ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಗೀತಕ್ಕೆ ಇರುವ ಮಾಂತ್ರಿಕ ಶಕ್ತಿ ಎಂತಹದ್ದು ಎಂದರೆ, ಪ್ರಕೃತಿಯಲ್ಲಿರುವ ಗಿಡಗಳು ಹಾಗೂ ತಾಯಿಯ ಗರ್ಭದಲ್ಲಿರುವ ಶಿಶುವು ಸಹ ಇದನ್ನು ಆಲಿಸಿ ಸ್ಪಂದಿಸುತ್ತದೆ ಎಂದು ಖ್ಯಾತ ಆಪ್ತ ಸಮಾಲೋಚಕಿ, ಸಂಗೀತ ಶಿಕ್ಷಕಿ ಉಷಾದೇವಿ ಪಿ. ಉಡುಪ ಅಭಿಪ್ರಾಯಪಟ್ಟರು.
ಸುಬ್ಬಯ್ಯ ಲಿಟರರಿ ಕ್ಲಬ್ ಹಾಗೂ ಜೀವ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಆನ್ಲೈನ್ ಗಾಯನ ಸ್ಪರ್ಧೆ ತೀರ್ಪುಗಾರರಾಗಿ, ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿ ಸಂಗೀತ ಎನ್ನುವುದು ಒಂದು ಅದ್ಭುತ ಸೃಷ್ಟಿ. ಸಂಗೀತದ ಬಗ್ಗೆ ಹಲವು ವೈಜ್ಞಾನಿಕ ಸಂಶೋಧನೆಗಳು ನಡೆದಿವೆ. ಒಮ್ಮೆ ಇಬ್ಬರು ಗರ್ಭಿಣಿಯರನ್ನು ಆಯ್ಕೆ ಮಾಡಿಕೊಂಡು ಓರ್ವಳಿಗೆ ಪ್ರಸವದವರೆಗೂ ನಿರಂತರವಾಗಿ ಮೆಲು ಸಂಗೀತವನ್ನು ಕೇಳಿಸಲಾಗುತ್ತಿತ್ತು. ಇನ್ನೊಬ್ಬಾಕೆಗೆ ಯಾವುದೇ ರೀತಿಯ ಸಂಗೀತವನ್ನು ಕೇಳಿಸಲಿಲ್ಲ. ಇಬ್ಬರಿಗೂ ಹೆರಿಗೆಯ ನಂತರ ಪರೀಕ್ಷಿಸಿದಾಗ ಸಂಗೀತ ಕೇಳಿದ ತಾಯಿಯ ಶಿಶು ನಾದವನ್ನು ಆಲಿಸುತ್ತಿತ್ತು. ಇನ್ನೊಂದು ಮಗು ಸಂಗೀತಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದು ಗರ್ಭದಲ್ಲಿರುವ ಶಿಶುವು ಸಂಗೀತವನ್ನು ಆಲಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿತು. ಅದೇರೀತಿ ಸಂಗೀತವನ್ನು ಆಲಿಸಿದ ಗಿಡಗಳು ಬೇರೆ ಗಿಡಗಳಿಗಿಂತ ಚೆನ್ನಾಗಿ ಬೇಳೆಯುತ್ತವೆ ಎಂಬುದು ಸಾಬೀತಾಗಿದೆ ಎಂದರು.
ಸಂಗೀತ ಅಥವಾ ಹಾಡು ಹಾಡುವವರು ಸಾಹಿತ್ಯದ ಸಂಗತಿಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸಂಗತಿಗಳಿಲ್ಲದೆ ಹಾಡುವ ಗೀತೆಗಳು ಮಾಧುರ್ಯವನ್ನು ಕಳೆದುಕೊಳ್ಳುತ್ತವೆ. ಹಾಗೆಯೇ ಸಾಹಿತ್ಯ ಗಾಯನದ ವೇಳೆ ಜಾನ್ನರ್ ಎಂಬ ಅಂಶಗಳನ್ನು ಪರಿಗಣಿಸುವುದು ಮುಖ್ಯ. ನೀವು ಯಾವುದೇ ಭಾಷೆಯ ಹಾಡುಗಳನ್ನು ಹಾಡುವ ಮುನ್ನ ಒಂದಲ್ಲ ಹತ್ತು ಬಾರಿ ಮೌನವಾಗಿ ಗಮನವಿರಿಸಿ ಆಲಿಸಬೇಕು. ಆ ಭಾಷೆಯಲ್ಲಿನ ಸಾಹಿತ್ಯ, ಅರ್ಥ, ಸಂಗೀತದಲ್ಲಿನ ಸಂಗತಿಗಳನ್ನು ಪೂರ್ಣವಾಗಿ ಅರ್ಥೈಸಿಕೊಂಡ ಮೇಲೆ ಹಾಡಬೇಕು ಎಂದರು.
ಪ್ರಮುಖವಾಗಿ ಆಧುನಿಕ ಸಾಹಿತ್ಯ ಹಾಗೂ ಸಂಗೀತಕ್ಕೆ ಕ್ಲಾಸಿಕಲ್ ಸ್ಪರ್ಶವನ್ನು ನೀಡುವ ಪ್ರಯತ್ನವನ್ನು ಸ್ಪರ್ಧೆಗಳಲ್ಲಿ ಮಾಡಬಾರದು. ಇದು ಹಾಡಿನ ಗಾಂಭಿರ್ಯ ಕಡಿಮೆಗೊಳಿಸುವ ಜೊತೆಯಲ್ಲಿ ಸ್ಪರ್ಧೆಯನ್ನು ಹಿನ್ನೆಡೆ ಉಂಟು ಮಾಡುತ್ತವೆ ಎಂದರು.
ಲಿಟರರಿ ಕ್ಲಬ್ನ ರೂವಾರಿ ಡಾ. ವಿನಯಾ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂಗೀತ ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ಯಾವುದೇ ವೃತ್ತಿಪರ ಕೋರ್ಸ್ನಲ್ಲಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವಿರುತ್ತದೆ. ಹೀಗಾಗಿ ಇಂತಹ ವಿದ್ಯಾರ್ಥಿಗಳು ಸಂಗೀತ ಕಲಿಯುವುದು, ಹಾಡುವುದು, ಆಲಿಸುವುದನ್ನು ನಿರಂತರ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆನ್ಲೈನ್ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿದ್ದ ಉಷಾದೇವಿ ಪಿ ಉಡುಪ ಅವರನ್ನು ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಉಷಾದೇವಿಯವರು ವಿವಿಧ ಸಂಗತಿಗಳುಳ್ಳ ಹಾಡುಗಳನ್ನು ಸಂಗೀತದೊಂದಿಗೆ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ಆರ್.ಪಿ. ಪೈ, ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಕೆ.ಎಚ್. ಚಂದ್ರಕಾಂತ್, ಉಪಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ ಸಿ.ಎಂ, ಪ್ರಾಧ್ಯಾಪಕಿ ಡಾ.ಶ್ರೀದೇವಿ ಉಪಸ್ಥಿತರಿದ್ದರು. ಸಿಂಚನಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post