ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕರ ವಸೂಲಿಗಾರರು ಸಾರ್ವಜನಿಕರ ಮನೆ ಬಾಗಿಲಿಗೆ ಬರಲಿದ್ದು, ಆಸ್ತಿ ಮಾಲೀಕರು ಅಲ್ಲಿಯೇ ತೆರಿಗೆ ಪಾವತಿ ಮಾಡಬಹುದಾಗಿದೆ.
ಈ ಕುರಿತಂತೆ ಮಹಾನಗರ ಪಾಲಿಕೆ ಮಾಹಿತಿ ಪ್ರಕಟಿಸಿದ್ದು, ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಮಹಾನಗರ ಪಾಲಿಕೆ ಆವರಣದಲ್ಲಿನ ತೆರಿಗೆ ಪಾವತಿ ಕೌಂಟರ್ಗಳನ್ನು ಮುಚ್ಚಲಾಗಿದೆ. ಹೀಗಾಗಿ ನೇರವಾಗಿ ಪಾವತಿ ಮಾಡಲು ಅವಕಾಶವಿಲ್ಲ. ಆದ್ದರಿಂದ ಪಾಲಿಕೆ ವೆಬ್ಸೈಟ್ www.shivamoggacitycorp.org ಮೂಲಕ ಹಾಗೂ ಪೇಟಿಎಮ್, ಫೋನ್ ಪೇ, ಗೂಗಲ್ ಪೇ ಮೂಲಕವೂ ಸಹ ಪಾವತಿ ಮಾಡಬಹುದಾಗಿದೆ. ಇದರೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಪಾಲಿಕೆಯ ಕಂದಾಯ ವಸೂಲಿಗಾರರು ಮನೆಮನೆಗೆ ತೆರಳಿ ಕಂದಾಯ ಪಾವತಿ ಮಾಡಿಸಿಕೊಳ್ಳಲಿದ್ದಾರೆ. ಆಸ್ತಿ ಮಾಲೀಕರು ತಮ್ಮ ಮನೆ ಮುಂದೆಯೇ ಕಂದಾಯ ಪಾವತಿಸಿ ಸ್ಥಳದಲ್ಲೇ ರಶೀದಿ ಪಡೆಯಬಹುದು.

ಇನ್ನು 2021-22ನೆಯ ಸಾಲಿಗೆ ಆಸ್ತಿ ತೆರಿಗೆ ಮೇಲಿನ ಶೇ.5ರಷ್ಟು ರಿಯಾಯ್ತಿ ಸೌಲಭ್ಯದ ಅವಧಿಯನ್ನು ಜೂನ್ ೩೦ರವರೆಗೂ ವಿಸ್ತರಿಸಲಾಗಿದೆ. ಆಸ್ತಿ ಮಾಲೀಕರು ಈ ಅವಧಿಯಲ್ಲಿ ತೆರಿಗೆ ಪಾವತಿಸಿ ಶೇ. 5ರಷ್ಟು ರಿಯಾಯ್ತಿ ಪಡೆಯಬಹುದಾಗಿದೆ ಎಂದು ಪಾಲಿಕೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















