ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಡಿಕೆ ಬೆಲೆಗಿಂತ ಉದ್ಯಮ ಮುಖ್ಯವಾಗಬೇಕು. ಭವಿಷ್ಯದಲ್ಲಿ ಈ ಉದ್ಯಮ ಹೇಗಿರಬೇಕೆಂಬ ಬಗ್ಗೆ ಚಿಂತನೆ ತುರ್ತಾಗಿ ನಡೆಯಬೇಕಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಅಡಿಕೆ ಬೆಳೆಗಾರ ಮತ್ತು ಉದ್ಯಮಿ ಕಡಿದಾಳು ಗೋಪಾಲ್ ಅವರ ಪಿಎಚ್ಡಿ ಕೃತಿ ಅಡಿಕೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ಮಾತನಾಡಿದರು.
ದೇಶದ ಶೇ. 50ರಷ್ಟು ಅಡಿಕೆ ರಾಜ್ಯದಲ್ಲಿ ಬೆಳೆಯುತ್ತಿದೆ. ಪ್ರತಿವರ್ಷ ಶೇ.15ರಷ್ಟು ಅಡಿಕೆ ಬೆಳೆಯವ ಜಾಗ ಹೆಚ್ಚುತ್ತಿದೆ. 142 ತಾಲೂಕಿನಲ್ಲಿ ಬೆಳೆಯಾಗಿರುವ ಅಡಿಕೆ, ರಾಷ್ಟ್ರೀಯ ಜಿಡಿಪಿಗೆ 15 ಸಾವಿರ ಕೋಟಿ ರೂ. ಆದಾಯ ಕೊಡುತ್ತಿದೆ. 10 ಲಕ್ಷ ಜನರು ರಾಜ್ಯದಲ್ಲಿ ಅಡಿಕೆ ಕೃಷಿ ಅವಲಂಬಿತರಾಗಿದ್ದಾರೆ. ಇಂತಹವರ ಬದುಕಿಗೆ ಒಂದು ಆಧಾರಸ್ಥಂಭವಾದ ಅಡಿಕೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಜೊತೆಗೆ ಸಾಂಪ್ರದಾಯಿಕತೆ ಮತ್ತು ಸಾಂಸ್ಕೃತಿಕವಾಗಿಯೂ ಅಡಿಕೆಯನ್ನು ನೋಡಬೇಕಿದೆ ಎಂದರು.
ಅಡಿಕೆ ಎಂದಾಕ್ಷಣ ಸಂಕುಚಿತ ಮನೋಭಾವದಲ್ಲಿ ಕಾಣುವವರು ಹೆಚ್ಚಿದ್ದಾರೆ. ಅಡಿಕೆಗೆ ಸದ್ಯ ಉತ್ತಮ ಬೆಲೆ ಬಂದಿದೆಯಾದರೂ ಈ ಹಿಂದೆ ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಅತ್ಯುತ್ತಮ ಮಾರುಕಟ್ಟೆ ಹೊಂದಿರುವ ಏಕೈಕ ತೋಟಗಾರಿಕೆ ಉತ್ಪನ್ನ ಎಂದರೆ ಅದು ಅಡಿಕೆ ಮೌಲ್ಯವರ್ಧನೆ ಹೆಚ್ಚಬೇಕಿದೆ. ಆದರೆ ಈ ಕೆಲಸ ರಾಜ್ಯದಲ್ಲಿ ನಡೆಯಬೇಕು. ಅಡಿಕೆಯಲ್ಲಿರುವ ಕೊಬ್ಬು, ಚೊಗರು ಮತ್ತು ಆರೋಗ್ಯಕರ ಅಂಶಗಳು ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾಗುವಂತೆ ಮಾಡಬೇಕು. ಚೊಗರು ಬಣ್ಣವನ್ನು ಚರಕ ಸಂಸ್ಥೆಯವರು ಬಟ್ಟೆ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ. ಅಡಿಕೆಗೆ ಅವಶ್ಯಕವಾಗಿ ಮಂಡಳಿ ಬೇಕು. ಉಳಿದೆಲ್ಲಾ ವಾಣಿಜ್ಯ ಬೆಳೆಗಳಿಗೆ ಮಂಡಳಿ ಇದೆ. ಆದರೆ ಅಡಿಕೆಗೆ ಮಾತ್ರ ಇಲ್ಲ. ಈ ಬಗ್ಗೆ ಹೋರಾಟ ನಡೆದಿದೆ. ಪ್ರತಿ ಹೋರಾಟಕ್ಕೂ ದೆಹಲಿಗೆ ಹೋಗುವುದನ್ನು ಮಂಡಳಿ ಇಲ್ಲಿದ್ದರೆ ತಪ್ಪುತ್ತದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಗುಟ್ಕಾ ಬ್ಯಾನ್ ಆಗುತ್ತದೆ ಎಂಬ ಮಾತಿನಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದರು. ಆದರೆ ಬ್ಯಾನ್ ಆಗುವುದಿಲ್ಲ ಎನ್ನುವುದು ಖಚಿತವಾಗಿದೆ. ಈಗ ಅಡಿಕೆಗೆ ಮೌಲ್ಯವರ್ಧನೆ ಆಗಬೇಕಿದೆ. ವಿವಿಧ ಹೊಸ ಉತ್ಪನ್ನ ಕಂಡುಹಿಡಿಯುವ ಕೆಲಸ ಆಗಬೇಕು ಮತ್ತು ಅಡಿಕೆಯಲ್ಲಿರುವ ರಾಸಾಯನಿಕ ಗುಣಗಳನ್ನು ಪತ್ತೆ ಮಾಡಬೇಕಿದೆ. ಇದಕ್ಕಾಗಿ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಸಂಶೋಧನೆ ನಡೆಯುತ್ತಿದ್ದು, ಅವರು ಪ್ರಾಯೋಗಿಕ ವರದಿ ನೀಡಿದ್ದಾರೆ. ಇದರಲ್ಲಿ ಗಾಯವನ್ನು ಅತಿ ಬೇಗ ಗುಣಪಡಿಸುವ ಸಾರ್ಥö್ಯವಿದೆ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯದಲ್ಲೇ ಈ ವರದಿಯನ್ನು ಆಸ್ಪತ್ರೆಯವರು ನೀಡಲಿದ್ದಾರೆ ಎಂದರು.
ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಯಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗ ಬಾಧಿಸುತ್ತಿದೆ. ಇದಕ್ಕಾಗಿ ವಿಜ್ಞಾನಿಗಳು ಮತ್ತು ಕೃಷಿ, ತೋಟಗಾರಿಕೆ ವಿವಿಯ ಸಂಶೋಧಕರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅದರ ಔಷಧ ಅತಿ ದುಬಾರಿಯಾಗಿರುವುದರಿಂದ ಶೇ. 70ರ ಸಬ್ಸಿಡಿಯಲ್ಲಿ ನೀಡಲು ಸರಕಾರ ಒಪ್ಪಿದೆ. ಸದ್ಯದಲ್ಲೆ ಈ ಬಗ್ಗೆ ಅಧಿಸೂಚನೆ ಹೊರಬೀಳಲಿದೆ ಎಂದರು.
ಅತಿಥಿಯಾಗಿ ಮಾಜಿ ಸಭಾಪತಿ ಬಿ. ಎಲ್. ಶಂಕರ್, ಕನ್ನಡ ವಿವಿ ಹಂಪಿಯ ಕುಲಸಚಿವ ಸ. ಚಿ. ರಮೇಶ್ ಹಾಜರಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರನ್ನು ಗೌರವಿಸಲಾಯಿತು. ಕಡಿದಾಳ ಗೋಪಾಲ್ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post