ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರನ್ನು ನೇಮಕ ಮಾಡಿರುವ ಕ್ರಮವನ್ನು ಅಮ್ ಆದ್ಮಿ ಪಕ್ಷ ಖಂಡಿಸಿದೆ.
ಈ ಕುರಿತಂತೆ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಭ್ರಷ್ಟಾಚಾರದ ಕಡತಗಳು, ಅಕ್ರಮ ಟೆಂಡರ್ಗಳು ಹಾಗೂ ಇನ್ನಿತರೆ ಅವ್ಯವಹಾರಗಳ ಕಡತಗಳನ್ನು ಸುಟ್ಟು ಹಾಕಲು ಎನ್.ಆರ್. ಸಂತೋಷ್ ಎಂಬ ಖಾಸಗಿ ವ್ಯಕ್ತಿಯನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ತಂಗಿಯ ಮೊಮ್ಮಗನಾದ ಈ ಕುಟುಂಬದ ವ್ಯಕ್ತಿಯನ್ನು ರಾಜ್ಯ ಸರ್ಕಾರದ ಶಾಸನಾತ್ಮಕ ಆಡಳಿತ ನಿರ್ವಹಣೆಯಲ್ಲಿ ಸೇರಿಸಿಕೊಂಡು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನಗಳನ್ನು, ಕಚೇರಿ ನಿರ್ವಹಣೆಗೆ ಸಿಬ್ಬಂದಿಗಳನ್ನು ನೀಡಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ನೀಡಿರುವ ಉದ್ದೇಶ ನಿಧಾನಕ್ಕೆ ಬಯಲಾಗುತ್ತಿದೆ. ಎಲ್ಲಾ ಇಲಾಖೆಯಲ್ಲೂ ಕೈಯಾಡಿಸುತ್ತಿರುವ ಸಂತೋಷ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿಯ ನಾಯಕರುಗಳು, ಯಡಿಯೂರಪ್ಪ ಅವರು, ಹಾಗೂ ವಿಜಯೇಂದ್ರ ಸೇರಿದಂತೆ ಇತರೇ ಸಹೋದ್ಯೋಗಿಗಳು ಎಲ್ಲಾ ಇಲಾಖೆಗಳಲ್ಲಿ ನಡೆಸಿರುವ ಕೋಟ್ಯಂತರ ರೂಪಾಯಿ ಅಕ್ರಮಗಳ ಕಡತಗಳನ್ನು ಹುಡುಕಿ ಸುಟ್ಟು ಹಾಕಲು ಎಂದು ಆರೋಪಿಸಿದ್ದಾರೆ.
ಈ ನೇಮಕಾತಿ ಸಂವಿಧಾನ ವಿರೋಧಿ ಹಾಗೂ ಕಾನೂನು ವಿರೋಧಿಯಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪರಮಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಜನಪಕ್ಷಪಾತ ನಡೆಸುತ್ತಿರುವುದು ಸ್ಪಷ್ಟವಾಗಿದೆ ಮುಖ್ಯಮಂತ್ರಿಗಳ ಈ ನಡೆಯನ್ನು ತೀವ್ರವಾಗಿ ಪಕ್ಷವು ಖಂಡಿಸುತ್ತದೆ. ಈಗಾಗಲೇ ಮುಖ್ಯಮಂತ್ರಿಗಳ ಮಗ ವಿಜಯೇಂದ್ರ ವಿರುದ್ಧವೂ ಅನೇಕ ಹಗರಣಗಳು ಕೇಳಿ ಬಂದು ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಈ ಮೂಲಕ ಮುಖ್ಯಮಂತ್ರಿಗಳು ಅಕ್ರಮ ಕೂಟ ರಚನೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಈ ವ್ಯಕ್ತಿಯ ವಿರುದ್ಧ ಈಗಾಗಲೇ ಆಪರೇಷನ್ ಕಮಲದಂತಹ ಅಸಂವಿಧಾನಿಕ ಪ್ರಜಾಪ್ರಭುತ್ವ ವಿರೋಧಿ ಕುಕೃತ್ಯಗಳಲ್ಲಿ ಭಾಗಿಯಾಗಿರುವ ನೇರ ಸಾಕ್ಷಿಗಳು ರಾಜ್ಯದ ಜನತೆ ಮುಂದಿವೆ. ಈ ವ್ಯಕ್ತಿಯ ವಿರುದ್ಧ ಈಗಾಗಲೇ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳು ಸಹ ದಾಖಲಾಗಿರುವ ವರದಿಗಳು ಮಾಧ್ಯಮಗಳಲ್ಲಿ ಈಗಾಗಲೇ ಬಿತ್ತರವಾಗಿದೆ. ಈ ವ್ಯಕ್ತಿಯ ವಿರುದ್ಧ ಬಿಜೆಪಿಯ ಪ್ರಮುಖ ನಾಯಕ ಈಶ್ವರಪ್ಪನವರು ಸಹ ಈ ಹಿಂದೆ ಗುರುತರವಾದ ಆರೋಪವನ್ನು ಮಾಡಿದ್ದರು. ರಾಜ್ಯ ಸರ್ಕಾರದಲ್ಲಿನ ಕಡತ ಪರಿಶೀಲನೆಯಂತಹ ಮಹತ್ವದ ಆಡಳಿತಾತ್ಮಕ ನಿರ್ವಹಣೆಯಲ್ಲಿ ನೇರವಾಗಿ ಕೈಹಾಕಿ ಸಾವಿರಾರು ಕೋಟಿ ರೂಗಳ ಭ್ರಷ್ಟಾಚಾರ ಎಸಗಲು ನೇಮಕಾತಿ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ರಾಜಕೀಯ ಎಂದರೆ ಹಣ ಮಾಡುವ ದಂಧೆಯನ್ನಾಗಿ ಮಾಡಿಕೊಂಡಿರುವ ಮುಖ್ಯಮಂತ್ರಿಗಳು ಅಸಂವಿಧಾನಿಕವಾಗಿ ಈ ಹುದ್ದೆಯನ್ನು ತಮ್ಮ ಆಪ್ತನಿಗೆ ಹಂಚಿ, ಈ ಮೂಲಕ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಕುರ್ಚಿ ಕೂಡ ಅಲುಗಾಡುತ್ತಾ ಇರುವುದರಿಂದ, ಈ ಸಮಯದ ಒಳಗೆ ತಮ್ಮ ಆಪ್ತರಿಗೆ ಗಂಟು ಮಾಡಿಟ್ಟು ಕೊಳ್ಳಲು ಆಸ್ಪದ ನೀಡಿದ್ದಾರೆ. ಕಷ್ಟ ಕಾಲದಲ್ಲಿ ಜೊತೆಯಲ್ಲಿ ಇದ್ದವರಿಗೆಲ್ಲ ಪಟ್ಟ ಕಟ್ಟಲು ಇದೇನು ರಾಜ ಪ್ರಭುತ್ವವೇ? ಖಾಸಗಿ ವ್ಯಕ್ತಿಯೊಬ್ಬನಿಗೆ ಪ್ರಮುಖ ಹುದ್ದೆ ನೀಡಲು ನಾಚಿಕೆ ಆಗುವುದಿಲ್ಲವೇ ಮುಖ್ಯಮಂತ್ರಿಗಳೇ. ಹಿರಿಯರಾದ ನೀವು ಖುರ್ಚಿಯ ಆಸೆಗಾಗಿ ಸ್ವಾಭಿಮಾನ ಮರೆತು ಕಂಡಕಂಡವರಿಗೆಲ್ಲ ಅಧಿಕಾರ ಹಂಚುವ ಪರಿಪಾಠವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ.ಈ ಕೂಡಲೇ ಈ ವ್ಯಕ್ತಿಯನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಬೇಕು ಹಾಗೂ ಈ ವಿಚಾರವಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post