ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರವಾಸೋದ್ಯಮ ಇಲಾಖೆ ಮುಖಾಂತರ ರಾಗಿಗುಡ್ಡದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದೇವಾಲಯ ಇರುವ ಸ್ಥಳದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ 74 ಅಡಿ ಎತ್ತರದ ಈಶ್ವರ ಲಿಂಗ ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಈಶ್ವರಪ್ಪ MLA Eshwarappa ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ರೀತಿಯಲ್ಲಿ ರಾಗಿಗುಡ್ಡದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಈಗಾಗಲೇ ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಇನ್ನುಳಿದ ಹಣವನ್ನು ಹೊಂದಿಸಿ ಯೋಜನೆ ಕಾಮಗಾರಿ ನಡೆಸಲಾಗುವುದು. ಈ ವಿಶೇಷ ಯೋಜನೆಗಾಗಿ ಎರಡು ಎಕರೆ 20 ಗುಂಟೆ ಜಾಗವನ್ನು ಜಿಲ್ಲಾಧಿಕಾರಿಯವರು ನೀಡಿದ್ದು, ಆದಷ್ಟು ಬೇಗ ರಾಜ್ಯ ಮಟ್ಟದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಿ ರೂಪುರೇಷೆ ಸಿದ್ಧಗೊಳಿಸಲಿದ್ದಾರೆ ಎಂದರು.
ಉತ್ತಮ ಕಾರ್ಯನಿರ್ವಹಣೆ: ಅಧಿಕಾರಿಗಳಿಗೆ ಅಭಿನಂದನೆ
ವ್ಯಾಪಕ ಮಳೆಯಿಂದಾಗಿ ಶಿವಮೊಗ್ಗ ನಗರದಲ್ಲಿ 22 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಸರ್ವೆ ಕಾರ್ಯ ಮುಗಿದ ಬಳಿಕ ಅವರಿಗೆ ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ೫ಲಕ್ಷ ಪರಿಹಾರ ನೀಡಲಾಗುವುದು ಎಂದರು.
Also read: ಹೆಣ್ಣು ಗೊತ್ತಾಗಿಲ್ಲ, ನಿಶ್ಚಿತಾರ್ಥವಾಗಿಲ್ಲ, ತಾಳಿ ಕಟ್ಟದೇ ಮುಂದಿನ ಯೋಚನೆ ಏಕೆ? ಕೆಎಸ್ಈ ಲೇವಡಿ
ಕಳೆದ ಬಾರಿ ಮನೆಗಳಿಗೆ ನೀರು ನುಗ್ಗಿ ಉಂಟಾದ ತೊಂದರೆಗಳನ್ನು ತಪ್ಪಿಸಲು ನಿರಂತರ ಸಭೆ ನಡೆಸಿ ಸೂಕ್ರ ಕ್ರಮ ಕೈಗೊಂಡ ಪರಿಣಾಮ ನಿರಂತರ ಮಳೆಯಾದರೂ ಯಾವುದೇ ಬಡಾವಣೆಗಳು ಜಲಾವೃತವಾಗಿಲ್ಲ. ಇದು ಶ್ಲಾಘನೀಯ ವಿಚಾರವಾಗಿದ್ದು, ಪಾಲಿಕೆ ಸದಸ್ಯರು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಎಲ್ಲಾ ಅಧಿಕಾರಿಗಳಿಗೆ, ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಸ್ಮಾರ್ಟ್ಸಿಟಿ ಕುರಿತು ವ್ಯಂಗ್ಯವಾಡುತ್ತಿದ್ದವರೇ ಈಗ ಕಾಮಗಾರಿಗಳು ಮುಗಿದ ನಂತರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಖುದ್ದಾಗಿ ನಗರ ಸಮೀಕ್ಷೆ, ಸಭೆ ನಡೆಸಿ ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಲಾಗುವುದು ಎಂದರು.
ನಗರದಲ್ಲಿ ಮುಸಲ್ಮಾನ ಮತ್ತು ರೌಡಿಗಳ ಗೂಂಡಾಗಿರಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಇದರ ಬಗ್ಗೆ ಸೂಕ್ತ ಕಠಿಣ ಕ್ರಮ ಕೈಗೊಂಡು ಕಿಡಿಗೇಡಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುವುದು ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















