ಶಿಕಾರಿಪುರ: ಇಲ್ಲಿನ ಪ್ರಸಿದ್ದ ಶ್ರೀ ಹುಚ್ಚುರಾಯಸ್ವಾಮಿಯ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಶಿಕಾರಿಪುರಕ್ಕೆ ಶುಕ್ರವಾರ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪಕ್ಷದ ಸ್ಟಾರ್ ಪ್ರಚಾರಕ ಯಡಿಯೂರಪ್ಪ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪುತ್ರ ಬಿ.ವೈ. ರಾಘವೇಂದ್ರ ಪರ ಮತಯಾಚಿಸಿದರು.
ರಥೋತ್ಸವದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ನಂತರ ನೇರವಾಗಿ ತಾಲೂಕಿನ ಕಪ್ಪನಹಳ್ಳಿ ಅಮಟೆಕೊಪ್ಪ, ಹಿರೇಜಂಬೂರು, ಮಂಚಿಕೊಪ್ಪ ಮತ್ತಿತರ ಕಡೆಗಳಲ್ಲಿ ಪ್ರಚಾರ ಭಾಷಣ ಮಾಡಿದರು.
ಕೃಷಿ ಚಟುವಟಿಕೆಗೆ ತಾಲೂಕಿನ ಎಲ್ಲಾ ನೀರಾವರಿ ಯೋಜನೆಯ ಅನುಷ್ಠಾನ ಪ್ರಮುಖ ಆದ್ಯತೆಯಾಗಿದ್ದು ಕಲ್ಲು ಒಡ್ಡು ಯೋಜನೆ ಶೀಘ್ರದಲ್ಲಿಯೇ ಆರಂಭವಾಗುವುದು ಶೇ.100ರಷ್ಟು ಖಚಿತ ಎಂದು ತಿಳಿಸಿದರು. ಪ್ರತಿಪಕ್ಷ ನಾಯಕನಾಗಿ ತಾಲೂಕಿನ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸುವ ಜವಾಬ್ದಾರಿಯಿದ್ದು ಈ ಕಾರ್ಯಕ್ಕೆ ಕಂಕಣಬದ್ದರಾಗಿರುವುದಾಗಿ ಭರವಸೆ ನೀಡಿದರು.
ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 3 ಸಾವಿರ ಮಾಸಾಶನ, ಕೃಷಿ ಚಟುವಟಿಕೆಗೆ ವಾರ್ಷಿಕ ಎಲ್ಲಾ ಕೃಷಿಕರಿಗೆ 6 ಸಾವಿರ ನೀಡಲಿದೆ ದೇಶವನ್ನು ಸಂಪೂರ್ಣ ಗುಡಿಸಲು ಮುಕ್ತವಾಗಿಸಲು ಯೋಜನೆ, ಮಹಿಳೆಯರಿಗೆ ಆರ್ಥಿಕ ಚಟುವಟಿಕೆಗಾಗಿ 50 ಸಾವಿರ ಜಾಮೀನು ರಹಿತ ಸಾಲ ಮತ್ತಿತರ ಹಲವು ಯೋಜನೆಯನ್ನು ಮೋದಿ ಘೋಷಿಸಿದ್ದಾರೆ ಎಂದು ತಿಳಿಸಿದರು.
ನೀರಾವರಿ ಸಹಿತ ತಾಲೂಕಿನ ಸಮಗ್ರ ಅಭಿವೃದ್ದಿಗೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರಿಗೆ ಮತಚಲಾಯಿಸುವ ಮೂಲಕ ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರತ್ಯೇಕವಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಬೇಗೂರು, ಮುದ್ದನಹಳ್ಳಿ, ಹೊಸೂರು, ಗೊಗ್ಗ, ಕಾಗಿನಲ್ಲಿ, ಮಾರವಳ್ಳಿ, ಬಗನಕಟ್ಟೆ, ಮತ್ತಿಕೋಟೆ, ಗುಡ್ಡದ ತುಮ್ಮಿನಕಟ್ಟೆ ಮತ್ತಿತರ ಕಡೆ ಬಿರುಸಿನ ಚುನಾವಣಾ ಪ್ರಚಾರ ಭಾಷಣ ಮಾಡಿದರು.
ಶಿಕಾರಿಪುರ ತಾಲೂಕಿನ ಅಭಿವೃದ್ದಿ ಬಗ್ಗೆ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಹೊಟ್ಟೆಕಿಚ್ಚು ಹೆಚ್ಚಾಗಿ ಜಿಲ್ಲಾಸ್ಪತ್ರೆಯನ್ನು ವರ್ಗಾಯಿಸಲು ಪಿತೂರಿ ನಡೆಸಿದರು. ಸೊರಬ ಶಾಸಕರಾದ ಅವಧಿಯಲ್ಲಿ ಕ್ಷೇತ್ರ ಅಭಿವೃದ್ದಿಗೊಳಿಸಲಾಗದ ಮಧುಗೆ ಜನತೆ ಸೂಕ್ತ ಉತ್ತರ ನೀಡಿದ್ದು ಯಡಿಯೂರಪ್ಪನವರ ನೇತೃತ್ವದಲ್ಲಿ ಕುಮಾರ್ ಬಂಗಾರಪ್ಪನವರನ್ನು ಆಯ್ಕೆಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ತಾಲೂಕಿನ ನೀರಾವರಿ ಬಗ್ಗೆ ಮಧು ಮಾತನಾಡುತ್ತಾರೆ. ಆದರೆ, ಅವರ ತಂದೆ ಬಂಗಾರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸೊರಬದಲ್ಲಿ ಶಾಶ್ವತ ನೀರಾವರಿ ಯೋಜನೆ ಏಕೆ ಅನುಷ್ಠಾನಗೊಳಿಸಲಿಲ್ಲ ಎಂದು ಪ್ರಶ್ನಿಸಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ನೀರಿನ ಸಮಸ್ಯೆಯಿರಲಿಲ್ಲ ವಿದ್ಯುತ್ ಸಮಸ್ಯೆ ಅಧಿಕವಾಗಿದ್ದರಿಂದ ತಾಲೂಕಿನಾದ್ಯಂತ ಹಲವು 220 ಕೆವಿ ವಿದ್ಯುತ್ ಘಟಕವನ್ನು ನಿರ್ಮಿಸಿ ಕೆರೆಕಟ್ಟೆಗಳ ಹೂಳು ತೆಗೆಸಿದ್ದಾಗಿ ತಿಳಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾತ್ಯತೀತ, ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದ್ದರಿಂದ ತಾಲೂಕಿನ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳ ಅರಿವಿಗೆ ಬಾರದ ರೀತಿ ಮಂಜೂರಾತಿ ದೊರಕಿದ್ದು, ನೀರಾವರಿ ನಿಗಮದ ಸಭೆಯಲ್ಲಿ ಎಚ್ಡಿಕೆ ನೀರಾವರಿಗೆ ಹಣ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದಾಗ ಹಿರಿಯರು ಹಾಗೂ ಯಡಿಯೂರಪ್ಪನವರ ಹೆಸರಿನ ತಾಕತ್ತಿನಲ್ಲಿ ಮಂಜೂರಾತಿ ದೊರಕಿದೆ ಎಂದು ಸ್ಪಷ್ಟಪಡಿಸಿದರು.
ಸಂಸದನಾಗಿ ದೊರೆತ ಅವಕಾಶದಲ್ಲಿ ಜಿಲ್ಲೆಗೆ ಕೇಂದ್ರೀಯ ವಿವಿ, ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ 150 ಎಕರೆ ಗಣಿ ಮಂಜೂರು, ರೈಲ್ವೆ ಯೋಜನೆ,100 ಕೋಟಿ ವೆಚ್ಚದ ಇಎಸ್ಐ ಆಸ್ಪತ್ರೆ ಕಾಮಗಾರಿ ಆರಂಭ, ಸಿಗಂಧೂರು ಸೇತುವೆ ಮತ್ತಿತರ ಹಲವು ಯೋಜನೆಗೆ ಚಾಲನೆ ನೀಡಲಾಗಿದೆ ಎಂದ ಅವರು, ನಮ್ಮ ಮನೆ ಮಕ್ಕಳನ್ನು ನಮ್ಮವರು ಎಂದು ಹೇಳುವ ಅಭ್ಯಾಸವಿದ್ದು ಇನ್ನೊಬ್ಬರ ಮಕ್ಕಳನ್ನು ನಮ್ಮ ಮಕ್ಕಳು ಎಂದು ಹೇಳುವ ಕೆಟ್ಟ ಸಂಸ್ಕೃತಿ ನಮ್ಮದಲ್ಲ ಎಂದು ಛೇಡಿಸಿದರು.
ಚುನಾವಣಾ ಫಲಿತಾಂಶದ ನಂತರದಲ್ಲಿ ಮೋದಿ ಪುನಃ ಪ್ರಧಾನಿಯಾದ 2 ವಾರದಲ್ಲಿ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದ್ದು, ಇದಕ್ಕಾಗಿ ಆಪರೇಷನ್ ಕಮಲದ ಅಗತ್ಯವಿಲ್ಲ ಕಾಂಗ್ರೆಸ್ ಶಾಸಕರು ಸ್ವಯಂಪ್ರೇರಿತರಾಗಿ ಬಿಜೆಪಿ ಕಡೆ ಬರಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಎಲ್ಲೆಡೆ ಮೋದಿ ಹಾಗೂ ಯಡಿಯೂರಪ್ಪನವರಿಗೆ ಜೈಕಾರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
(ವರದಿ: ರಾಜಾರಾವ್ ಜಾಧವ್, ಪ್ರತಿನಿಧಿ, ಶಿಕಾರಿಪುರ)
Discussion about this post