ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗಾಜನೂರು ಅಣೆಕಟ್ಟೆಯಿಂದ ಒಟ್ಟು 70 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಪರಿಣಾಮವಾಗಿ ಹಳೇ ಶಿವಮೊಗ್ಗ ಭಾಗದಲ್ಲಿ ನೆರೆಯ ಆತಂಕ ಎದುರಾಗಿದೆ.
ಈ ಕುರಿತಂತೆ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದು, ರಾತ್ರಿ 8.30ರ ಮಾಹಿತಿಯಂತೆ ಒಳಹರಿವಿನ ಪ್ರಮಾಣ 68500 ಕ್ಯೂಸೆಕ್ಸ್ ಇದ್ದು, ಹೊರ ಹರಿವಿನ ಪ್ರಮಾಣ 71 ಸಾವಿರ ಕ್ಯೂಸೆಕ್ಸ್ ಇದೆ. ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಕೊಂಚ ಮಳೆ ಕಡಿಮೆಯಾಗಿರುವ ಕಾರಣ ಒಳ ಹರಿವು ಹಾಗೂ ಹೊರಹರಿವಿನ ಪ್ರಮಾಣ ಬಹುತೇಕ ಸಮವಾಗಿದೆ. ಹೀಗಾಗಿ, ಮಳೆ ಮತ್ತೆ ಹೆಚ್ಚಾಗುವವರೆಗೂ ಹೊರ ಹರಿವಿನ ಪ್ರಮಾಣವನ್ನು 70 ಸಾವಿರ ಕ್ಯೂಸೆಕ್ಸ್’ಗೆ ಕಾಯ್ದುಕೊಳ್ಳಲಾಗುತ್ತಿದೆ.
ಇನ್ನು, ತುಂಗಾ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವ ಕಾರಣ ಹಳೇ ಶಿವಮೊಗ್ಗ ಭಾಗದ ಬಹಳಷ್ಟು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ. ರಾತ್ರಿ ಆಟೋ ಮೂಲಕ ಈ ಭಾಗಗಳಲ್ಲಿ ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಯಾವುದೇ ವೇಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಜನವಸತಿ ಪ್ರದೇಶಗಳಿಗೆ ನುಗ್ಗಬಹುದಾಗಿದ್ದು, ಎಂತಹುದ್ದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿರುವಂತೆ ಪಾಲಿಕೆಗೆ ಸೂಚನೆ ನೀಡಲಾಗಿದೆ.
Get In Touch With Us info@kalpa.news Whatsapp: 9481252093







Discussion about this post