ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರ ಹಾಗೂ ವಿಶ್ವವಿಖ್ಯಾತ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಸಕ್ರೆಬೈಲು ಅನೆ ಬಿಡಾರ ಇಗಾಗಲೆ ಪ್ರವಾಸಿಗರ ಆಕರ್ಷಿಕತಾಣವಾಗಿದ್ದು. ಇದರ ಸಮಗ್ರ ಅಭಿವೃದ್ಧಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸೋಧ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಚನೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿದೆ. ಇದರಿಂದಾಗಿ ಉದ್ದೇಶಿತ ಸಕ್ರೇಬೈಲು ಆನೆ ಬಿಡಾರವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದರ ಮೂಲಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನೆರವಾಗುತ್ತದೆ ಎಂದರು.
ಇನ್ನು, ವಿಶ್ವ ವಿಖ್ಯಾತ ಜೋಗ ಜಲಪಾತ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, 165.00 ಕೋಟಿ ರೂ. ವೆಚ್ಚದಲ್ಲಿ 24 ಕಾಮಗಾರಿಗಳೊಂದಿಗೆ ಅಭಿವೃದ್ದಿಪಡಿಸಲಾಗುತ್ತಿದೆ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಿಂದಾಗಿ ಬೃಹತ್ ಪ್ರವೇಶದ್ವಾರ, ವಿಜ್ಞಾನ/ಮಕ್ಕಳ ಉದ್ಯಾನವನ, ಉಪಹಾರ ಗೃಹ, ವಿಶ್ರಾಂತಿ ಕೊಠಡಿ, ಇತ್ಯಾದಿ ಜೋಗ ಜಲಪಾತ ಅಭಿವೃದ್ಧಿ, ರೋಪ್ ವೇ ನಿರ್ಮಾಣ, ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರದಿಂದ ಜಲಪಾತದ ಕೆಳಹಂತದವರೆಗೆ ಸಂಪರ್ಕ, ಬ್ಯಾರೇಜ್, ಬೋಟಿಂಗ್ ಮತ್ತು ವ್ಯೂ ಡೆಕ್ ನಿರ್ಮಾಣ, ವಾಹನ ನಿಲ್ದಾಣ ಸೌಲಭ್ಯ, ಹೋಂ ಸ್ಟೇ, ಮಹಾತ್ಮಗಾಂಧಿ ಜಲವಿದ್ಯುತ್ ಕೇಂದ್ರ ಮತ್ತು ಮ್ಯೂಸಿಯಂಗೆ ಟ್ರಾಲಿ ಮೂಲಕ ಪ್ರವಾಸ, ತಲಕಳಲೆಯಲ್ಲಿ ಜಲಕ್ರೀಡೆ ಇತ್ಯಾದಿ ಹಲವಾರು ಅಭಿವೃದ್ಧಿ ಕಾರ್ಯಗಳು ಅನುಷ್ಟಾನಗೊಳ್ಳಲಿದೆ, ವಿಶ್ವ ವಿಖ್ಯಾತ ಜೋಗ ಜಲಪಾತವು ಇನ್ನಷ್ಟು ಆಕರ್ಷಣೀಯವಾಗಿ ಪ್ರವಾಸಿಗರನ್ನು ಸೆಳೆಯಲಿದೆ ಎಂದಿದ್ದಾರೆ.
ಇಎಸ್’ಐ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್
ನವುಲೆಯ 5 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆಗಳ ಇಎಸ್’ಐ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, 71.27 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
ಜ.16ರ ಒಳಗಾಗಿ ಟೆಂಡರ್ ಸ್ವೀಕರಿಸಲು ಕಡೆಯ ದಿನಾಂಕವನ್ನು ನಿಗಧಿಪಡಿಸಲಾಗಿದ್ದು, 15 ತಿಂಗಳುಗಳೊಳಗೆ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮುಗಿಸುವ ನಿಬಂಧನೆ ವಿಧಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ಕಾರ್ಮಿಕರು ಶಿವಮೊಗ್ಗದಲ್ಲಿಯೇ ಅತ್ಯಾಧುನಿಕ ಚಿಕಿತ್ಸೆ ಪಡೆಯುವ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















