ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಜುಲೈ 3ನೇ ವಾರ ಕಳೆದರೂ ಮಳೆಯಾಗದ ಕಾರಣ ಜನರ ಜೀವನ ದುಸ್ತರವಾಗಿದೆ. ಆದ್ದರಿಂದ ಇಡೀ ರಾಜ್ಯವನ್ನು ಬರಗಾಲ ಪೀಡಿತ ರಾಜ್ಯವೆಂದು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಬರಗಾಲ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹಿಂಗಾರು ಮಳೆಯಾದರೆ ಪುನಃ ಬಿತ್ತನೆ ಮಾಡಲು ಉಚಿತವಾಗಿ ಬೀಜ, ರಸಗೊಬ್ಬರ ಕೊಡುವ ವ್ಯವಸ್ಥೆಯಾಗಬೇಕು. ಬರಗಾಲ ಪರಿಹಾರಕ್ಕಾಗಿ ರಾಜ್ಯದಲ್ಲಿರುವ ಏತ ನೀರಾವರಿಗಳ ವಿದ್ಯುತ್ಬಿಲ್ ಕಟ್ಟದೇ ನಿಲ್ಲಿಸಿರುವ ಯೋಜನೆಗಳನ್ನು ವಿದ್ಯುತ್ ಬಿಲ್ ಪಾವತಿಮಾಡಿ ತಕ್ಷಣದಿಂದ ಏತ ನೀರಾವರಿಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಬಿಡದಿ ಮಲೆನಾಡಿನ ರೈತರ ಪಾಲಿನ ಸ್ವರ್ಗ ಭೂಮಿಯಾಗಿದೆ. ಆದರೆ ಇಲ್ಲಿ ಟೌನ್ಶಿಪ್ ನಿರ್ಮಿಸುವುದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕನಸಿನ ಕೂಸು ಎನ್ನಲಾಗುತ್ತಿದೆ. ರೈತರಿಗೆ ಆಮಿಷವೊಡ್ಡಿ ರೈತರ ಬದುಕಿನ ಮೇಲೆ, ಅವರ ಹೊಟ್ಟೆಯ ಮೇಲೆ ಹೊಡೆದು ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದ ಅವರು, ರೈತರ ಮಧ್ಯೆ ಒಡಕು ತಂದು ಭೂಮಿ ಕಸಿದುಕೊಳ್ಳುವುದು ಸರಿಯಲ್ಲ, ಇದು ಆ ಭಾಗದಲ್ಲಿರುವ ಸಣ್ಣ, ಅತೀಸಣ್ಣ ರೈತರ ಹೊಟ್ಟೆಪಾಡಿನ ಪ್ರಶ್ನೆಯಾಗಿದೆ. ಕುಮಾರಸ್ವಾಮಿಯವರು ಮಾಡಿದ ತಪ್ಪನ್ನು ನೀವು ಮಾಡಬೇಡಿ. ಆದ ತಪ್ಪನ್ನು ಸರಿಪಡಿಸಿಕೊಂಡು ರೈತರ ವಿಶ್ವಾಸಗಳಿಸುವತ್ತ ಗಮನಕೊಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದರು.
Also read: Bantwala Bus Stand | ಯುವತಿ ಬರ್ಬರ ಹತ್ಯೆ; ಆರೋಪಿ ಬಂಧನ
21-07-1980ರಂದು ನಡೆದ ಬಂಡಾಯದ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟು ಮತ್ತು ಗುಂಡು ಹಾರಿಸಿದ್ದರ ಪರಿಣಾಮ ನವಲಗುಂದ ತಾಲ್ಲೂಕು ಅಳಗವಾಡಿ ಗ್ರಾಮದ ರೈತ ಬಸಪ್ಪ ಶಿವಪ್ಪ ಲಕ್ಕುಂಡಿ, ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದ ವೀರಪ್ಪ ಕಡ್ಲಿಕೊಪ್ಪ ಗುಂಡು ತಗುಲಿ ಅಸುನೀಗಿದ್ದರು. ಈ ಹಿನ್ನಲೆಯಲ್ಲಿ ಜುಲೈ 21ರಂದು 46ನೇ ವರ್ಷದ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಅಳಗವಾಡಿಯಲ್ಲಿ ಅಸುನೀಗಿದ ಹುತಾತ್ಮ ರೈತರ ಸ್ಮಾರಕ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ರೈತರು, ರೈತ ಮಹಿಳೆಯರು, ಕೃಷಿ-ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.
ಅಳಗವಾಡಿಯಲ್ಲಿ ನಡೆಯುವ ಸಭೆಯಲ್ಲಿ ಕಳಸಾ-ಬಂಡೂರಿ ಮಹಾದಾಯಿ ಯೋಜನೆ ತಕ್ಷಣವೇ ಜಾರಿಯಾಗಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬಗರ್ಹುಕುಂ ಸಾಗುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು, ಅವರಿಗೆ ನೋಟೀಸ್ ಕೊಟ್ಟು ದಾಖಲೆಗಳನ್ನು ರದ್ದುಗೊಳಿಸಬಾರದು. 2025-26ನೇ ಸಾಲಿನ ಬಾಕಿ ಬೆಳೆವಿಮೆ ಪರಿಹಾರವನ್ನು ತಕ್ಷಣವೇ ಬಿಡುಗಡೆಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಈ ಸಂದರ್ಭದಲ್ಲಿ ಒತ್ತಾಯಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಭಾಗ್ಯರಾಘವೇಂದ್ರ, ಕಸಟ್ಟೆ ರುದ್ರೇಶ, ಎಂ.ಡಿ.ನಾಗರಾಜು, ಸಿ.ಚಂದ್ರಪ್ಪ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








