ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ದಶಕದಿಂದ ತನ್ನದೇ ಆದ ಛಾಪು ಮೂಡಿಸಿ, ಇಂದಿಗೆ ಬೃಹದಾಕಾರವಾಗಿ ಬೆಳೆದುನಿಂತಿರುವ ಎಚ್ಚರಿಕೆ ಪತ್ರಿಕೆ ನಮ್ಮ ಆತ್ಮೀಯರಾದ ಸೂರ್ಯ ನಾರಾಯಣ ಅವರದ್ದು ಎಂಬುದು ಸಂತಸದ ವಿಚಾರ.
ನನ್ನ 10 ವರ್ಷದ ಪತ್ರಿಕಾರಂಗದ ಸಣ್ಣ ಅನುಭವದಲ್ಲಿ ಹೇಳುವುದಾದರೆ ನಾನು ಈ ಕ್ಷೇತ್ರಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಸೂರ್ಯ ನಾರಾಯಣ ಅವರ ಪರಿಚಯವಾಗಿದ್ದು ಮಾತ್ರವಲ್ಲ, ಮೊದಲ ಭೇಟಿಯಲ್ಲೇ ಆತ್ಮೀಯರಂತೆ ಮಾತನಾಡಿಸಿದ್ದು, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅಂದಿನಿಂದ ಇಂದಿನವರೆಗೂ ಹಲವು ಹಂತದಲ್ಲಿ ಅವರ ಸಲಹೆಗಳು ನನಗೆ ಮಾರ್ಗದರ್ಶಿಯಾಗಿವೆ ಎಂದರೆ ತಪ್ಪಾಗಲಾರದು.
ಇಂತಹ ವ್ಯಕ್ತಿಯ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ ಎಚ್ಚರಿಕೆ ಪತ್ರಿಕೆಗೀಗ ದಶಕದ ಸಂಭ್ರಮ. ಈ ಸಂದರ್ಭದಲ್ಲಿ ಆತ್ಮೀಯರಾದ ಸೂರ್ಯ ನಾರಾಯಣ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಇದೇ ವೇಳೆ ಹಿರಿಯರು, ಗುರು ಸಮಾನರೂ, ಕಲ್ಪ ಮೀಡಿಯಾ ಹೌಸ್ ಹಿರಿಯ ಸಲಹಾ ಸಂಪಾದಕರೂ ಆದ ಶ್ರೀ ಡಾ.ಎನ್. ಸುಧೀಂದ್ರ ಅವರು ಎಚ್ಚರಿಕೆ ಪತ್ರಿಕೆಯ ಸಂಪಾದಕರಾದ ಸೂರ್ಯ ನಾರಾಯಣ ಅವರ ಕುರಿತಾಗಿ ಬರೆದಿದ್ದಾರೆ… ಓದಿ…
-ಎಸ್.ಆರ್. ಅನಿರುದ್ಧ ವಸಿಷ್ಠ
ಸಂಪಾದಕರು, ಕಲ್ಪ ಮೀಡಿಯಾ ಹೌಸ್
ಈ ಬೆಳಿಗ್ಗೆ ಮಿತ್ರ ಲಕ್ಷ್ಮೀ ನಾರಾಯಣ ಕಾಶಿ ಫೋನಾಯಿಸಿದರು. ನೀನು, ಶರ್ಮ ಬನ್ನಿ. ಪ್ರವಾಸೋದ್ಯಮ ವೇದಿಕೆ ಚಟುವಟಿಕೆ ಮಾತಾಡುವುದಿದೆ ಎಂದರು. ಸರಿ, ನಾನು ಶರ್ಮ ಅವರ ಬಳಿ ಇದ್ದೆವು. ನಮ್ಮ ಯಾವುದೇ ಸಂವಾದವಿದ್ದರು ನಡುವೆ ಮಾಧ್ಯಮಗಳ ಬಗ್ಗೆ ಒಂದಿಷ್ಟು ಉಪ್ಪಿನಕಾಯಿ ತರ ಅದು ಪ್ರಸ್ತಾಪಕ್ಕೆ ಬರುತ್ತಿತ್ತು.
ಒಂದಿಷ್ಟು ಮಾತುಕತೆಯಾಗುತ್ತಿದ್ದಂತೆ ಸೂರ್ಯನಾಯಣನನ್ನ ಕಂಡು ಒಂದು ಅಭಿನಂದನೆ ಹೇಳಣ ಅಂದರು. ಸೂರ್ಯನಾರಾಯಣ ಉರುಫ್ ಸೂರಿ ನನಗೆ ಬಹಳ ವರ್ಷಗಳಿಂದಲೂ ಮಿತ್ರರು. ನಾನು ಆಕಾಶವಾಣಿಯ ವರದಿಗಾಗಿ ಕಾರ್ಯಕ್ರಮಗಳಿಗೆ ಬಂದಾಗ ಬಹಳಷ್ಟು ಶಿವಮೊಗ್ಗ ಪತ್ರಿಕಾ ಮಿತ್ರರು ಭೇಟಿಯಾಗುತ್ತಿದ್ದರು. ಆ ನಗುಮುಖಗಳಲ್ಲಿ ಸೂರಿಯವರದೂ ಒಂದು.
ಅವರು ಮುಂಚೆ ನಾಗೇಂದ್ರರಾವ್ ನಡೆಸುತ್ತಿದ್ದ ಎಚ್ಚರಿಕೆ ಪತ್ರಿಕೆ ತಾವೇ ವಹಿಸಿಕೊಂಡು ಸಂಪಾದಕರಾಗಿ ಎಚ್ಚರಿಕೆಯಿಂದಲೇ ನಡೆದುಕೊಂಡು ಬಂದಿದ್ದಾರೆ. ಪತ್ರಿಕಾರಂಗದಲ್ಲಿ ಅನುಭವ ಪಡದೇ ಈ ಸಾಹಸಕ್ಕೆ ಧುಮುಕಿದವರು. ಮಾಧ್ಯಮಗಳೆಂದರೆ ಅವು ಹೂವಿನ ಹಾಸಿಗೆ ಅಥವಾ ಸಿದ್ಧಪಡಿಸಿದ ವೃತ್ತಿಯಲ್ಲ. ಅದನ್ನ ಯಾರು ಹಿಡಿಯುತ್ತಾರೋ ಅದು ಅವರನ್ನೇ ಸುತ್ತಿಕೊಳ್ಳುವ ಅಜಗರ. ಅಕ್ಷರ ಹಸಿವಿನ ರಕ್ಕಸ. ಮಾಧ್ಯಮಗಳು, ವಿದ್ಯಮಾನ ಮಿಡಿತಗಳ ಸಮ್ಮಿಲನ. ನಮ್ಮ ದೇಶೀಯ ಇತಿಹಾಸದಲ್ಲಿ ಮಾಧ್ಯಮಗಳ ಮೂಲಸ್ರೋತ ಬಹಳ ಚೇತನಶೀಲ. ಸಂವಹನಗಳು ಬೆಳೆದು ಒಂದೊಂದು ರೂಪ ಪಡೆದವು. ಭಾಷೆಯೂ ಕೂಡ ಅಷ್ಟೇ ಪ್ರಭಾವಶೀಲತೆ ಪಡೆಯಿತು. ಆಂಗಿಕ ಚಲನೆ, ಮಾತು, ಹಾಡು, ರಂಗ, ಬೊಂಬೆ ನೆರಳು ಬೆಳಕು, ಚಿತ್ರಕಲೆ, ಮುದ್ರಣ ಮಾಧ್ಯಮ ದೂರವಾಣಿ, ಸಿನಿಮಾ. ಹೀಗೆ ಅದರ ದಾರಿ.
ವಿದ್ಯುನ್ಮಾನದ ಆವಿಷ್ಕಾರವಾಗಿ ರೇಡಿಯೊ, ಟಿವಿ, ಉಪಗ್ರಹ ಸಂಪರ್ಕ. ಇತ್ಯಾದಿ ಈಗ ಸದ್ಯ ವರ್ತಮಾನ. ಇಷ್ಟು ರೋಚಕವಾಗಿರುವ ಮಾಧ್ಯಮ ಕ್ಷೇತ್ರದಲ್ಲಿ ಒಂದು ಪತ್ರಿಕೆ ನಡೆಸುವುದೆಂದರೆ ಸಾಮಾನ್ಯದ ಮಾತಲ್ಲ. ಈಗ ಸೂರಿ ಅವರ ಎಚ್ಚರಿಕೆಗೆ ಹತ್ತು ವರ್ಷ ತುಂಬಿದೆ. ವರ್ಣರಂಜಿತ ಜಾಹೀರಾತಿನ ಪುಟ ತೋರಿಸಿ ಜಿಲ್ಲಾ ಮಟ್ಟದಲ್ಲಿ ಈ ರೀತಿ ದಿನಪತ್ರಿಕೆ ತರುವುದು ಅತ್ಯಂತ ಸವಾಲಿನ ಕೆಲಸ. ಬಿಪಿ ಏರದಂತೆ, ಸಕ್ಕರೆ ಜಾಡ್ಯ ಸುಳಿಯದಂತೆ ವರ್ಷ ವರ್ಷವೂ ಹೆಜ್ಜೆ ಹಾಕುವುದಿದೆಯಲ್ಲ ಅದು ಗತಿ ಬಿಡಿಸುತ್ತದೆ ಎಂದರು.
ಸುದ್ದಿ ಬೇಕು ನಿಜ. ಅದೊಂದೇ ಸಾಲದು. ಬೆನ್ನುಮೂಳೆಯಾಗಿ ಜಾಹೀರಾತೂ ಬೇಕು. ಪತ್ರಿಕೆ ಸಾರವತ್ತಾಗಿರಲು ತಕ್ಕಂತಹವರ ಸಾಥ್ ಇರಬೇಕು. ಅದಕ್ಕೆ ಸರಿಯಾಗಿ ಕನ್ನಡಪ್ರಭ ಹಿರಿಯ ವರದಿಗಾರ ಅನುಭವಿ ಹೊನ್ನಾಳಿ ಚಂದ್ರು ಇದ್ದಾರೆ. ಅದು ಸೂರಿ ಅವರ ಅದೃಷ್ಟವೆಂದೇ ಹೇಳಬೇಕು. ಕಲಾವಿದ, ನ್ಯಾಯವಾದಿ ಹೀಗೆ ಬಹುಮುಖಿ ಚಂದ್ರು ಅವರ ವ್ಯಕ್ತಿತ್ವ.
ಸಿಹಿಮೊಗೆಯ ಪತ್ರಿಕಾ ಚರಿತ್ರೆಯಲ್ಲಿ ಬಹಳ ಆಗಿಹೋಗಿವೆ. ಉತ್ತಮ ಪತ್ರಕರ್ತರಿದ್ದಾರೆ, ಯಶಸ್ವಿ ಸಂಪಾದಕರಿದ್ದಾರೆ. ವೈವಿಧ್ಯಮಯತೆಗೆ ಶೃಂಗೇಶ್, ಟೆಲೆಕ್ಸ್ ರವಿ, ಶಿವಕುಮಾರ್, ಶ್ರೀನಿವಾಸ್, ಅಂಜನಪ್ಪ, ಪಾಶಾ ಹೀಗೆ ಪಟ್ಟಿ ದೊಡ್ಡದಾಗುತ್ತದೆ.
ಸದ್ಯ ಎಚ್ಚರಿಕೆ ದಶಮಾನೋತ್ಸವಕ್ಕೆ ಕಾಲಿಟ್ಟಿದೆ. ಜಿಲ್ಲೆಯ ಸರ್ವತೋಮುಖ ಪ್ರಗತಿಯ ಆಶಯದೊಂದಿಗೆ ಮುನ್ನಡೆಯಲಿ. ಇದೇ ನಮ್ಮೆಲ್ಲರ ಹಾರೈಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post