ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಹೆಸರಾಂತ ಭರತನಾಟ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಮಲ್ಲತ್ತಳ್ಳಿಯ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ 2025ರ ನೃತ್ಯ ನೀರಾಜನ ಕಿರಿಯರ ನೃತ್ಯ ಉತ್ಸವ-2 ಅತ್ಯಂತ ಯಶಸ್ವಿಯಾಗಿ ನಡೆಯಿತು.
ನೃತ್ಯ ಗುರು ಡಾ. ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ದರ್ಶಿನಿ ಮಂಜುನಾಥ್ ರವರ ಶಿಷ್ಯೆಯರಾದ ಕು.ಅಮೂಲ್ಯ, ಕು. ಧರಣಿ, ಕು. ಮೌಲ್ಯ ಮತ್ತು ಕು. ಶ್ರೀನಿಧಿ ಭರತನಾಟ್ಯ ಕಾರ್ಯಕ್ರಮ ನೀಡಿ ಪ್ರಸಂಶೆಗೆ ಪಾತ್ರರಾದರು.
ವಿದುಷಿ ಭಾರತಿ ವೇಣುಗೋಪಾಲರವರ ರಚನೆಯ ಹಂಸಧ್ವನಿ ರಾಗದ ಪುಷ್ಪಾಂಜಲಿ ಇಂದ ಕಾರ್ಯಕ್ರಮ ಪ್ರಾರಂಭವಾಯಿತು. ಇದರೊಂದಿಗೆ ಆದಿ ಶಂಕರಾಚಾರ್ಯರ ವಿರಚಿತ ನಿರ್ಮಾಣ ಶತಕದ ಅಜಂ ನಿರ್ವಿಕಲ್ಪಂ ಶ್ಲೋಕಕ್ಕೆ ಕಲಾವಿದೆಯರು ನರ್ತಿಸಿದರು.
ಮುಂದೆ ಸಾಂಪ್ರದಾಯಿಕ ಚತುರಶ್ರ ಅಲರಿಪು, ಕಲ್ಯಾಣಿ ಜತಿಸ್ವರ ನರ್ತಿಸಿದರು. ಏಕವ್ಯಕ್ತಿ ಪ್ರದರ್ಶನದಲ್ಲಿ ಕು. ಧರಿಣಿ- ವಂದಿಸುವುದಾದಿಯಲಿ ಗಣನಾಥನ ದೇವರನಾಮದಲ್ಲಿ ಆತ್ಮಲಿಂಗ ಕಥಾ ಪ್ರಸಂಗ ನರ್ತಿಸಿದಳು. ಕು. ಮೌಲ್ಯ- ಹರಿನಾರಾಯಣ ದೇವರನಾಮದಲ್ಲಿ ಮನೋಹರವಾಗಿ ನಾರಸಿಂಹ ಅವತಾರ ಪ್ರದರ್ಶಿಸಿದಳು. ಕು.ಶ್ರೀನಿಧಿ- ಮುತ್ತಯ್ಯ ಭಾಗವತರ ವಿರಚಿತ ಸಾರಸಮುಖಿಯಲ್ಲಿ ಚಾಮುಂಡೇಶ್ವರಿಯನ್ನು ಅದ್ಬುತವಾಗಿ ತೋರಿದಳು. ಕು. ಅಮೂಲ್ಯ-ಕೃಷ್ಣ ಬಾರೋ ರಂಗ ಬಾರೋ ಎಂಬ ದೇವರನಾಮದಲ್ಲಿ ಕೃಷ್ಣನ ತುಂಟಾಟಕ್ಕೆ ತಾಯಿ ವಾತ್ಸಲ್ಯವನ್ನು ಸುಂದರವಾಗಿ ನರ್ತಿಸಿದರು.
ರಾಜ್ಯೋತ್ಸವದ ಸಂಭ್ರಮವನ್ನು ನಾಲ್ಕು ಕಲಾವಿದರು ಕರ್ನಾಟಕದ ಮೊದಲನೆಯ ಆಧುನಿಕ ಕರ್ನಾಟಕ ನಾಟಕ ಪಿತಾಮಹ ಎಂದು ಕರೆಸಿಕೊಳ್ಳುವ ಶಾಂತ ಕವಿ ವಿರಚಿತ ರಕ್ಷಿಸು ಕರ್ನಾಟಕ ದೇವಿ ಮನೋಹರವಾಗಿ ನರ್ತಿಸಿದರು.
ಕೊನೆಯಲ್ಲಿ ಬೃಂದಾವನಿ ತಿಲ್ಲಾನ ಹಾಗೂ ಪಂಚಭೂತಗಳನ್ನು ವಂದಿಸುವ ಭೂಮಿ ಮಂಗಳಂದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಳಿಸಿ ನೆರೆದಿದ್ದ ನೂರಾರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಗುರು. ಡಾ. ದರ್ಶಿನಿ ಮಂಜುನಾಥ್ ಅವರು ಎಲ್ಲಾ ನೃತ್ಯ ಸಂಯೋಜನೆಗೆ ಮೆಚ್ಚುಗೆ ವ್ಯಕ್ತವಾಯಿತು. ಒಟ್ಟಿನಲ್ಲಿ ನೃತ್ಯ ನೀರಾಜನ ಯಶಸ್ವಿ ಪ್ರದರ್ಶನ ಕಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















