ಕಲ್ಪ ಮೀಡಿಯಾ ಹೌಸ್ | ಸೊರಬ |
ಮಾನವನ ಬದುಕಿಗೆ ಪರಿಸರದ ಕೊಡುಗೆ ಮರೆಯಲಾಗದು. ಮರಗಿಡಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದಕ್ಕೆಂದೇ ನಮ್ಮ ಹಿರಿಯರು ಮರಗಿಡಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಮಾರ್ಗಗಳನ್ನು ಸಾಂಪ್ರದಾಯಿಕ ಪದ್ಧತಿ ರೂಢಿಸಿಕೊಂಡಿದ್ದರು. ಅವರ ದೂರದೃಷ್ಟಿಯ ಫಲವಾಗಿ ವೈಜ್ಞಾನಿಕ ಹಿನ್ನೆಲೆಯಲ್ಲಿ ಪರಿಸರದಿಂದ ಅನೇಕ ಉಪಯೋಗಗಳನ್ನು ಪಡೆಯುತ್ತಿದ್ದೇವೆ ಎಂದು ಇತಿಹಾಸ ಸಂಶೋಧಕರು ಮತ್ತು ಕನ್ನಡ ಸಾಂಸ್ಕೃತಿಕ ಜಗಲಿ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ) ಸೊರಬ ಇದರ ಟ್ರಸ್ಟಿ ಹೆಚ್. ಎಂ. ಪ್ರಶಾಂತ ಇವರು ಹುಣವಳ್ಳಿ ಗ್ರಾಮದ ತಮ್ಮ ಮನೆ ಪರಿಸರದಲ್ಲಿ ಕುಟುಂಬದವರೊಂದಿಗೆ ಜೂನ್ 5ನೇ ತಾರೀಖಿನಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿವಿಧ ಬಗೆಯ ಮರಗಿಡಗಳ ಜೊತೆಗೆ ಅವುಗಳಲ್ಲಿರುವ ಔಷಧೀಯ ಗುಣಗಳ ಮೂಲಕ ಹಲವು ಖಾಯಿಲೆಗಳನ್ನು ಗುಣಪಡಿಸುವ ಬಗೆಯನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಅಬ್ದುಲ್ ರೆಹಮಾನ್ ಮಾತನಾಡಿ , ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ,ಕವಳೆ ಹಣ್ಣು, ಮಾವಿನ ಹಣ್ಣುಗಳನ್ನು ಯಾವುದೇ ಆತಂಕವಿಲ್ಲದೇ ಹೊಟ್ಟೆ ತುಂಬಾ ತಿಂದ ದಿನಗಳನ್ನು ನೆನಪಿಸಿಕೊಂಡು, ಈಗ ವಿವಿಧ ಬಗೆಯ ತಂತ್ರಜ್ಞಾನದ ಮೂಲಕ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಣ್ಣು, ತರಕಾರಿ, ಸೊಪ್ಪು ಮುಂತಾದವುಗಳನ್ನು ತಿನ್ನಲು ಭಯವಾಗುತ್ತಿದೆ. ಇರುವ ಕಾಡನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದರು.
ಚಿಂತಕ ಭಾರ್ಗವ ನಾಡಿಗ್ ಮಾತನಾಡಿ, ಇಂದು ನಾವು ಹಣ, ಆಸ್ತಿ ,ಸಂಪತ್ತಿನ ಹಿಂದೆ ಹೊರಡುವ ಮೂಲಕ ನಮ್ಮ ನೆಮ್ಮದಿಯನ್ನೇ ಕಳೆದುಕೊಂಡಿದ್ದೇವೆ. ನಮ್ಮ ಹಿರಿಯರು ಕಂಡುಕೊಂಡ ಪಾರಂಪರಿಕ ಕೃಷಿಯನ್ನು ಬದಿಗೊತ್ತಿ ಆಧುನಿಕತೆಯ ಭರಾಟೆಯಲ್ಲಿ ವಿವಿಧ ಬಗೆಯ ತಂತ್ರಜ್ಞಾನದ ತಳಿಗಳನ್ನು ಬೆಳೆಯಲು ವಿವಿಧ ಬಗೆಯ ಮಾರಕ ಔಷಧಿಗಳ ಸಿಂಪರಣೆ ಮಾಡಿ ವಿಷವನ್ನೇ ಉಣ್ಣುತ್ತಿದ್ದೇವೆ. ನಮ್ಮ ಹಳ್ಳಿಯ ಕೃಷಿ ಪದ್ಧತಿ ವಾಣಿಜ್ಯೋದ್ಯಮ ದ ಕಡೆಗೆ ಅತ್ಯಂತ ವೇಗವಾಗಿ ಹೋಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಜೀವನವನ್ನು ಕೊಂಡೊಯ್ಯುವ ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ವಿನಾಶಕ್ಕೆ ತಳ್ಳುವ ಮೂಲಕ ಎಲ್ಲಾ ಖಾಯಿಲೆಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಮುಂದಿನ ಪೀಳಿಗೆಗೆ ಪರಿಸರದ ಮಹತ್ವವನ್ನು ತಿಳಿಸದೇ ಹೋದರೆ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದರು.
ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷ ಎಸ್. ಕೃಷ್ಣಾನಂದ ಮಾತನಾಡಿ, ಈಗಾಗಲೇ ಪರಿಸರದ ವಿನಾಶದಿಂದ ಏನೆಲ್ಲಾ ಅನಾಹುತಗಳನ್ನು ಕಂಡಿರುವ ನಾವು ಶೇ. 36ರಷ್ಟಿರುವ ಕಾಡಿನ ಜೊತೆಗೆ ಇನ್ನಷ್ಟು ಮರಗಿಡಗಳನ್ನು ನೆಟ್ಟು ಬೆಳೆಸುವಲ್ಲಿ ನಾವು ಹೆಜ್ಜೆ ಇಡಬೇಕಾಗಿದೆ. ಬಿಸಿಲಿನ ತಾಪಕ್ಕೆ ನೀಗ೯ಲ್ಲುಗಳು ಕರಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.ಇದು ಮುಂದಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಪಾಯದ ಮುನ್ಸೂಚನೆಯನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ, ಹಿತ್ತಲು,ಹೊಲಗದ್ದೆಗಳಲ್ಲಿ ಒಂದಿಷ್ಟು ಗಿಡಗಳನ್ನು ನೆಟ್ಟು ಬೆಳೆಸಬೇಕಾಗಿದೆ. ಕೇವಲ ಜೂನ್ 5 ನೇ ತಾರೀಖಿನ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಒಂದೆರಡು ಗಿಡಗಳನ್ನು ನೆಡುವ ಕಾರ್ಯಕ್ರಮ ಮಾತ್ರ ಆಗದೇ ,ನೆಟ್ಟಿರುವ ಗಿಡಗಳನ್ನು ಸಂರಕ್ಷಣೆ ಮಾಡುವುದು ನಮ್ಮ ನಿರಂತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
Also read: ಬೆಂಗಳೂರಿನಲ್ಲಿ ಜಮ್ಮು ಪೊಲೀಸರ ಆಪರೇಶನ್: ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನ
ಇಂಡುವಳ್ಳಿ ಮಲೆನಾಡು ಪ್ರೌಢಶಾಲೆ ಮುಖ್ಯ ಶಿಕ್ಷಕ ಮೋಹನದಾಸ , ತಾಲ್ಲೂಕು ಯುವ ಒಕ್ಕೂಟ ಅಧ್ಯಕ್ಷ ಲಿಂಗರಾಜ ಗೌಡ್ರು ಕೋಣನಮನೆ , ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ ಗೌರವ ಸಂಚಾಲಕ ಎನ್. ಷಣ್ಮುಖಾಚಾರ್ , ವಕೀಲ ಢಾಕಪ್ಪ ಹೆಸರಿ, ಅಬ್ದುಲ್ ನಜೀರ್ ಸಾಬ್, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಸಾಹಿತಿ, ಪ್ರಕಾಶಕ ರೇವಣಪ್ಪ ಬಿದರಗೇರಿ , ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಪಾರ್ವತಿ ಎನ್. ಗೋಸಂರಕ್ಷಣಾ ತಾಲ್ಲೂಕು ಅಧ್ಯಕ್ಷ ಚಿದಾನಂದ ಗೌಡ್ರು ಜೇಡಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀಪಾದ ಬಿಚ್ಚುಗತ್ತಿ, ವನಸುಮ ಕಲಾಬಳಗ ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಈ ಸಂದರ್ಭದಲ್ಲಿ ಪ್ರಶಾಂತ ಹೆಚ್ ಎಂ ಹುಣವಳ್ಳಿ ಕುಟುಂಬದಿಂದ ಗೌರವಿಸಲಾಯಿತು.
ಹಿರಿಯರಾದ ಬಿ. ಎನ್. ಸಿ. ರಾವ್ ಬರಗಿ ಅವರು ಹಲವು ಬಗೆಯ ಸಸ್ಯಗಳನ್ನು ಪರಿಚಯಿಸಿ ಅವುಗಳಿಂದ ಮನುಷ್ಯರು ಸೇರಿದಂತೆ ದನಗಳಿಗೂ ಬರುವ ಕೆಲವು ಖಾಯಿಲೆಗಳನ್ನು ಗುಣಪಡಿಸುವ ಬಗೆಯನ್ನು ತಿಳಿಸಿದರು.
ಪ್ರಶಾಂತ್ ಹೆಚ್. ಎಂ. ಅವರ ಅಮ್ಮಾ, ಅಣ್ಣಾ ಸೇರಿದಂತೆ ನಿವೃತ್ತ ಅಂಗನವಾಡಿ ಶಿಕ್ಷಕಿಯರು ವಿವಿಧ ಬಗೆಯ ಮರಗಿಡಗಳ ಎಲೆ, ಬೇರು, ಕಾಂಡ, ಚಿಗುರು, ಹೂಗಳ ಉಪಯೋಗವನ್ನು ತಿಳಿಸಿದರು. ತಾಲ್ಲೂಕಿನ ಹೆಮ್ಮೆಯ ವನಸುಮ ಕಲಾಬಳಗದ ಕಲಾವಿದರಿಂದ ಗೀತಗಾಯನ ನಡೆಯಿತು. ತಾಲ್ಲೂಕು ಯುವ ಒಕ್ಕೂಟ ಪ್ರಧಾನ ಕಾರ್ಯದರ್ಶಿ, ಅಬ್ದುಲ್ ರೆಹಮಾನ್ ರವರ ಕುಟುಂಬದವರು, ಹುಣವಳ್ಳಿ ಗ್ರಾಮಸ್ಥರು ಹಾಗೂ ಪ್ರಶಾಂತ್ ಹೆಚ್ ಎಂ ಹುಣವಳ್ಳಿ ಕುಟುಂಬದವರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post