ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಮೈತ್ರೇಯಿ ಆದಿತ್ಯಪ್ರಸಾದ್ |
ಅಭಿರುಚಿಯ ರುಚಿಯೇ ಹಾಗೆ…. ವಿಭಿನ್ನವಾದ ಸಂಗತಿಗಳು, ಸಾಹಿತ್ಯ ಲೋಕದ ಅದ್ಭುತವಾದ ವಿಚಾರಗಳಲ್ಲಿ ಒಂದಾದ ಶ್ರೀ ಶ್ರೀಧರ ಭಗವಾನರ ದತ್ತರಾಜಸ್ತವವನ್ನು ನಮ್ಮೆದುರಿಗೆ ಮಹಾಮಹೋಪಾಧ್ಯಾಯ ಡಾ.ಎಸ್. ರಂಗನಾಥ್ ಅವರ ವಿದ್ವತ್ ಪೂರ್ಣ ನುಡಿಗಳಲ್ಲಿ ಕಳೆದ ಒಂದು ವಾರದಿಂದ ಕೇಳುವಂತೆ ಮಾಡಿದ್ದು ಒಂದೆಡೆಯಾದರೆ…ಮತ್ತೊಂದೆಡೆ ಸಂಗೀತ ಸುಧೆ ಹರಿಸಿ ಮನತಣಿಯುವಂತೆ ಮಾಡಿದುದು.
ನಿಜ…. ಮನಕ್ಕೆ ಮುದ ನೀಡುವ ವಿಷಯಗಳಲ್ಲಿ ಸಂಗೀತಕ್ಕೆ ಮೊದಲನೆಯ ಸ್ಥಾನ. ಅವು ಭಕ್ತಿ, ಭಾವ, ಚಿತ್ರ ಯಾವ ಗೀತೆಯಾದರೂ ಸರಿ ಎಲ್ಲವೂ ಅಮೃತದ ಸುಧೆ ಹರಿಸಿದಂತೆಯೇ…. ಇಷ್ಟೆಲ್ಲಾ ಬರೆಯಲು ಕಾರಣ ಏನೆಂದರೆ ಯಾವಾಗಲೂ ಕಾರ್ಯಕ್ರಮ ನೋಡಿದ ತಕ್ಷಣ ಕಲಾವಿದರನ್ನು ಮಾತಾಡಿಸಿ ಮನದ ಸಂತೋಷವನ್ನು ಅವರಲ್ಲಿಯೂ ವ್ಯಕ್ತಪಡಿಸಿ ಬರುತ್ತಿದ್ದ ನಾನು ಕಾರ್ಯದೊತ್ತಡದಿಂದ ನಿನ್ನೆ ರಂಗಮಂದಿರದಿಂದ ಹಾಗೇ ಬಂದುಬಿಟ್ಟೆ… ಆದರೆ ಮನಸು ಮಾತ್ರ ಕಾರ್ಯಕ್ರಮದ ಹಾಡುಗಳೇ ಗುನುಗುವಂತೆ ಮಾಡಿದ್ದವು. ನಿಜಕ್ಕೂ ಮನಸೊಂದು ಭಾವನಾ ಲೋಕದಲ್ಲಿ ವಿಹರಿಸುವಂತೆ ಮಾಡಿತ್ತು.Also Read>> Karnataka Energy Department Secures ₹3.43 Lakh Crore Investment in Renewable Energy Sector
ಕಾರ್ಯಕ್ರಮಕ್ಕೆ ಕಳೆಗಟ್ಟುವಂತೆ ಮಾಡಿದ್ದು ನಿಜಕ್ಕೂ ಆಯೋಜಕರೇ. ಏಕೆಂದರೆ ಯಾವುದೇ ಸಭಾಕಾರ್ಯಕ್ರಮಗಳಿಲ್ಲದೇ ನೇರವಾಗಿ ಸಂಗೀತ ಸುಧೆ ಹರಿಯುವಂತೆ ಮಾಡಿದ್ದು ಒಂದು ಕಾರಣವಾದರೆ ಮತ್ತೊಂದು ಅವರು ಆಯ್ಕೆ ಮಾಡಿಕೊಂಡ ವಿಷಯ “ಬೆಳ್ಳಿಮೋಡದ ಬಂಗಾರದ ಹಾಡು”.
ಅವುಗಳೆಂದರೆ ಕಾದಂಬರಿ ಆಧಾರಿತ ಹಾಗೂ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಿ ಚಿತ್ರಬ್ರಹ್ಮನೆಂದೇ ಖ್ಯಾತಿಯಾದ ಪುಟ್ಟಣ್ಣ ಕಣಗಾಲ್ ಹಿಟ್ಸ್. ಇದಕ್ಕೆ ಸಾರಥ್ಯ ಖ್ಯಾತ ಸಂಗೀತ ಕಲಾವಿದ ಹಾಗೂ ಶಿವಮೊಗ್ಗದ ಹೆಮ್ಮೆಯ ಪ್ರತಿಭೆ ಶ್ರೀ ದೀಪಕ್ ಜಯಶೀಲನ್ ಅವರದಾಗಿತ್ತು. ಇನ್ನೂ ಹಾಡುಗಾರರಂತೂ ಶ್ರೀಮತಿ ಸುರೇಖಾ ಹೆಗಡೆ, ಶ್ರೀಮತಿ ಶ್ರುತಿ ರಾಘವೇಂದ್ರನ್, ಶ್ರೀ ಮನೋಜವಂ ಆತ್ರೇಯ ಹಾಗೂ ಶ್ರೀ ಪಾರ್ಥ ಚಿರಂತನ್ ನಮಗೆಲ್ಲಾ ಜೇನಸುಧೆ ಹರಿಸಿದವರೇ ಆದರು. ಇವರೆಲ್ಲರ ಹಾಡಿಗೆ ನವಿರಾದಂತಹ ನಿರೂಪಣೆ ಮಾಡಿ ಆ ಹಾಡಿನ ಒಟ್ಟು ಜೀವಾಳವನ್ನು ಪರಿಚಯಿಸುವಂತೆ ಮಾಡಿದ್ದು ನಮ್ಮ ವಿನಯಣ್ಣ. ನಿರ್ದೇಶಕರ ಪರಿಚಯ ಮಾಡಿಸುತ್ತಲೇ, ಹಾಡಿನ ಸೂಕ್ಷ್ಮತೆ, ಗಮನಿಸಬೇಕಾದ ಅಂಶಗಳು, ಆಗಿನ ಹೆಮ್ಮೆ, ಯಾವ ಕಾರಣಕ್ಕಾಗಿ ಆ ಹಾಡು ಶ್ರೇಷ್ಠ, ಅದರ ಅಂತರಂಗ ಎಲ್ಲವನ್ನೂ ಸವಿಸ್ತಾರವಾಗಿ ತಮ್ಮ ಪ್ರೌಢ ಚಿಂತನೆಯ ಸಾಹಿತ್ಯದ ಪರಿಭಾಷೆಯಲ್ಲಿ ಹೆಚ್ಚು ಅಲ್ಲದ ಕಡಿಮೆಯೂ ಎನಿಸದ ರೀತಿಯಲ್ಲಿ ಹಾಡಿನ ಜೀವಾಳವನ್ನು ಅದ್ಭುತವಾಗಿ ನಮಗೆ ಕಟ್ಟಿಕೊಟ್ಟಿದ್ದು ವಿನಯಣ್ಣನ ಹೆಚ್ಚುಗಾರಿಕೆಯೇ ಸರಿ. ವಿನಯ್ ಶಿವಮೊಗ್ಗ, ನಿಜಕ್ಕೂ ಮನೋಜವಂ ಹೇಳಿದಂತೆ ಅವರು ದಾರದಂತೆ ಕೆಲಸ ಮಾಡಿದ್ದಾರೆ. ಹೂ ಪೋಣಿಸಿದ ದಾರ ಮೇಲ್ನೋಟಕ್ಕೆ ಕಾಣಿಸದೇ ಹೋದರೂ ಹಾರಕ್ಕೆ ದಾರವೆಂಬಂತೆ ಸರಿಯಾದ ಸೂತ್ರಧಾರರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಹಾಡುಗಳಿಗೆ ಸರಿಯಾಗಿ ಸಾಥ್ ನೀಡಿದವರು ಒಂದೆಡೆಯಾದರೆ ಅದರ ಇಂಪನ್ನು ಸರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಸೌಂಡ್ ಸಿಸ್ಟಮ್ ಎಫೆಕ್ಟ್ ಬಹುಮುಖ್ಯ. ಆ ತಂತ್ರಜ್ಞಾನ ಚೆನ್ನಾಗಿ ಅರಿತು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಚಿನ್ನು ಸೌಂಡ್ ಸಿಸ್ಟಮ್ ನ ದರ್ಶನ್. ಏಕೆಂದರೆ ಇಂಪಾಗಿ ಹಾಡಿದ್ದನ್ನು ಆ ಸ್ವರಗಳ ಏರಿಳಿತ ಎಲ್ಲವೂ ಅಷ್ಟೇ ನಿಖರವಾಗಿ ಕೇಳುಗರ ಕಿವಿ ತಲುಪಿತು. ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು. ಹಾಡು ಹೇಳುವಾಗ ಹಾಡಿನ ಕೊಂಚ ತುಣುಕು ತೋರಿಸಿ ಉಳಿದಂತೆ ಸಾಹಿತ್ಯ ರಚನಕಾರರು, ಸಂಗೀತ ನಿರ್ದೇಶಕರು, ಹಾಡಿದ ಹಿನ್ನಲೆ ಗಾಯಕರ ಫೋಟೋಗಳನ್ನ LED ವಾಲ್ ನಲ್ಲಿ ತೋರಿಸಿ ಅನೇಕರಿಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿಯಂತವರ ದರ್ಶನ ಮಾಡಿಸುವಲ್ಲಿ ಯಶಸ್ವಿಯಾದರು.
ಬರೆಯಲೇ ಬೇಕಾದ ಪ್ರಮುಖ ವಿಷಯವೆಂದರೆ ಆಯ್ಕೆ ಮಾಡಿಕೊಂಡ ಹಾಡುಗಳು. ನನ್ನ ಆಲ್ ಟೈಮ್ ಫೇವರಿಟ್ ಹಾಡಾದ ಗೆಳತೀ ಓ ಗೆಳತೀ.., ಕವಿ ಕಂಡ ಕಾವ್ಯಗಳಂತೆ ಇರುವ ವರಕವಿಯ ಮೂಡಲ ಮನೆಯ ಮುತ್ತಿನ ನೀರಿನ… ಗಗನವು ಎಲ್ಲೋ ಭೂಮಿಯು ಎಲ್ಲೋ, ಹದಿನಾಲ್ಕು ವರ್ಷ ವನವಾಸದಿಂದ…. ನಾಗರಹಾವಿನ ಹಾವಿನ ದ್ವೇಷ ಹನ್ನೆರಡು ವರುಷ, ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ, ನೀನೇ ಸಾಕಿದಾ ಗಿಣಿ, ವಿರಹಿಗಳ ಧ್ಯೇಯಗೀತೆಯಾದ ಅಥವಾ ಮನದಾಳದ ಮಾತಿನಂತಾದ ವಿರಹ ನೋವು ನೂರು ತರಹ…. ಮನಸಿನ ಅಭಿರುಚಿಯನ್ನು ಉದ್ದೀಪನಗೊಳಿಸಿ ಪ್ರೇರೇಪಣೆ ಕೊಡುವ ಹಾಡಾದ ಪಂಚಮ ವೇದ ಪ್ರೇಮದ ನಾದವೇ ಮೊದಲಾದ ಹಾಡುಗಳು ಒಂದಾದ ಮೇಲೊಂದು ಸಂಗೀತ ರಸಿಕರನ್ನು ತಮ್ಮ ಕಳೆದ ಬಾಲ್ಯ, ಯೌವನದ ದಿನಗಳಿಗೆ ಕೊಂಡೋಯ್ದದ್ದಂತೂ ನಿಜ. ಈ ಸಂಗೀತ ಸುಧೆ ಹರಿಸಲು ಕಾರಣೀಭೂತರಾದ ಆಯೋಜಕ, ಪ್ರಾಯೋಜಕರೆಲ್ಲರಿಗೂ ಎಲ್ಲ ಸಂಗೀತಾಸಕ್ತ ರಸಿಕ ಮನಸುಗಳ ಪರವಾಗಿ ಅನಂತಾನಂತ ಧನ್ಯವಾದಗಳು.
ಚಿತ್ರಕೃಪೆ : ಆದಿತ್ಯಪ್ರಸಾದ್ ಎಂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post