ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತಕುಮಾರ್ ಇಂದು ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದು, ಇವರ ಸಾರ್ವಜನಿಕ ಕಾರ್ಯಗಳು ಶಾಶ್ವತವಾಗಿ ಉಳಿದಿವೆ.
ಮಧ್ಯಮ ವರ್ಗದ ಕುಟುಂಬದಲ್ಲಿ 22ನೆಯ ಜುಲೈ 1959 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅನಂತಕುಮಾರ ತಂದೆಯವರ ನಾರಾಯಣ ಶಾಸ್ತ್ರಿ ಮತ್ತು ತಾಯಿಗಿರಿಜ ಎನ್ ಶಾಸ್ತ್ರಿ. ತೇಜಸ್ವಿನಿ ಅವರೊಂದಿಗೆ ವಿವಾಹವಾಗಿದ್ದ ಅನಂತ ಕುಮಾರ್ ಅವರಿಗೆ ಐಶ್ವರ್ಯ ಮತ್ತು ಕುಮಾರಿ ವಿಜೇತ ಎಂಬ ಎರಡು ಮಕ್ಕಳಿದ್ದಾರೆ.
ಅನಂತಕುಮಾರ್ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಹುಬ್ಬಳ್ಳಿಯ ಕೆ ಎಸ್ ಆರ್ಟ್ಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಧವೀಧರರಾಗಿ, ನಂತರ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ ಜೆ.ಎಸ್.ಎಸ್. ಲಾ ಕಾಲೇಜಿನಲ್ಲಿ ಕಾನೂನು ಪದವೀಧರರಾದರು.
ರಾಷ್ಟ್ರೀಯತೆಯ ನಂಬಿಕೆಯಿಂದ ಆಕರ್ಷಿತರಾಗಿ ಮತ್ತು ತಾಯ್ನಾಡಿನ ಪ್ರೇಮದಿಂದ ಸಾಮಾಜಿಕ ಜೀವನಕ್ಕೆ ಕಾಲಿಟ್ಟು ಜನಸೇವೆಯನ್ನು ಮಾಡಲು ಹಂಬಲಿಸುತ್ತಿದ್ದಾಗ ಅವರು ಅದನ್ನು ನನಸಾಗಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ್ನು ಆರಿಸಿಕೊಂಡರು. ಎಬಿವಿಪಿ ಯಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಅವರು ಮುಂದೆ ಕರ್ನಾಟಕದ ಅತ್ಯಂತ ಪ್ರಭಾವೀ ವಿದ್ಯಾರ್ಥಿ ನಾಯಕರೂ ಆಗಿದ್ದರು.
ಆಗಿನ ಇಂದಿರಾ ಗಾಂಧಿಯವರ ಸರ್ಕಾರ ಭಾರತದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರ ವಿರುದ್ಧ ಹೋರಾಡಿದ ಅನಂತಕುಮಾರರು ಜೈಲುವಾಸವನ್ನೂ ಅನುಭವಿಸಬೇಕಾಯಿತು.
ತಮ್ಮ ಸಂಘಟನಾ ಕೌಶಲ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಅನಂತಕುಮಾರ್ ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ ಮತ್ತು 1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾವ್ದಾರಿಯನ್ನು ನಿರ್ವಹಿಸಿದ್ದಾರೆ. 1987ರಲ್ಲಿ ರಾಜಕಾರಣದ ಉನ್ನತ ಹಂತಕ್ಕೇರಲು ನಿರ್ಧರಿಸಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು.
ಕರ್ನಾಟಕದ ಭಾರತೀಯ ಜನತಾ ಯುವ ಮೋರ್ಚದ ಅಧ್ಯಕ್ಷರಾಗಿ ಅವರದ್ದು ಮೊದಲ ಜವಾಬ್ದಾರಿಯಾಗಿತ್ತು. 1995 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು. 1996 ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿಯೂ ಆಯ್ಕೆಯಾದರು. ಆ ಸಂದರ್ಭದಲ್ಲಿ ರೈಲ್ವೆ ಮತ್ತು ಕೈಗಾರಿಕೆ ಸಚಿವಾಲಯಗಳ ವಿವಿಧ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು.
1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ವಿಮಾನಯಾನ ಖಾತೆಯ ಸಚಿವರಾಗಿ ಈಗಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರಕಾರದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಈ ಒಡಂಬಡಿಕೆಯ ಕಾರಣದಿಂದಾಗಿಯೇ ವಿಮಾನ ನಿಲ್ದಾಣದ ಯೋಜನೆ ಅಸ್ತಿತ್ವಕ್ಕೆ ಬಂದಿತು.
1999 ರಲ್ಲಿ ಎನ್ ಡಿ ಎ ಸರಕಾರದ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ಖಾತೆಗಳಾದ, ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ವ್ಯವಹಾರಗಳು, ಸಂಸ್ಕೃತಿ ಮತ್ತು ನಗರಾಭಿವೃದ್ಧಿ ಹಾಗೂ ಬಡತನ ನಿರ್ಮೂಲನ ಮುಂತಾದ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ರಾಷ್ಟ್ರೀಯತೆಯಲ್ಲಿ ನಂಬಿಕೆಯೆಂದರೆ ಸ್ವಸಂಸ್ಕೃತಿಯ ಬಗೆಗಿನ ಗೌರವವೂ ಹೌದು ಎಂಬುದನ್ನು ಪ್ರಕಟಿಸಿದ ಅನಂತಕುಮಾರ್ ವಿಶ್ವ ಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಪ್ರಥಮ ಕನ್ನಡಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
LinkedIn shares Bengaluru’s Top Companies for career growth in 2026
Kalpa Media House | India | LinkedIn, the world's largest professional network, today unveiled its 2026 Top Companies list for...
Read moreDetails














