ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ದಾಳಿ ನಡೆಸಿ ನಮ್ಮ 42 ಯೋಧರನ್ನು ಬಲಿ ಪಡೆದ 11 ದಿನಗಳ ನಂತರ ಪ್ರತೀಕಾರ ತೆಗೆದುಕೊಂಡಿರುವ ಭಾರತ, ಸುಮಾರು 300ಕ್ಕೂ ಅಧಿಕ ಉಗ್ರರನ್ನು ವಾಯು ದಾಳಿ ನಡೆಸಿ ನಾಶ ಮಾಡಿದೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತತವಾಗಿ ಯೋಜನೆ ರೂಪಿಸಿ, ಇಂದು ನಸುಕಿನಲ್ಲಿ ಎಲ್’ಒಸಿಯಲ್ಲಿರುವ ಜೈಷ್ ಉಗ್ರರ ಕ್ಯಾಂಪ್’ಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯು ಸೇನೆ 21 ನಿಮಿಷಗಳಲ್ಲಿ 300ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ. ಅತ್ಯಂತ ವ್ಯವಸ್ಥಿತವಾಗಿ ದಾಳಿ ಯೋಜನೆ ರೂಪಿಸಿದ್ದ ಭಾರತ 21 ನಿಮಿಷಗಳಲ್ಲಿ ದಾಳಿಯನ್ನು ಮುಕ್ತಾಯಗೊಳಿಸಿದ್ದು, ಇದಕ್ಕಾಗಿ 12 ಮಿರಾಜ್ ಯುದ್ದ ವಿಮಾನಗಳನ್ನು ಬಳಕೆ ಮಾಡಿಕೊಂಡಿದೆ. ಭಾರತೀಯ ಪಡೆಗಳು ನಡೆಸಿದ ವಾಯು ದಾಳಿಗೆ ಬಲಾಕೋಟ್’ನ ಮೂರು ಭಾಗಗಳು ಸರ್ವನಾಶವಾಗಿದ್ದು, ನಸುಕಿನ 3.48ಕ್ಕೆ ಈ ಬೆಳವಣಿಗೆ ನಡೆದಿದೆ.
ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು 42 ಯೋಧರು ವೀರಸ್ವರ್ಗ ಸೇರಿದ ಘಟನೆಯ ನಂತರ ಯಾವುದೇ ಸೇನಾ ದಾಳಿ ನಡೆಸದ ಮೋದಿ ಸರ್ಕಾರದ ವಿರುದ್ಧ ನಾಯಿ ನರಿಗಳೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದ್ದವು.
ಜನ ಸಾಮಾನ್ಯರು ಮಾತನಾಡುವಂತೆ ಅಥವಾ ಪ್ರತಿಪಕ್ಷಗಳು ರಾಜಕೀಯ ಮಾತನಾಡುವಂತೆ ಪುಲ್ವಾಮಾ ದಾಳಿ ನಡೆದಾಕ್ಷಣ ಒಂದು ಜವಾಬ್ದಾರಿಯ ಕೇಂದ್ರ ಸರ್ಕಾರ ಏಕಾಏಕಿ ಬೀದಿ ರೌಡಿ ರೀತಿಯಲ್ಲಿ ಮುಗಿಬೀಳಲು ಸಾಧ್ಯವಿಲ್ಲ.
ಒಂದು ಬೃಹತ್ ದೇಶ ಶತ್ರು ರಾಷ್ಟçದ ಮೇಲೆ ಇಂತಹ ಒಂದು ದಾಳಿ ನಡೆಸುತ್ತದೆ ಎಂದರೆ ಅದಕ್ಕೆ ಅದರದ್ದೆ ಆದ ಒಂದು ವ್ಯವಸ್ಥಿತ ಸಿದ್ದತೆ ಅಗತ್ಯವಿರುತ್ತದೆ.
ಪುಲ್ವಾಮಾ ದಾಳಿ ನಡೆದ ನಂತರ ಮೋದಿ ಸರ್ಕಾರ ಹಾಗೂ ಸೇನಾ ಪಡೆಗಳು ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ಎಲ್ಲ ಭಾಗದಲ್ಲಿರುವ ಗಡಿಯನ್ನು ಬಿಗಿಗೊಳಿಸುವ ಜೊತೆಯಲ್ಲಿ, ವಾಯಪಡೆ ಹಾಗೂ ನೌಕಾಪಡೆಗಳ ಭದ್ರತೆಯನ್ನು ಬಿಗಿಗೊಳಿಸಿದ್ದು.

ಇದಾದ ನಂತರ, ಭಾರತೀಯ ಸೇನೆ, ಗೃಹ ಸಚಿವಾಲಯ ಹಾಗೂ ರಕ್ಷಣಾ ಇಲಾಖೆಗಳು ಪ್ರಧಾನಿಯವರೊಂದಿಗೆ ನಿರಂತರವಾಗಿ ಸಭೆ ನಡೆಸಿ, ಪ್ರತಿದಾಳಿ ಹೇಗಿರಬೇಕು ಎಂಬ ರೂಪುರೇಷೆ ಸಿದ್ದಪಡಿಸಿವೆ. ಇದಕ್ಕೂ ಮೊದಲಾಗಿ, ಗುಪ್ತಚರ ಇಲಾಖೆ, ಸೇನಾ ಗುಪ್ತಚರ ಇಲಾಖೆ, ಸ್ಯಾಟಲೈಟ್’ಗಳನ್ನು ಬಳಕೆ ಮಾಡಿಕೊಂಡು, ಉಗ್ರರ ಅಡಗುತಾಣಗಳ ಕುರಿತಾಗಿ ಇಂಚಿಂಚೂ ಮಾಹಿತಿ ಕಲೆ ಹಾಕಲಾಗಿದೆ.
ಇದೇ ವೇಳೆ ಅತ್ಯಂತ ಪ್ರಮುಖ ಬೆಳವಣಿಗೆ ಎಂದರೆ, ಒಂದು ವೇಳೆ ನಾವೇನಾದರೂ ಉಗ್ರರ ವಿರುದ್ಧ ದಾಳಿ ನಡೆಸಿದರೆ ಅದಕ್ಕೆ ಪ್ರತಿಯಾಗಿ ಪಾಕ್ ಸರ್ಕಾರ ಹಾಗೂ ಉಗ್ರರು ಭಾರತದ ಮೇಲೂ ಸಹ ದಾಳಿ ನಡೆಸುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ, ದೇಶದ ಭದ್ರತೆಯ ದೃಷ್ಠಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸೇನೆ ಮಾಡಿಕೊಂಡಿತ್ತು.
ಇದಕ್ಕಾಗಿ ಪ್ರಮುಖವಾಗಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಕಳೆದ ಎಂಟು ದಿನಗಳಿಂದಲೇ ಅತ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಒಂದು ವೇಳೆ ಭಾರತ ದಾಳಿ ನಡೆಸಿದರೆ, ಕಾಶ್ಮೀರದ ಒಳಗೆ ಅಡಗಿರಬಹುದಾದ ಉಗ್ರರು ಹಾಗೂ ಉಗ್ರರ ಬೆಂಬಲಿಗ ಸ್ಥಳೀಯರು ದೇಶದ ಒಳಗೆ ಅನಾಹುತ ಸೃಷ್ಠಿಸಬಹುದು. ಇದನ್ನರಿತ ಕೇಂದ್ರ ಸರ್ಕಾರ ಸೇನೆ ಹಾಗೂ ಕಾಶ್ಮೀರ ಪೊಲೀಸರಿಗೆ ಸ್ವತಂತ್ರ ನೀಡಿ, ಕಲ್ಲುತೂರಾಟಗಾರರನ್ನು ಹತ್ತಿಕ್ಕಲು, ಅಗತ್ಯಬಿದ್ದರೆ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಿತ್ತು.
ಇದರ ಬೆನ್ನಲ್ಲೆ, ಮೂರು ದಿನಗಳ ಹಿಂದೆ ಅಂದರೆ ಫೆ.23ರಂದು ಜಮ್ಮು ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದ ಕೇಂದ್ರ ಸರ್ಕಾರ ಇದಕ್ಕಾಗಿ ಹೆಚ್ಚುವರಿಯಾಗಿ ಪ್ಯಾರಾ ಮಿಲಿಟರಿಯ 100ಕ್ಕೂ ಅಧಿಕ ಭಾರೀ ಪಡೆಗಳನ್ನು ನಿಯೋಜನೆ ಮಾಡಿದ್ದು ಗಮನಿಸಬೇಕಾದ ಅಂಶ.
ಇನ್ನು, ಗಡಿ ಪ್ರದೇಶದಲ್ಲಿ ವಾಸವಾಗಿರುವ ಬಹುತೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿರುವ ಸೇನೆ, ಯಾವುದೇ ನಾಗರಿಕರ ಪ್ರಾಣಹಾನಿಯಾಗದಂತೆ ಮುಂಜಾಗ್ರತಾ ಕ್ರಮಕೈಗೊಂಡಿದೆ.
ಇದರ ಜೊತೆಯಲ್ಲಿ ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳಲ್ಲಿ ಅನಧಿಕೃತವಾಗಿ ಹೈ ಅಲರ್ಟ್ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಎಂತಹುದ್ದೆ ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿಸಿಕೊಂಡಿದೆ.
ವಿಂಗ್ ಕಮಾಂಡರ್ ಭಕ್ಷಿ ಅವರ ಹೇಳಿಕೆಯಂತೆ ಭಾರತದ ಇಂದಿನ ದಾಳಿಯಿಂದ ಒಂದು ವೇಳೆ ಪಾಕ್ ಸೇನೆ ಅಥವಾ ಉಗ್ರರು ಪ್ರತಿದಾಳಿ ನಡೆಸಿದರೆ ಅದನ್ನು ಎದುರಿಸಲು ಅಗತ್ಯವಾಗಿರುವ ಎಲ್ಲ ರೀತಿಯ ಭದ್ರತಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಉಗ್ರರಿಗೆ ಸಹಕಾರ ನೀಡುತ್ತಿರುವ ಒಂದು ಪರಮಾಣು ಬಾಂಬ್ ಹೊಂದಿರುವ ರಾಷ್ಟದ ವಿರುದ್ಧ ದಾಳಿ ನಡೆಸಬೇಕು ಎಂದರೆ, ಶತ್ರುಗಳೂ ಸಹ ನಮ್ಮ ಮೇಲೆ ಪ್ರತಿದಾಳಿ ನಡೆಸುವ ಎಲ್ಲ ಸಾಧ್ಯತೆ, ಅದರ ಪರಿಣಾಮಗಳು ಹಾಗೂ ಅದನ್ನು ಎದುರಿಸಲೂ ಅಥವಾ ಹತ್ತಿಕ್ಕಲು ಅಗತ್ಯವಾಗಿರುವ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ.
ಇಂತಹ ವ್ಯವಸ್ಥಿತ ಸಿದ್ದತೆಯನ್ನು ಮಾಡಿಕೊಂಡಿರುವ ಮೋದಿ ಸರ್ಕಾರ ಹಾಗೂ ಭಾರತೀಯ ಸೇನೆ, ಪುಲ್ವಾಮಾ ದಾಳಿ ನಡೆದ 11 ದಿನಗಳ ನಂತರ ಪ್ರತಿದಾಳಿ ನಡೆಸಿ, ಉಗ್ರರನ್ನು ಹೊಡೆದು ಹಾಕುವ ಜೊತೆಯಲ್ಲಿ ನಮ್ಮ ಸೇನೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿರುವುದು ಹೆಮ್ಮೆಯ ಸಂಗತಿ..
















