ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಟುಂಬದವರು ಮನೆಯೊಳಗೆ ಮಲಗಿದ್ದಾಗಲೇ ಕಳ್ಳರು ಮನೆಗೆ ನುಗ್ಗಲು ಯತ್ನಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಲಿಂಗಾಪುರ ಗ್ರಾಮದ ಸೌತೆಮಕ್ಕಿಯಲ್ಲಿ ನಡೆದಿದೆ.
ರೈತ ರಾಮದಾಸ್ ಕೆ.ಪಿ. ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ರಾಮದಾಸ್, ಅವರ ಪತ್ನಿ ಹಾಗೂ ಸಂಬಂಧಿ ಮುಕುಂದ ಅವರು ರಾತ್ರಿ ಊಟ ಮುಗಿಸಿ ಮನೆಯೊಳಗೆ ಮಲಗಿದ್ದರು.
ತಡರಾತ್ರಿ ಬಂದ ಕಳ್ಳರು ಮೊದಲು ಮನೆಯ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಒಡೆದು ಹಾಕಿದ್ದಾರೆ. ನಂತರ ಮನೆಯ ಹಿಂಬಾಗಿಲಿನ ಚಿಲಕ ಹಾಕಿ, ಮುಂಭಾಗದ ಬಾಗಿಲನ್ನು ಆಯುಧದಿಂದ ಮುರಿಯಲು ಯತ್ನಿಸಿದ್ದಾರೆ ಎನ್ನಲಾಗಿದೆ.
Also read: ಸುಷ್ಮಾ ವೀರ್ ಸಾರಥ್ಯದಲ್ಲಿ “ವೀರ ರಂಗ ಸಂಭ್ರಮ K5” | ಕಂಬಾರರ ಗೀತೆಗೆ ಹೊಸ ಜೀವ
ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಬಾಗಿಲು ಜಖಂಗೊಂಡಿರುವುದು ಹಾಗೂ ಸಿಸಿಟಿವಿ ಕ್ಯಾಮೆರಾ ಹಾನಿಗೊಂಡಿರುವುದು ಬೆಳಕಿಗೆ ಬಂದಿದೆ. ಬಾಗಿಲು ಮುರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳ್ಳತನ ಯತ್ನ ವಿಫಲವಾಗಿದೆ.
ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















