ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನಾದ್ಯಂತ ಎಡೆಬಿಡದೆ ಭಾರೀ ಮಳೆಯಾಗುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ತಡರಾತ್ರಿ ಆರಂಭವಾದ ಮಳೆ ಇಂದೂ ಕೂಡ ಮುಂದುವರೆದ ಪರಿಣಾಮ ನಗರದ ಜನ್ನಾಪುರ, ಕೆ.ಸಿ. ಬ್ಲಾಕ್, ನ್ಯೂಟೌನ್, ಪೇಪರ್ ಟೌನ್, ಸುರಿಗೀತೋಪು, ಹೊಸಮನೆ, ಸಾದತ್ ಕಾಲೋನಿ, ಅನ್ವರ್ ಕಾಲೋನಿ ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಹಲವೆಡೆ ಮಳೆ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿದೆ.
ಜನ್ನಾಪುರ ಕೆಸಿ ಬ್ಲಾಕ್ನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನದಿಯಂತಾದ ರಸ್ತೆಗಳಲ್ಲಿ ಸಂಚರಿಸಲಾಗದೆ ವಾಹನ ಸವಾರರು ಪರದಾಡಿದರು. ಅಲ್ಲದೆ ಮುಂಜಾನೆವರೆಗೂ ಸುರಿದ ಮಳೆರಾಯ ಕೊಂಚ ಬ್ರೇಕ್ ಕೊಟ್ಟಿದ್ದನಾದರೂ ಬಿಡುವಿನ ನಂತರ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ. ಈ ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಮರಗಳು ಬಿದ್ದಿದ್ದು, ಇನ್ನು ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಇಲ್ಲಿನ ಕೆಸಿ ಬ್ಲಾಕ್ ನಿವಾಸಿಗಳು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post