ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಧ್ಯಾಹ್ನದ 2 ಗಂಟೆಯಿಂದ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಧಾವಂತದ ಪರಿಣಾಮ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಇಂದು ಭಾರೀ ಟ್ರಾಫಿಕ್ ಜಾಮ್ ಕಂಡು ಬಂದಿದೆ.
ಮಧ್ಯಾಹ್ನದ ನಂತರದ ಲಾಕ್ ಡೌನ್ ಅನ್ನು ನಿನ್ನೆಯಿಂದ ಪೊಲೀಸರು ಕಠಿಣವಾಗಿ ಜಾರಿಗೆ ತರುತ್ತಿದ್ದು, ಅನಾವಶ್ಯಕವಾಗಿ ಓಡಾಡುತ್ತಿದ್ದ ಹಲವು ಮಂದಿಗೆ ದಂಢ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕೊಂಚ ಎಚ್ಚೆತ್ತುಕೊಂಡಿರುವ ಜನ, ಬೆಳಗ್ಗೆಯೇ ಖರೀದಿ ಹಾಗೂ ವ್ಯವಹಾರಗಳನ್ನು ಮುಗಿಸಿಕೊಳ್ಳುವ ಧಾವಂತ ಕಂಡು ಬಂದಿತು.
ಈ ಪರಿಣಾಮವಾಗಿ ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ವೃತ್ತ, ದುರ್ಗಿಗುಡಿಯಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಭದ್ರಾವತಿಯಲ್ಲೂ ಹೆವಿ ಟ್ರಾಫಿಕ್ ಜಾಮ್
ಇನ್ನು, ಭದ್ರಾವತಿಯಲ್ಲೂ ಸಹ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಮುಂಜಾನೆಯಿಂದಲೇ ವ್ಯಾಪಾರ ವ್ಯವಹಾರಗಳು ಬಿರುಸಿನಿಂದ ಸಾಗಿದ್ದು, 12 ಗಂಟೆ ನಂತರ ಪೇಟೆಯಲ್ಲಿ ಜನ ಹಾಗೂ ವಾಹನಗಳ ಸಂಖ್ಯೆ ಅಧಿಕವಾಗಿತ್ತು.

ಬಿಎಚ್ ರಸ್ತೆ, ಚನ್ನಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ, ಕೆಲವು ಕಾಲ ವಾಹನಗಳು ಮಂದಗತಿಯಲ್ಲಿ ಸಾಗುತ್ತಿದ್ದವು. ಅಂಡರ್ ಬ್ರಿಡ್ಜ್, ಹಾಲಪ್ಪ ಸರ್ಕಲ್, ರೈಲ್ವೆ ನಿಲ್ದಾಣದ ಮುಂಭಾಗದ ಬಿಎಚ್ ರಸ್ತೆ, ಮಾಧವಾಚಾರ್ ವೃತ್ತಗಳಲ್ಲಿ ವಾಹನಗಳು ಸಾಮಾನ್ಯ ದಿನಕ್ಕಿಂತಲೂ ಹೆಚ್ಚಾಗಿ ಕಂಡು ಬಂದಿತ್ತು. ಪ್ರಮುಖವಾಗಿ ಮಾಧವಾಚಾರ್ ವೃತ್ತದಿಂದ ರಂಗಪ್ಪ ವೃತ್ತದವರೆಗಿನ ಚನ್ನಗಿರಿ ರಸ್ತೆಯಲ್ಲಿ ಹೆವಿ ಟ್ರಾಫಿಕ್ ಕಂಡು ಬಂದಿತು. ಅಲ್ಲದೇ, ನಗರದಲ್ಲಿ ದಿನಸಿ, ತರಕಾರಿ, ಹೂವು ಹಣ್ಣು ಖರೀದಿಗೆ ಜನರು ಮುಗಿಬಿದ್ದಿದ್ದರು.
Get In Touch With Us info@kalpa.news Whatsapp: 9481252093
















