ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆಧುನಿಕ ಜೀವನ ಶೈಲಿಯು ನಮ್ಮ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದು, ಇದರ ನಿವಾರಣೆಗೆ ಯೋಗ ಮತ್ತು ಧ್ಯಾನ ಸರಳ ಮಾರ್ಗವಾಗಿದೆ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೆ.ವಿ. ವಸಂತಕುಮಾರ್ ಹೇಳಿದರು.
ಅವರು ನಗರದ ರಾಮಕೃಷ್ಣ ಗುರುಕುಲ ವಸತಿ ಶಾಲೆ ಸಭಾಂಗಣದಲ್ಲಿ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಆರ್ಟ್ ಆಫ್ ಲಿವಿಂಗ್, ಪರೋಪಕಾರಂ ಹಾಗೂ ರಾಮಕೃಷ್ಣ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸೂರ್ಯಥಾನ್ -2021 ಆವೃತ್ತಿಯ 108 ಸೂರ್ಯ ನಮಸ್ಕಾರಗಳ ಯೋಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ, ದೇಹ ಭಕ್ತಿ, ದೇಶ ಭಕ್ತಿ , ಗುರುಭಕ್ತಿ ಜಾಗೃತಿಗಾಗಿ ಯೋಗ ಅವಶ್ಯವಾಗಿದ್ದು, ಅನಭವಿ ಯೋಗ ಶಿಕ್ಷಕರಲ್ಲಿ ಯೋಗಾಭ್ಯಾಸ ಕಲಿಕೆ ಮಾಡಬೇಕು ಎಂದು ತಿಳಿಸಿದರು.
ಫಿಟ್ ಇಂಡಿಯಾ ಮತ್ತು ರಥ ಸಪ್ತಮಿ ಅಂಗವಾಗಿ ರಾಮಕೃಷ್ಣ ಗುರುಕುಲ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಮತ್ತು ಯೋಗಾಸಕ್ತರನ್ನು ತೊಡಗಿಸಿಕೊಂಡು 108 ಸೂರ್ಯ ನಮಸ್ಕಾರಗಳ ಸೂರ್ಯಥಾನ್ ಮತ್ತು ರಥಸಪ್ತಮಿ ಮಹತ್ವದ ಬಗ್ಗೆ ಉಪನ್ಯಾಸವನ್ನು ಆಯೋಜಿಸಿರುವುದು ಸುತ್ಯರ್ಹ ಎಂದರು.
ನಗರದಲ್ಲಿ ಅನೇಕ ಯೋಗ ತರಬೇತಿ ಕೇಂದ್ರಗಳಿದ್ದು, ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್ ಅನೇಕ ವರ್ಷಗಳಿಂದ ಉಚಿತವಾಗಿ ಯೋಗ ತರಗತಿ ನಡೆಸಿಕೊಂಡು ಬರುತ್ತಿದೆ ಹಾಗೂ ಸಾರ್ವಜನಿಕರಲ್ಲಿ ಯೋಗದ ಅರಿವು ಮೂಡಿಸಲು ರಥಸಪ್ತಮಿ ಪ್ರಯುಕ್ತ ಸಹಸ್ರಾರು ವಿದ್ಯಾರ್ಥಿಗಳನ್ನು ಸೇರಿಸಿ ನಿರಂತರವಾಗಿ 7 ವರ್ಷಗಳಿಂದ ಸೂರ್ಯಥಾನ್ ಎಂಬ 108 ಸೂರ್ಯ ನಮಸ್ಕಾರಗಳ ಜನಪ್ರಿಯ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಆಯೋಜಿಸುತಿದ್ದು, ಇದರ ಮೂಲಕ ಯೋಗ ಪಸರಿಸುವ ಉತ್ತಮ ಕೆಲಸ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಸೂರ್ಯಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕಣಾದ ಯೋಗ ಫೌಂಡೇಷನ್ ವತಿಯಿಂದ ಉಚಿತವಾಗಿ ಟಿ ಷರ್ಟ್ ಮತ್ತು ಪ್ರಮಾಣಪತ್ರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಹುರಿದುಂಬಿಸುತ್ತಿದೆ ಎಂದರು.
ಪರೋಪಕಾರಂ ಶ್ರೀಧರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಾತೆ ಶಾರದಾದೇವಿ ಅವರ ಆದರ್ಶ ನುಡಿಗಳನ್ನು ಸದಾ ನೆನಪಿಸಿಕೊಂಡು ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ರಥ ಸಪ್ತಮಿ ಹಾಗೂ ಸೂರ್ಯ ನಮಸ್ಕಾರ ಮಹತ್ವದ ಕುರಿತು ಪೇಸ್ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯ ಪ್ರಸಾದ್ ಉಪನ್ಯಾಸ ನೀಡಿದರು.
ಕಣಾದ ಯೋಗ ಸಂಸ್ಥೆಯ ಕಾರ್ಯದರ್ಶಿ ಯೋಗಾಚಾರ್ಯ ಅನಿಲ್ ಕುಮಾರ್ ಎಚ್. ಶೆಟ್ಟರ್ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರಗಳ ಯೋಗ ಶಿಕ್ಷಣ ನೀಡಿದರು. ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.
ಆರ್ಟ್ ಆಫ್ ಲಿವಿಂಗ್ನ ಶಬರೀಶ್ ಕಣ್ಣನ್ ಸತ್ಸಂಗ ಮತ್ತು ಧ್ಯಾನ ನಡೆಸಿಕೊಟ್ಟರು. ರಾಮಕೃಷ್ಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಉಪಸ್ಥಿತರಿದ್ದರು.
ಮಮತಾ ಯತೀಶ್ ಸ್ವಾಗತಿಸಿ, ರಾಮಕೃಷ್ಣ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ವಂದಿಸಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ವಂದೇ ಮಾತರಂ ಸಮೂಹ ಗಾಯನದೊಂದಿಗೆ ಮುಕ್ತಾಯವಾಯಿತು. ತ್ಯಾಗರಾಜ ಮಿತ್ಯಾಂತ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post