ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಮರಣ ಹೊಂದಿದವರು, ಬೇರೆಡೆ ಸ್ಥಳಾಂತರಗೊಂಡವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ, 18 ವರ್ಷದ ತುಂಬಿದ ಹೊಸ ಯುವ ಮತದಾರರನ್ನು ನೋಂದಣಿ ಮಾಡುವ ಮೂಲಕ ಶುದ್ಧ ಮತದಾರರ ಪಟ್ಟಿ ಸಿದ್ಧಪಡಿಸಬೇಕು.ಪ್ರತಿಯೊಬ್ಬರು ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು ಸರಳವಾಗಿ ಆಧಾರ್ ಲಿಂಕ್ ಮಾಡಿಕೊಳ್ಳಬಹುದು. ಅರಣ್ಯವಾಸಿಗಳು, ದಿವ್ಯಾಂಗನ್ನು ಮತದಾರರ ಪಟ್ಟಿಗೆ ಸೇರಿಸಲು ಆದ್ಯತೆ ನೀಡಬೇಕು ಎಂದು ಭಾರತ ಚುನಾವಣಾ ಆಯೋಗದ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸ್ವೀಪ್ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವೋಟರ್ ಹೆಲ್ಪಲೈನ್ ಆ್ಯಪ್ ಮೂಲಕ 6 ಬಿ ಲಿಂಕ್ ಮಾಡಬೇಕು.ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್ಓ)ಗಳು ಗರುಡ ಆ್ಯಪ್ ಹೊಂದಿರಬೇಕು. ಆಯೋಗದ ವಾರ್ಷಿಕ ಕಾರ್ಯಸೂಚಿ ಪ್ರಕಾರ ಪ್ರಗತಿ ಸಾಧಿಸಬೇಕು.ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಮರ್ಪಕವಾಗಿ ನಡೆಯಬೇಕು. ಜನಸಂಖ್ಯೆ ಹಾಗೂ ಮತದಾರರ ಸಂಖ್ಯೆ ಅನುಪಾತ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಅರಣ್ಯವಾಸಿಗಳು, ಕುಷ್ಟರೋಗ ಮತ್ತಿತರ ಖಾಯಿಲೆಗಳಿಂದ ಗುಣಮುಖರಾದವರು, ವಿಕಲಚೇತನರು, ಮಹಿಳೆಯರು ಹಾಗೂ ಹೊಸ ಯುವ ಮತದಾರರನ್ನು ಪಟ್ಟಿಗೆ ಸೇರಿಸಲು ನಿರಂತರವಾಗಿ ಚಟುವಟಿಕೆಗಳನ್ನು ಕೈಗೊಳ್ಳಬೇಕು.ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ ಹೆಚ್ಚು ಹೆಚ್ಚು ನವೀನ ಮಾದರಿಯ ಸ್ಪರ್ಧೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸಬೇಕು. ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಶ್ರವಣದೋಷವುಳ್ಳ ವ್ಯಕ್ತಿಗಳನ್ನು ಜಾಗೃತಗೊಳಿಸಲು ವಾಟ್ಸಪ್, ವಿಡಿಯೋ ಕರೆ, ಸಂಜ್ಞಾ ಭಾಷೆ ಬಳಕೆ ಮಾಡಬೇಕು ಎಂದು ಸೂಚಿಸಿದರು.
Also read: ಎಮ್ಮೆ ಅಪಘಾತ ವಿಮೆ ನಿರಾಕರಿಸಿದ ವಿಮಾ ಕಂಪನಿಗೆ 95 ಸಾವಿರ ರೂ.ದಂಡ
2021-22 ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ – ಖರ್ಚು ಹಾಗೂ ಬಳಕೆ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದರು. ಪ್ರಸ್ತುತ ಮತದಾರ ಸಾಕ್ಷರತಾ ಸಂಘಗಳ ಸಂಖ್ಯೆ ಅವುಗಳ ವಾರ್ಷಿಕ ಕಾರ್ಯಸೂಚಿ (calendar of events) , ಚುನಾವಣಾ ಜಾಗೃತಿ ಸಂಘ ( CJCs ) ,ಮತದಾರರ ಜಾಗೃತಿ ಸಂಘ ( VAFS ) , ವಾಟ್ಸಆಪ್ ಗುಂಪುಗಳ ಬಗ್ಗೆ ವಿವರಗಳನ್ನು ಪಡೆದರು. ಮನೆ ಮನೆ ಭೇಟಿ ಕಾರ್ಯಕ್ರಮದ ಅಭಿಪ್ರಾಯ, ಥೀಮ್ ಆಧಾರಿತ ಮತಗಟ್ಟೆ ಕೇಂದ್ರಗಳ ಬಗ್ಗೆ ಸಲಹೆಗಳನ್ನು ಪಡೆದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ,ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಡಯಟ್ ಪ್ರಾಚಾರ್ಯೆ ಎನ್.ಕೆ.ಸಾವ್ಕಾರ, ಚುನಾವಣಾ ತಹಸೀಲ್ದಾರ ಹೆಚ್.ಎನ್. ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಸ್ವೀಪ್ ನೋಡಲ್ ಅಧಿಕಾರಿ ಕೆ.ಎಂ.ಶೇಖ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಸಿ. ಕರಿಗೌಡರ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಮತ್ತಿತರರು ಸಭೆಯಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post