ಚಳ್ಳಕೆರೆ: ನಗರದ ಕರೆಕಲ್ಲು ಕೆರೆ ಅಂಗಳದ ಸಮೀಪ ಪಂಪು ಹೌಸ್ ಹಿಂಭಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿದ್ದು, ಇಲ್ಲಿನ ಅಸ್ವಚ್ಛತೆ ಹಾಗೂ ಅವ್ಯವಸ್ಥೆಯಿಂದ ನರಳುತ್ತಿರುವ ಅಲೆಮಾರಿಗಳ ಗೋಳು ಕೇಳುವವರಿಲ್ಲದಾಗಿದೆ.
ವೆಂಕಟೇಶ ನಗರದ ಸನಿಹ ಸುಮಾರು ಹಲವು ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿವೆ. ಸೂಜಿದಾರ, ಹೇರ್’ಪಿನ್ ಮಾರಾಟ ಮಾಡುವುದು, ಕೂಲಿ ಮಾಡಿಕೊಂಡು ಜೀವನ ನಡೆಸುವ ಇವರುಗಳು ವಾಸಿಸುವ ಸ್ಥಳ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಪರಿಣಾಮ ಸಾಂಕ್ರಾಮಿಕ ರೋಗಕ್ಕೆ ಇವರು ಬಲಿಯಾಗುತ್ತಿದ್ದಾರೆ.
ಈಗಾಗಲೇ ಇಲ್ಲಿ ಸುಮಾರು ಮಕ್ಕಳು, ಗಂಡಸರು. ಗರ್ಭಿಣಿಯರು ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಇಲ್ಲಿ ವಾಸ ಮಾಡುವ ವ್ಯಕ್ತಿಗಳು ಟಿಬಿ, ಕಫ ಹಾಗೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಅಲ್ಲದೇ, ಇಲ್ಲಿನ ಕುಟುಂಬಗಳಲ್ಲಿ ಸುಮಾರು 25-30 ಚಿಕ್ಕ ಮಕ್ಕಳಿದ್ದು, ಅಪೌಷ್ಟಿಕತೆ ಎಂಬುದು ತಾಂಡವವಾಡುತ್ತಿದೆ. ಇಲ್ಲೇ ಇರುವ ಚಿಕ್ಕ ಅಂಗನವಾಡಿ ಕೇಂದ್ರ ಸ್ಥಳದ ಕೊರತೆಯಿಂದ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ ಎಂಬುದು ಗಮನಾರ್ಹ ವಿಚಾರ.
ಕೂಲಿಯಿಂದ ಜೀವನ ನಡೆಸುತ್ತಿರುವ ನಾವು ವಾಸ ಮಾಡುವ ಸ್ಥಳ ಸರಿಯಿಲ್ಲದ ಕಾರಣ ಚಳಿ, ಜ್ವರ ಬಂದರೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ಹೋಗಬೇಕಾದರೆ ರಾತ್ರಿ ವೇಳೆ ಆಟೋ ಬಾಡಿಗೆ 30 ರಿಂದ 50 ರೂ. ಕೇಳುತ್ತಾರೆ. ಅಷ್ಟು ಹಣ ನೀಡಿ ತೆರಳುವ ಶಕ್ತಿ ನಮಗಿಲ್ಲ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
ಇಲ್ಲಿನ ಹರಡುತ್ತಿರುವ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇದುವರೆಗೂ ಸುಮಾರು 25 ಜನರು ಮೃತಪಟ್ಟಿದ್ದು, ಈಗ ಗಂಡಸರ ಸಂಖ್ಯೆ ಕಡಿಮೆಯಾಗಿ ಮಹಿಳೆಯರ ಸಂಖ್ಯೆ ಅದರಲ್ಲೂ ವಿಧವೆಯರೇ ಹೆಚ್ಚಾಗಿದ್ದಾರೆ. ಆದ್ದರಿಂದ ಇಲ್ಲಿ ತುರ್ತು ಚಿಕಿತ್ಸೆ ನೀಡಲು ಒಂದು ಆರೋಗ್ಯ ಕೇಂದ್ರ ತೆರೆಯಬೇಕು ಎಂದು ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
Discussion about this post