ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಕಲಾಲ್ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇಸುವಂತೆ ಕುರಿತು ತಾಲೂಕು ಕಲಾಲ್ ಖಾಟಿಕ್ ಸಮಾಜ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಎಮ್. ಗುರುಲಿಂಗಯ್ಯ ಅವರಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿದ್ದು, ಅವರ ವರದಿಯನ್ನು ಸರ್ಕಾರ ಯಾತಾವತ್ತಾಗಿ ಜಾರಿಗೊಳಿಸುವಂತೆ
ಆಗ್ರಹಿಸಿದರು.

ಕಲಾಲ್ ಖಾಟಿಕ್ ಸಮುದಾಯವನ್ನು ಸೂರ್ಯವಂಶ ಕ್ಷತ್ರಿಯ, ಕಲಾಲ್ ಖಾಟಿಕ್, ಕಟುಕ, ಶೆರೆಗಾರ, ಅರೆಖಾಟಿಕಲು, ಕಸಾಬ, ಕಸಾಯಿ, ಮರಟ್ಟಿ ಎಂಬು ಹೆಸರುಗಳಿಂದ ಗುರುತಿಸಲಾಗುತ್ತಿದೆ. ಉಪಜೀವನಕ್ಕಾಗಿ ಮಾಂಸ ಮಾರಾಟ ಮಾಡುವುದು ಪೂರ್ವಜರಿಂದಲೂ ನಡೆಸಿಕೊಂಡು ಬಂದಿರುವ ಇದು ಕುಲಕಸುಬಾಗಿದ್ದು, ಇದರಿಂದಾಗಿ ಅಶೂಚಿತ ಅಸ್ಪೃಶ್ಯ ಬದುಕು ಸಾಗಿಸಲಾಗುತ್ತಿದೆ ಎಂದು ಮನವಿಯಲ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಯಾವುದೇ ರೀತಿ ಮುಂದುವರೆದಿರುವುದಿಲ್ಲ. ಹಾಗೂ ಈಗಾಗಲೇ ಮಹಾರಾಷ್ಟ್ರ, ಚಂಡೀಗಢ, ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಂಚಲ, ಛತೀಸಗಡ ಸೇರಿದಂತೆ ಭಾರತದ 13 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದ್ದು, ರಾಜ್ಯದಲ್ಲಿ ಈ ಕ್ರಮವನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ವಿಳಂಬ ಧೋರಣೆಯಿಂದಾಗಿ ಜಾರಿಯಾಗಿರುವುದಿಲ್ಲ. ಆದ್ದರಿಂದ ಕೂಡಲೇ ಎಮ್. ಗುರುಲಿಂಗಯ್ಯ ಅವರ ವರದಿಯನ್ನು ಸಚಿವ ಸಂಪುಟದಲ್ಲಿ ಪುರಸ್ಕರಿಸಿ ಶಿಫಾರಸ್ಸಿನೊಂದಿಗೆ ಕೇಂದ್ರಕ್ಕೆ ಸಲ್ಲಿಸಿ ಕಲಾಲಾ ಖಾಟಿಕ್ ಸಮುದಾಯ ಮತ್ತು ಸಮಾಂತರ ಪದಗಳನ್ನು ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಂಜುನಾಥ್ ಎನ್. ಕಲಾಲ್, ಶಿವಾಜಿ ಕಲಾಲ್, ಕೆ.ಎನ್. ರಾಮಕೃಷ್ಣ ಕಲಾಲ್, ಕೆ.ಹೆಚ್. ಕಲ್ಲಪ್ಪ, ಗಣಪತಿ, ಕೆ. ಸೋಮಶೇಖರ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















