರುತರ್ಪಣ ಅರ್ಪಿಸಿದರು.
ಸದ್ಯ ಕಂಠೀರವ ಸ್ಟುಡಿಯೋಗೆ ಅಂಬಿ ಪಾರ್ಥಿವ ಶರೀರವನ್ನು ತರಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಅಂತ್ಯಸಂಸ್ಕಾರ ನಡೆಸುವ ಸ್ಥಳದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು, ಕಲಾವಿದರೊಬ್ಬರು ತಮ್ಮ ಕುಂಚದಲ್ಲಿ ಅಂಬಿ ಚಿತ್ರವನ್ನು ರೂಪಿಸಿ, ನಮನ ಸಲ್ಲಿಸಿದ್ದಾರೆ.
ಈಗಾಗಲೇ ಅಂತಿಮ ವಿಧಿವಿಧಾನ ಆರಂಭಗೊಂಡಿದ್ದು, ಹಿಂದೂ ಸಂಪ್ರದಾಯದ ಪ್ರಕಾರು ಸುಮಾರು 1 ಗಂಟೆ ಕಾಲ ನಡೆಯಲಿದೆ.
ಅಂತ್ಯಸಂಸ್ಕಾರ ಸ್ಥಳಕ್ಕೆ ಪಾರ್ಥಿವ ಶರೀರವನ್ನು ತಂದ ವೇಳೆ ಆಘಾತ ತಾಳಲಾರದೇ ಸುಮಲತಾ ಕುಸಿದುಬಿದ್ದರು. ಈ ವೇಳೆ ನಟ ಯಶ್ ಸೇರಿದಂತೆ ಹಲವರು ಅವರಿಗೆ ಸಮಾಧಾನಪಡಿಸಿದ್ದು, ದೃಶ್ಯ ಮನಕಲುಕುವಂತಿತ್ತು.
ಸ್ಥಳದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪಿಎಂ ದೇವೇಗೌಡ, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಬಹುತೇಕ ರಾಜ್ಯ ಸಚಿವರು, ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಯಶ್, ಜಗ್ಗೇಶ್, ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್, ಅನಿರುದ್, ಎಸ್. ನಾರಾಯಣ್, ನಿರ್ದೇಶಕ ಶಶಾಂಕ್, ನಟಿ ರಾಗಿಣಿ, ನಟ ಉಪೇಂದ್ರ, ಸಚಿವ ಎಚ್.ಡಿ. ರೇವಣ್ಣ, ನಟ ಜೋಗಿ ಪ್ರೇಮ್, ರವಿಚಂದ್ರನ್, ಸಾಧುಕೋಕಿಲ, ಸಂಸದ ಡಿ.ಕೆ. ಸುರೇಶ್, ಹಿರಿಯ ನಟಿ ಸರೋಜಾದೇವಿ, ಹಿರಿಯ ನಟಿ ಬಿ.ವಿ.ರಾಧಾ, ನಟ ಪ್ರಕಾಶ್ ರೈ, ಹಿರಿಯ ನಟ ಶ್ರೀನಾಥ್, ಮಾಜಿ ಸಚಿವ ಎಂ.ಬಿ. ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಟ ಗಣೇಶ್, ಮಾಜಿ ಸಚಿವ ಆರ್.ಅಶೋಕ್, ಎಂಎಲ್ಸಿ ತೇಜಸ್ವಿನಿ, ನಟಿ ಅಭಿನಯ, ಮೈತ್ರಿಗೌಡ ಸ್ವಾಮಿ ನಿರ್ಮಲಾನಂದನಾಥ ಶ್ರೀ, ನಂಜವಧೂತ ಸ್ವಾಮೀಜಿ, ನಟ ರಮೇಶ್ ಅರವಿಂದ್, ಸಿಎಂ ಕುಮಾರಸ್ವಾಮಿ, ನಟ ನಿಖಿಲ್ ಕುಮಾರಸ್ವಾಮಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ನಟ ಅಭಿಜಿತ್, ದೇವರಾಜ್, ಪ್ರಜ್ವಲ್ ದೇವರಾಜ್, ಚರಣ್ರಾಜ್, ವಿಜಯ್ ರಾಘವೇಂದ್ರ, ರಾಮ್ಕುಮಾರ್, ರಾಜೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ನಾಯಕ ಟಿ.ಎ.ಶರವಣ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ನಟ ಶ್ರೀನಗರ ಕಿಟ್ಟಿ ಹಾಗೂ ಸಂಚಾರಿ ವಿಜಯ್ ಸೇರಿದಂತೆ ಗಣ್ಯಾತಿಗಣ್ಯರ ದಂಡೇ ಬೀಡುಬಿಟ್ಟಿದೆ.
Discussion about this post