ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಮ್ಮ ವಾರ್ಡ್ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಹಾದು ಹೋಗಿರುವ ರಾಜಕಾಲುವೆ ಅವ್ಯವಸ್ಥೆ ಹಾಗೂ ಅಪೂರ್ಣ ಕಾಮಗಾರಿಯಿಂದ, ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ ಎಂದು ಕಾರ್ಪೋರೇಟರ್ ರೇಖಾ ರಂಗನಾಥ್ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಭಾನುವಾರ ರಾತ್ರಿ ನಗರದಲ್ಲಿ ಬಿದ್ದ ಧಾರಾಕಾರ ಮಳೆಯ ವೇಳೆ, ರಾಜಕಾಲುವೆ ಉಕ್ಕಿ ಹರಿದಿದ್ದರಿಂದ ಹೊಸಮನೆ ಬಡಾವಣೆ 6 ನೇ ಮುಖ್ಯರಸ್ತೆಯ ಇಕ್ಕೆಲಗಳ ಕ್ರಾಸ್ ಗಳಲ್ಲಿ ಸುಮಾರು 150 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ ಎಂದರು.
ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸಿದರು. ವಿಷಯ ತಿಳಿಯುತ್ತಿದ್ದಂತೆ ತಾವು ಪಾಲಿಕೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದು, ಕೆಲ ಎಂಜಿನಿಯರ್’ಗಳು ರಾತ್ರಿಯೇ ಭೇಟಿಯಿತ್ತು ಪರಿಶೀಲಿಸಿದರು. ಆದರೆ ಇಲ್ಲಿಯವರೆಗೂ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ್ಯಾರು ಸ್ಥಳಕ್ಕೆ ಭೇಟಿಯಿತ್ತು ನಿವಾಸಿಗಳ ಆಹವಾಲು ಆಲಿಸಲು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳ ಹಿಂದೆ, ಅಮೃತ್ ಯೋಜನೆಯಡಿ ರಾಜಕಾಲುವೆ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ಹೊಸಮನೆ ಭಾಗದಲ್ಲಿ ಸುಮಾರು 400 ಮೀಟರ್’ನಷ್ಟು ಕಾಮಗಾರಿ ಬಾಕಿ ಉಳಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಳಿಸುವಂತೆ ತಾವು ಪಾಲಿಕೆ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಇಲ್ಲಿಯವರೆಗೂ ಕಾಮಗಾರಿ ನಡೆಸಿಲ್ಲ. ಇದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.
ಈ ಹಿಂದೆ ತಾವು ರಾಜಕಾಲುವೆಗಳ ಅವ್ಯವಸ್ಥೆ ಹಾಗೂ ಹೂಳು ತುಂಬಿಕೊಂಡಿರುವ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಮನ ಸೆಳೆದಿದ್ದೆ. ಈ ವೇಳೆ ಮೇಯರ್ ಅವರು ತಾವು ಹೇಳುತ್ತಿರುವುದು ಸುಳ್ಳು ಎಂದಿದ್ದರು. ಆದರೆ ಸದ್ಯ ಹೊಸಮನೆ ಸೇರಿದಂತೆ ನಗರದ ಹಲವೆಡೆ ರಾಜಕಾಲುವೆ ಅವ್ಯವಸ್ಥೆಯಿಂದ ಮನೆ ಹಾಗೂ ರಸ್ತೆಗಳು ಜಲಾವೃತವಾಗಿರುವುದಕ್ಕೆ ಏನು ಹೇಳುತ್ತಾರೆ? ಎಂದು ಇದೇ ವೇಳೆ ರೇಖಾ ರಂಗನಾಥ್ ರವರು ತರಾಟೆಗೆ ತೆಗೆದುಕೊಂಡಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post