ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಪುಟಾಣಿಗಳ ಪುಟ್ಟ ಪುಟ್ಟ ಹೆಜ್ಜೆಗಳನ್ನು ಸಂಗೀತದ ಲಯಕ್ಕೆ ಅನುಸಾರವಾಗಿ ಒಗ್ಗಿಸಿ, ಬಗ್ಗಿಸಿ ಶಾಲಾ ಪಠ್ಯದ ಹಾಡುಗಳನ್ನು, ಜಾನಪದ ಹಾಡುಗಳನ್ನು, ದೇಶಭಕ್ತಿ ಗೀತೆಗಳನ್ನು ಕಲಿಸುವ ಪರಿ ಅನನ್ಯ, ಅಪೂರ್ವ. ಇವರೇ ನಮ್ಮ ಅಪರೂಪದ ಅದ್ವಿತೀಯ ಸಾಧಕಿ, ಶಿಕ್ಷಕಿ, ನೃತ್ಯಗುರು ವಂದನಾ ರೈ, ಕಾರ್ಕಳ. #VandanaRai
ಕೊರೋನ ಮಹಾಮಾರಿ ಸಮಸ್ತ ಜಗತ್ತನ್ನೇ ತಲ್ಲಣಗೊಳಿಸಿದ ಕಾಲ. ಅಗಣಿತ ಜನರ ಪ್ರಾಣಗಳನ್ನು ನುಂಗಿ ನೊಣೆದ ಕಾಲ. ಭೂದೇವಿ ದಿನದ ಪ್ರದಕ್ಷಿಣೆಯನ್ನೇ ನಿಲ್ಲಿಸಿದಳೋ ಎಂದು ಭಾಸವಾದ ಕಾಲ. ಮನುಷ್ಯ ಜಂಗಮರು ಪ್ರಾಪಂಚಿಕ ಚಲನ ವಲನಗಳನ್ನೆಲ್ಲ ಸ್ಥಾವರಗೊಳಿಸಿದ ಕಾಲ. ಶ್ವಾಸದ ಮೇಲೆ ವಿಶ್ವಾಸ ಗತಿಸಿದ ಕಾಲ. ಮನುಜನ ಬಾಳ ಬಟ್ಟೆ ನಿಂತ ನೀರಾಗಿ ನಾರತೊಡಗಿದ ಕಾಲ. ಸಂ-ಬಂಧಿತರು ಬಂಧನಗಳ ಕಳಚಿ ನೀವೊಂದು ತೀರ; ನಾವೊಂದು ತೀರ ಎಂದು ಗುನುಗತೊಡಗಿದ ಕಾಲ. ಆಗ ದಟ್ಟ ಕರಿಮೋಡಗಳ ಎಡೆಯಿಂದ ಸೂರ್ಯ ರಶ್ಮಿಯಂತೆ ಆನ್-ಲೈನ್ ಎಂಬ ಭವ್ಯ, ದಿವ್ಯ, ನವ್ಯ, ವಿನೂತನ ಅಸ್ತ್ರ ಧರೆಗಿಳಿದ ಕಾಲ. ಜಂಗಮವಾಣಿಯು ಕಬಂಧ ಕರಗ್ರಸ್ತ ಕರಗತ ಶಸ್ತ್ರವಾದ ಕಾಲ. ಕೆಲವೊಂದು ಒಡೆದ ಒಡಲುಗಳು ತಮ್ಮ ಕ್ರೀಯಾಶೀಲತೆಯನ್ನು ಒರೆಗೆ ಒರಸಿ ನೋಡುವ ಪ್ರಯತ್ನ ಮಾಡಿದವು. ಮುದುಡಿ ಕರಟಿದ ಮನಸುಗಳು ಕೊನರಿ ಬಿರಿದು ಅರಳ ತೊಡಗಿದವು. ಅಂತರಂಗದಲ್ಲಿ ಅಡಗಿ ಸಂಕೋಚನ ಗೊಂಡಿದ್ದ ಪ್ರತಿಭೆಗಳು ತೆರೆಮರೆಯಲ್ಲಿ ವಿಕಸನಗೊಂಡು ಹಿನ್ನೆಲೆಯಿಂದ ಮುನ್ನಲೆಗೆ ಬಂದು ಯುಟ್ಯೂಬ್ ಎಂಬ ರಂಗವೇರಿದವು.


ಅಂತರಂಗದಲ್ಲಿ ಅಡಗಿರುವ ಪ್ರತಿಭೆಯನ್ನು ವಿಕಸನಗೊಳಿಸಲು ವಂದನಾ ರೈ ಅವರಂಥ ಕೆಲವೇ ಕೆಲವು ಮಂದಿಗೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಜ್ಞಾನದ ಅಥವಾ ಪ್ರತಿಭೆಯ ದೀಪ ಬೆಳಗಬೇಕಾದರೆ ಸಾಧನೆ ಬೇಕು. ಯೋಚನೆ, ಯೋಜನೆಗಳು ಬೇಕು. ಇವು ಸತತವಾದ ಅಧ್ಯಯನ, ಅಭ್ಯಾಸ, ಚಿಂತನ, ಮನನ, ಮಂಥನ, ಅಧ್ಯಾಪನ ಮತ್ತು ಜಿಜ್ಞಾಸೆ ಮುಂತಾದವುಗಳಿಂದ ಪರಿಪಕ್ವಗೊಳ್ಳುತ್ತವೆ. ಎಲ್ಲದಕ್ಕೂ ಮೂಲದಲ್ಲಿ ಎಂದೂ ಬತ್ತದ ಲವಲವಿಕೆಯ, ಉಲ್ಲಾಸದ, ಉತ್ಸಾಹ ಉತ್ತುಂಗದ ಸೆಲೆಬೇಕು. ಇಲ್ಲದಿದ್ದರೆ ಇಂಥ ಸಾಧನೆಗಳು ಹೊರಹೊಮ್ಮವುದಿಲ್ಲ.

ಈಟಿವಿಯ ಸೂಪರ್ ಶ್ರೀಮತಿ, ಕಸ್ತೂರಿ ವಾಹಿನಿಯ ರಾಣಿ, ಮಹಾರಾಣಿ, ಚಿನ್ನದ ಬೇಟೆ, ನಾನೇ ರಾಜಕುಮಾರಿ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಬಂಟ ಕಲೋತ್ಸವದಲ್ಲಿ ಅಭಿನಯಕ್ಕೆ ಪ್ರಶಸ್ತಿ ಪಡೆದಿದ್ದಾರೆ. ರಿಯಾಲಿಟೀ ಶೋ “ಯಾರಿಗುಂಟು ಯಾರಿಗಿಲ್ಲ” ಇದರಲ್ಲಿ ವಿಜೇತರು.
ಜೇಸೀ, ರಿಲಯನ್ಸ್, ರೋಟರಿ ಮೊದಲಾದ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ವಂದನಾ ರೈ ಅವರನ್ನು ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉತ್ತಮ ಶಿಕ್ಷಕಿ ಪ್ರಶಸ್ತಿ, ಕರ್ನಾಟಕ ಯುವರತ್ನ ಪ್ರಶಸ್ತಿ, “ತುಳುನಾಡ ಪ್ರತಿಭೆ” ಪ್ರಶಸ್ತಿ, 2021ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪ್ರಜಾವಾಣಿ ವರ್ಷದ ಸಾಧಕಿ ಪ್ರಶಸ್ತಿ, ಕಲಾ ಸಂಕುಲ ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಟ್ಟದ ಕ್ರಿಯಾಶೀಲ ಶಿಕ್ಷಕಿ ಪ್ರಶಸ್ತಿ -2023, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಮಟ್ಟದ ವೇದಿಕೆಯಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಇತ್ಯಾದಿಗಳು.
ಕಾರ್ಕಳ, ಉಡುಪಿಯ ಎಲ್ಲೆ ದಾಟಿ ಕರ್ನಾಟಕದಾದ್ಯಂತದ ಜನರ ಮನವನ್ನು ಮೀಟಿದ್ದಾರೆ ವಂದನಾ. ಕಾರ್ಕಳದಲ್ಲಿ ಮೂರು ಕಡೆ ‘ಮಯೂರಿ’ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ಸುತ್ತಮುತ್ತಣದ ಆಸಕ್ತ ಮಕ್ಕಳಿಗೆ ತನ್ನ ಪ್ರತಿಭೆಯನ್ನು, ವಿದ್ಯೆಯನ್ನು ಧಾರೆಯೆರೆಯುತ್ತಿದ್ದಾರೆ. ಅವರಿಗೂ ಅವರ ನೃತ್ಯ ಸಂಸ್ಥೆಗಳಿಗೂ ಶುಭವಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post