ಪ್ರತಿ ಮಳೆಗಾಲ ಬಂತೆಂದರೆ ಸಾಕು ಹೋದ ವರ್ಷ ಜಾಸ್ತಿ ಮಳೆಯಾಗಿತ್ತು, ಈ ವರ್ಷ ಕಡಿಮೆ ಮತ್ತೆ ಎಷ್ಟು ತಡವಾಗಿ ಬಂತು ಅಂತ ಮಾತನಾಡುವುದು ಸಾಮಾನ್ಯವಾಗಿಬಿಟ್ಟಿದೆ. ಜೊತೆಗೆ ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ, ಆಗೆಲ್ಲಾ ಆರಿದ್ರಾ ಮಳೆಗೆ ಹಬ್ಬನೇ ಮಾಡ್ತಿದ್ವಿ ಅಂತ ಹೇಳುವ ಹಿರಿಯರು ಇದ್ದೇ ಇರುತ್ತಾರೆ. ಈಗಲೂ ಹಬ್ಬ ಆಚರಿಸ್ತಾರೆ ಮಳೆ ಬರದೇ ಇದ್ದರೂ ಅನ್ನುವುದು ಬೇರೆ ವಿಚಾರ. ಹಾಗಾದರೆ ಮಳೆ ಎಲ್ಲಿ ಹೋಯಿತು?! ಅದೇನು ಗೊತ್ತಿಲ್ಲದ ವಿಷಯ ಏನಲ್ಲ. ತಾಯಿಯ ಕತ್ತು ಕೊಯ್ದು ಮೊಲೆ ಚೀಪಿದರೆ ಹಾಲಾದರೂ ಹೇಗೆ ಬಂದೀತು?
ಮಳೆ ಅಭಾವ ಕಂಡರೂ ಎಚ್ಚೆತ್ತವರು ಕಡಿಮೆ. ಯಾಕೆ ಗೊತ್ತೇ? ಇನ್ನೂ ಅನಿವಾರ್ಯ ಅನ್ನುವ ಪರಿಸ್ಥಿತಿ ಬಂದಿಲ್ಲವಲ್ಲ. ಯಾವಾಗ ಮನೆಯಲ್ಲಿ ಏನೋ ಒಂದು ಪದಾರ್ಥ ಖಾಲಿಯಾದರೆ, ಈ ಕಡೆ ಪಕ್ಕದ ಮನೆಯಲ್ಲಿ ತೆಗೆದುಕೊಳ್ಳುವುದು, ಅದೂ ಖಾಲಿ ಅದರೆ ಆ ಕಡೆ ಪಕ್ಕದ ಮನೆ, ಅದೂ ಆದ ಮೇಲೆ ಎದುರು, ಹಿಂದೆ…. ಊಹೂಂ ಸಾಕಾಗಲಿಲ್ಲ. ಹಾಗಾದರೆ ಇದು ಶಾಶ್ವತ ಪರಿಹಾರವೇ? ಅಲ್ಲ. ಓಹೋ ಆ ಪದಾರ್ಥ ಬಳಸುವುದು ಬಿಡಬೇಕು, ಅದೂ ಆಗಲ್ಲ. ಎಲ್ಲಿಯ ತನಕ ಹೀಗೆ ತುರ್ತುಗಳನ್ನು ಪೂರೈಸುತ್ತಾ, ದೀರ್ಘ ಕಾಲವನ್ನು ತಳ್ಳಲು ಸಾಧ್ಯ? ಕಾವೇರಿ ಬರಿದಾದಳು ಅಂತ ಶರಾವತಿ, ನಂತರ ತುಂಗಭದ್ರಾ ಆಮೇಲೆ ಮತ್ತೊಂದು ಅಂತ ಹೊರಟರೆ ಇಷ್ಟು ವರ್ಷ ನೀರು ಕೊಟ್ಟ ಆ ತಾಯಿಗೆ ಏನು ಕೊಟ್ಟಿರಿ? ಮತ್ತು ಶರಾವತಿ, ತುಂಗಭದ್ರಾ ಅಂತ ಇನ್ನೆಷ್ಟು ಕಾಲ ಮುಂದೂಡುವಿರಿ? ಶಾಶ್ವತ ಪರಿಹಾರ ಎಂದು?
ಇಂತಹ ಆಲೋಚನೆಯ ಎಲ್ಲರಿಗಿಂತ ಮೊದಲು ಅರಿತ ಇಮ್ಮಡಿ ಮೋದಿ ಸರ್ಕಾರ ಜಲಶಕ್ತಿ ಇಲಾಖೆಯನ್ನೇ ಹುಟ್ಟು ಹಾಕಿ, ಸಚಿವರನ್ನು ನೇಮಿಸಿತು. ಗಜೇಂದ್ರ ಸಿಂಗ್ ಶೇಖಾವತ್ ಕೇಂದ್ರ ಜಲಶಕ್ತಿ ಸಚಿವರಾಗಿ ಪದಗ್ರಹಣ ಮಾಡಿದ ದಿನದಿಂದ ಹೊಸ ಸಚಿವಾಲಯದ ಕಾರ್ಯದ ಬಗ್ಗೆ ಎಲ್ಲರೂ ದೃಷ್ಟಿ ನೆಟ್ಟಿದ್ದರು. 256 ಜಿಲ್ಲೆಗಳ 1592 ಬ್ಲಾಕ್ಗಳಲ್ಲಿ ನೀರಿನ ಸಂರಕ್ಷಣೆ ಮತ್ತು ಸುರಕ್ಷತೆ ಕುರಿತು ಅಭಿಯಾನ ಆರಂಭಿಸಲಾಯಿತು. ಕೇಂದ್ರ ಸರಕಾರದ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ನಾಮ ನಿರ್ದೇಶಿತ ಇಬ್ಬರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಈ ಎಲ್ಲಾ ಗುರುತಿಸಿದ ಪ್ರದೇಶಗಳಿಗೆ ಭೇಟಿ ನೀಡಲಿದೆ. ಅಭಿಯಾನವೇ ಜಲಶಕ್ತಿ ಕುರಿತು ಇರುವಾಗ ಆ ಸಮಿತಿಯ ಕಾರ್ಯಗಳು ಹೀಗಿವೆ.
- ನೀರಿನ ಸಂರಕ್ಷಣೆ ಮತ್ತು ಮಳೆ ಕೊಯ್ಲು
- ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಜಲಮೂಲ ನವೀಕರಣ.
- ನೀರಿನ ಪುನರ್ ಬಳಕೆ ಮತ್ತು ಬೋರ್ ವೆಲ್ಗಳ ಭರ್ತಿ.
- ಜಲಾನಯನ ಪ್ರದೇಶಗಳ ಅಭಿವೃದ್ದಿ.
- ತೀವ್ರವಾದ ಅರಣ್ಯೀಕರಣ.
ಏನಿದು? ಎಲ್ಲಾ ಮೊದಲೇ ಇದ್ದ ಅಂಶಗಳು ಎನಿಸಬಹುದು. ಸ್ವಚ್ಛವಾಗಿರಬೇಕು ಎಂಬುದೂ ಗೊತ್ತಿತ್ತು ಆದರೆ ಸ್ವಚ್ಛ ಭಾರತ ಬಂದ ಮೇಲೆ ಅದರ ಪರಿಯೇ ಬದಲಾಯಿತು. ಹಾಗೆಯೇ ಜಲಶಕ್ತಿಯ ಒಂದು ಸಚಿವಾಲಯ ರೂಪುಗೊಂಡು ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ಒಳ ಹೊರಗು ಕುರಿತು ನೋಡಲು ಕುಳಿತರೆ ಅಲ್ಲಿ ಗಮನಾರ್ಹ ಪ್ರಗತಿ ಕಾಣಲು ಸಾಧ್ಯ. ದೂರದೃಷ್ಟಿ ಹೊತ್ತಿರುವ ಜಲಶಕ್ತಿ ಅಭಿಯಾನ ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
ಮಳೆಗಾಲ – ಜುಲೈ 01, 2019 ರಿಂದ ಸೆಪ್ಟೆಂಬರ್ 15, 2019 ರ ವರೆಗೆ.
ಹೆಚ್ಚುವರಿಯಾಗಿ, ಅಕ್ಟೋಬರ್ 01, 2019 ರಿಂದ ನವೆಂಬರ್ 30, 2019 ರ ತನಕ.
ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಸಾವಿರಾರು ಅಭಿಯಾನಗಳ ಹೊತ್ತು ತಂದರೂ ಅವುಗಳ ಯಶಸ್ಸು ಇರುವುದು ಜನರ ಕೈಯಲ್ಲಿ. ಹಾಗೆಯೇ ಇಲ್ಲಿ ಕೂಡ ಹಲವಾರು ಸಿನಿಮಾ ಮತ್ತು ಕ್ರೀಡಾ ರಂಗದ ಪ್ರಸಿದ್ಧರು ಈಗಾಗಲೇ ಮೆಚ್ಚುಗೆ ಮಾತುಗಳಾಡಿದ್ದಾರೆ. ಅಂತೆಯೇ ಸಾರ್ವಜನಿಕರಲ್ಲದೇ ಸ್ವಸಹಾಯ ಸಂಘಗಳು, NSS, NCC, ಶಾಲಾ ಕಾಲೇಜುಗಳು, ಪಂಚಾಯಿತಿಗಳು, ಮಾಜಿ ಸೈನಿಕರು ಮತ್ತು ಪಿಂಚಣಿದಾರರಂತಹ ವಲಯದಿಂದ ಹೆಚ್ಚಿನ ಪ್ರಮಾಣದಲ್ಲಿ ಸಹಯೋಗ ನಿರೀಕ್ಷಿಸಲಾಗಿದೆ.
ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾದ ನೀರಿನ ಕುರಿತು ಒಂದು ಸದೃಢ ಇಲಾಖೆ ಮತ್ತು ಯೋಜನೆ ಆರಂಭವಾಗಿದೆ. ಅಲ್ಲದೆ ನೇಮಕವಾದ ಸಚಿವರು ಸಹ ಹೆಚ್ಚು ಉತ್ಸಾಹಿಗಳು ಹಾಗೂ ಸಕ್ಷಮರು. ಈ ಯೋಜನೆಯು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕಾರ್ಯ ನಿರ್ವಹಿಸಲಿದ್ದು, ಅಭಿಯಾನವಾಗಿ ರೂಪುಗೊಂಡಿದ್ದು ಹೆಚ್ಚಿನ ಸಾರ್ಥಕತೆ ಹೊಂದಲು ನೆರವಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ಈಗಿನ ಮಕ್ಕಳು ಅವರ ಕಾಲಕ್ಕೆ ಆರಿದ್ರಾ ಮಳೆಯ ಹಬ್ಬವನ್ನು ತೋರಿಕೆಗಲ್ಲ, ವಿಜೃಂಭಣೆಯಿಂದ ಆಚರಿಸಬಹುದು.
ಲೇಖನ: ಸಚಿನ್ ಪಾರ್ಶ್ವನಾಥ್
Discussion about this post