ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ನಲ್ಲಿರುವ 5 ಎಕರೆ ಜಾಗದಲ್ಲಿ ವಿಜ್ಞಾನ ಕೇಂದ್ರ ಕ್ಯಾಟಗರಿ-2ನ್ನು 12 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಣವಾಗುತ್ತಿದ್ದು ಸಂಸದ ಬಿ.ವೈ.ರಾಘವೇಂದ್ರ ಇಂದು ಸ್ಥಳಕ್ಕೆ ಭೇಟಿನೀಡಿ ಕಾಮಗಾರಿ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಕೇಂದ್ರಕ್ಕೆ 5ಎಕರೆ ಜಾಗವನ್ನು ಕೇಳಿದ್ದೆವು. ಯೂನಿರ್ವಸಿಟಿ ಬೆಲೆಬಾಳುವ ಈ ಜಾಗವನ್ನು ವಿಜ್ಞಾನ ಕೇಂದ್ರಕ್ಕೆ ನೀಡಿದೆ. ಇದಕ್ಕಾಗಿ ನಾನು ವಿವಿ ಆಡಳಿತಕ್ಕೆ ಅಭಿನಂದಿಸುತ್ತೇನೆ ಎಂದರು.
ಇದರ ಉದ್ದೇಶ ಪ್ರಾಕ್ಟಿಕಲ್ ಆಗಿ ವಿದ್ಯಾರ್ಥಿಗಳಿಗೆ ಈ ವಿಜ್ಞಾನ ಕೇಂದ್ರದ ಪ್ರಯೋಗಾಲಯದ ಅನುಭವ ಸಿಗಬೇಕು ಎಂಬುದು ಉದ್ದೇಶವಾಗಿದೆ. ಆಗಿನ ಕೇಂದ್ರ ಮಂತ್ರಿಗಳಾದ ಮನ್ಸೂಕ್ ಮಾಂಡವೀಯ ಅವರಿಗೆ ನಾನು ಮನವಿ ಮಾಡಿದ ಹಿನ್ನಲೆಯಲ್ಲಿ ಈ ಕೇಂದ್ರಕ್ಕೆ ಕಟ್ಟಡ ಕಾಮಗಾರಿಗೆ 10 ಕೋಟಿ ರೂ. ಹಾಗೂ ಪ್ರಯೋಗಾಲಯದ ಉಪಕರಣಗಳಿಗೆ 2 ಕೋಟಿ ರೂ. ಮಂಜೂರಾಗಿತ್ತು. ಕಟ್ಟಡ ಪೂರ್ಣಗೊಳ್ಳಲು ಇನ್ನೂ 1 ಕೋಟಿ ರೂ. ಕೊರತೆಯಿದ್ದು, ಅದನ್ನು ಹೊಂದಿಸಬೇಕಾಗಿದೆ ಎಂದರು.
Also read: ರಾಜ್ಯವನ್ನು ಬರಗಾಲ ಪೀಡಿತವೆಂದು ಘೋಷಿಸಿ: ಎಚ್.ಆರ್. ಬಸವರಾಜಪ್ಪ ಆಗ್ರಹ
ಸಾಗರದಾಳದಲ್ಲಿನ ಜೀವ ವೈವಿಧ್ಯ ಹಾಗೂ ಇನ್ನಿತರ ವೈಜ್ಞಾನಿಕ ಮಾಹಿತಿ ಪಡೆಯಲು ಈ ವಿಜ್ಞಾನ ಕೇಂದ್ರ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ. ಇಲ್ಲಿ ಸಂಶೋಧನೆಗೂ ಅವಕಾಶವಿದೆ. ಆಸಕ್ತ ಇರುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 50:50ರ ಅನುಪಾತದಲ್ಲಿ ಈ ಕೇಂದ್ರಕ್ಕೆ ಅನುದಾನ ನೀಡಿದೆ. ಇನ್ನೂ 2.5 ಎಕರೆ ಜಾಗ ಉಳಿಯಲಿದ್ದು, ಇದರಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಪ್ಲಾನಿಟೋರಿಯಂ ಕೂಡ ನಿರ್ಮಿಸುತ್ತೇವೆ. ಯುವ ವಿಜ್ಞಾನಿಗಳನ್ನು ಬೆಳೆಸುವ ಕಾರ್ಯಕ್ರಮ ಇದಾಗಿದೆ. ಆಯನೂರಿನಲ್ಲಿ ಈಗಾಗಲೇ ಇರುವ ತಾರಾಲಯವನ್ನೂ ಕೂಡ ರಾಜ್ಯ ಸರ್ಕಾರದ ನೆರವಿನಿಂದ ಅಭಿವೃದ್ಧಿಪಡಿಸಲಾಗುವುದು ಎಂದರು.
ಮಳೆಯ ಅಭಾವ ಮತ್ತು ರೈತರಿಗೆ ಕೇಂದ್ರ ಸರ್ಕಾರದ ಪರಿಹಾರ ವಿಳಂಬ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ಅವರ ಅಧಿಕಾರದಲ್ಲಿದ್ದಾಗ ತುಂಗಾ, ಹೊಸಳ್ಳಿ ಏತ ನೀರಾವರಿ ಸೇರಿದಂತೆ 10ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ನೀರಾವರಿ ಯೋಜನೆಗಳಿಗೆ ಸುಮಾರು 2.5 ಸಾವಿರ ಕೋಟಿ ಅನುದಾನ ನೀಡಿದ್ದರು. ಅದರ ಪರಿಣಾಮ ಮಳೆ ಕಡಿಮೆ ಇರುವ ಈ ಸಂದರ್ಭದಲ್ಲಿ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬುವ ಕೆಲಸ ಆಗುತ್ತಿದೆ. ವಿದ್ಯುತ್ ಇಲಾಖೆಗೆ 67 ಕೋಟಿ ರೂ. ಬಿಲ್ ಬಾಕಿ ಇರುವ ಕಾರಣ ನೀರು ಲಿಫ್ಟ್ಮಾಡುವ ಕಾರ್ಯ ನಿಂತ್ತಿತ್ತು. ನಾನು ಖುದ್ದಾಗಿ ಸಚಿವ ರಾಮಲಿಂಗಾರೆಡ್ಡಿಯವರಿಗೆ ಭೇಟಿಯಾಗಿ ಸಮಸ್ಯೆ ವಿವರಿಸಿ ತಕ್ಷಣ ವಿದ್ಯುತ್ ಇಲಾಖೆಗೆ ಬಾಕಿಯಿರುವ ಹಣ ಸಂದಾಯ ಮಾಡಲು ವಿನಂತಿಸಿದ್ದೆ. ಅವರು ತಾತ್ಕಾಲಿಕವಾಗಿ 6 ಕೋಟಿ ರೂ. ಹಣ ಬಿಡುಗಡೆ ಮಾಡಿ ಏತ ನೀರಾವರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಕೆಪಿಟಿಸಿಎಲ್ ವಿದ್ಯುತ್ ಸಂಪರ್ಕ ನೀಡಿದ್ದು, ಈಗ ಕೆರೆ ತುಂಬಿಸುವ ಆಗಿದೆ.
ಶಿಕಾರಿಪುರದ 60 ಕೆರೆಗಳಲ್ಲಿ ಶೇ.50ರಷ್ಟು ಕೆರೆಗಳನ್ನು ತುಂಬಿಸಲಾಗಿದೆ. ಸೊರಬದಲ್ಲಿ ವರದಾ ನದಿಯಲ್ಲಿ ಕೂಡ ಈ ತಿಂಗಳ ಅಂತ್ಯದವರೆಗೆ ಮಳೆ ಬಾರದಿದ್ದರೂ ಪಂಪಿಂಗ್ ಮಾಡುವಷ್ಟು ನೀರು ಲಭ್ಯವಿದೆ. ಮಳೆಗಾಲದಲ್ಲೂ ನೀರಿನ ಕೊರತೆಯಾದರೆ ಈ ಏತ ನೀರಾವರಿಯಿಂದ ರೈತರಿಗೆ ನೀರು ತಲುಪಿಸಲು ಸಾಧ್ಯವಾಗಿದೆ ಎಂದರು.
ಆಗುಂಬೆ ಸುರಂಗಮಾರ್ಗದ ಕುರಿತು ತಾಂತ್ರಿಕ ಪರಿಣಿತರೊಂದಿಗೆ ಬರುವ ಶುಕ್ರವಾರ ಸಭೆ ಇದೆ. ಅಲ್ಲಿ ಸಾಧಕ-ಬಾಧಕಗಳ ಚರ್ಚೆಯಾಗಲಿದೆ. ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತದ ಬಗ್ಗೆ ಅಧ್ಯಯನ ಮಾಡಿದ ಅಧಿಕಾರಿಯೇ ಈ ತಂಡದಲ್ಲಿರುತ್ತಾರೆ. ಆಗುಂಬೆ ಘಾಟ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 420 ಕೋಟಿ ರೂ. ಮಂಜೂರಾಗಿದ್ದು, ಅರಣ್ಯ ಇಲಾಖೆ ಅನುಮತಿ ದೊರಕಿದ ಕೂಡಲೇ ಕಾಮಗಾರಿ ವೇಗೆ ಪಡೆಯಲಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಕಾಮಗಾರಿ ನಡೆಸಲಾಗುವುದು. ಪ್ರಕೃತಿ ಉಳಿಸಲು ಸುರಂಗ ಮಾರ್ಗವೇ ಸಹಕಾರಿ ಎಂಬುದು ತಜ್ಞರ ಅಭಿಪ್ರಾಯ. ಪ್ರಕೃತಿ ಉಳಿಯಬೇಕು ಜನರ ಬದುಕು ಉಳಿಯಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.
ಮುಖ್ಯಮಂತ್ರಿಗಳು ಮತ್ತು ಕೆಲವು ಸಚಿವರು ಕೇಂದ್ರದ ಮೇಲೆ ಅನುದಾನ ಬಂದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾಡುವ ಕರ್ತವ್ಯಗಳನ್ನು ಮೊದಲು ಅವರು ಚಿಂತಿಸಲಿ. ರೈತರಿಗೆ ಉತ್ತೇಜನ ನೀಡುವ ಕಾರ್ಯ ಮಾಡಲಿ. ಬೀಜ, ಗೊಬ್ಬರದ ವಿತರಣೆ ಮಾಡಲಿ. ಕೇಂದ್ರ ಸರ್ಕಾರಕ್ಕೆ ಅನುದಾನ ಕೇಳುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸಂಸದರಾಗಿ ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಪ್ರಮುಖರಾದ ಸಂತೋಷ್ ಬಳ್ಳೆಕೆರೆ, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ಅಧಿಕಾರಿಗಳು ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







