ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜೈಲ್ರಸ್ತೆಗೆ ಹೊಸತನದ ರಂಗು ಮೂಡುತ್ತಿರುವುದು ಸ್ಮಾರ್ಟ್ಸಿಟಿ ಕಾಮಗಾರಿಯ ಹೆಸರಿನಲ್ಲಿ ಈ ರಸ್ತೆಯ ಎರಡು ಭಾಗದಲ್ಲಿ ಡ್ರೈನೇಜ್ ಕಾಮಗಾರಿ ನಡೆಯುತ್ತಿದ್ದು, ಶಿವಮೊಗ್ಗ ಗ್ಯಾಸ್ ವರೆಗಿನ ಡ್ರೈನೇಜ್ ಕಾಮಗಾರಿ ಅಂತಿಮ ಹಂತದಲ್ಲಿದೆ ಆದರೆ ಶಿವಮೊಗ್ಗ ಸೆರಾಮಿಕ್ಸ್ ಮುಂದೆ ಡ್ರೈನೇಜ್ ಹೋಗಲು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಿಕೊಂಡಿರುವ ಅಂಗಡಿ ಮುಂಗಟ್ಟುಗಳ ಮಳಿಗೆಗಳು ತೆರವಾಗಬೇಕಿದೆ.

ಈ ಡ್ರೈನೇಜ್ ಕಾಮಗಾರಿಯನ್ನು ತಿರುವು ಪಡೆದು ರಸ್ತೆಯನ್ನು ಇಕ್ಕಟ್ಟು ಮಾಡಿ ರಸ್ತೆಯೊಳಗೆ ಡ್ರೈನೇಜ್ ಕೆಲಸ ಮುಗಿಸಲು ಹುನ್ನಾರ ನಡೆದಿತ್ತು ಎನ್ನಲಾಗಿದೆ. ಈ ಭಾಗದ ಜನರ ಆಕ್ರೋಶದಿಂದ ಡ್ರೈನೇಜ್ ಕಾಮಗಾರಿಯನ್ನು ಸಂಪೂರ್ಣವಾಗಿಸಲು ನೇರವಾದ ರೀತಿ ನಿರ್ಮಿಸಲು ಸ್ಮಾರ್ಟ್ಸಿಟಿ ಇಂಜಿನಿಯರ್ಗಳು ಮುಂದಾಗಿದ್ದಾರೆನ್ನಲಾಗಿದೆ.

ಆದರೆ, ಇದಕ್ಕೆ ಪೂರಕವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಅಭಿಯಂತರರ ಮಹಾಶಯರಲ್ಲಿ ಮುಖ್ಯಸ್ಥರಾದ ಕಾರ್ಯಾಪಾಲಕ ಅಭಿಯಂತರ ಡೊಂಕಪ್ಪ ಅವರು ರಸ್ತೆ ಕಾಮಗಾರಿಯ ಜಾಗ ಆ ಮಳಿಗೆಗಳ ಜಾಗವನ್ನು ಅಳತೆ ಮಾಡಿಸಿ ಕೊಡಬೇಕಿದೆ. ಡೊಂಕಪ್ಪ ಸಾಹೇಬರ ಗಮನಕ್ಕೆ ಬಂದಿರುವ ಈ ವಿಷಯ ಅಂತಿಮವಾಗದ ಹೊರತು ಡ್ರೈನೇಜ್ ವ್ಯವಸ್ಥೆ ಸಂಪೂರ್ಣವಾಗಿ ಮುಗಿಯದು.

ರಸ್ತೆಗಳಲ್ಲಿನ ಮಳಿಗೆಗಳನ್ನು ತೆರವುಗೊಳಿಸುತ್ತಾರೋ. ಅಥವಾ ಅಲ್ಲಿಯೇ ಬಿಟ್ಟು ತಿರುವಿನ ಮೂಲಕ ರಸ್ತೆಯಲ್ಲಿ ಡ್ರೈನೇಜ್ ನಿರ್ಮಿಸುತ್ತಾರೋ ಎಂಬ ಅನುಮಾನದ ಹುತ್ತದಲ್ಲಿ ಈ ಭಾಗದ ಜನ ಕಾಯುತ್ತಿದ್ದಾರೆ. ಬಹುತೇಕ ನಾಳೆ ಮದ್ಯಾಹ್ನದೊಳಗೆ ಇದಕ್ಕೊಂದು ಅಂತಿಮ ತೀರ್ಮಾನ ಬರುವ ಸಾಧ್ಯತೆಗಳಿವೆ. ಮಾಡುವ ಕೆಲಸ ನಾಲ್ಕು ಜನ ಮೆಚ್ಚುವಂತಿರಬೇಕು. ನಗರದ ಜನರಿಗೆ ಸಾಕಷ್ಟು ಅವಧಿ ಬಳಕೆಯಾಗವಂತಿರಬೇಕಲ್ಲವೇ.? ಪಾಲಿಕೆಯ ಇಂಜಿನಿಯರ್ ಮಹಾಶಯರ ಧಮ್ಮು ಹಾಗೂ ಧೈರ್ಯವನ್ನು ಕಾದು ನೋಡಬೇಕಿದೆ.

ಕಳೆದ 20 ದಿನಗಳಿಂದ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಒಂದಿಷ್ಟು ಚುರುಕು ಹಾಗೂ ಬಿರುಸಿನಿಂದ ನಡೆಯುತ್ತಿರುವುದು ಸರಿಯಷ್ಟೆ. ಜನತೆ ಈ ಕೆಲಸದ ವೇಗವನ್ನು ಗುರುತಿಸುತ್ತಿದ್ದಾರೆ. ಹಾಗೆಯೇ ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ವಿಶೇಷವಾಗಿ ಇಂಜಿನಿಯರ್ ಮಹಾಶಯರಿಗೆ ತಮಗಿಷ್ಟ ಬಂದಂತೆ, ಸೂಕ್ತವೆಂಬ ರೀತಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಹ ಕಂಡು ಬರುತ್ತಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















