ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಗರ ಹೊರವಲಯದ ಹೆಸರಘಟ್ಟದ ಸಸ್ಯಕಾಶಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ- ಐಐಎಚ್ಆರ್ನಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳ ಜನಸಾಗರದ ನಡುವೆ ತೆರೆಕಂಡಿತು.
ಐದು ದಿನಗಳ ಮೇಳದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ಲಕ್ಷಕ್ಕೂ ಅಧಿಕ ರೈತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಾರ್ವಜನಿಕರೂ ಸಹ ಭೇಟಿ ಕೊಟ್ಟು ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮೇಳಕ್ಕೆ ಬಂದವರ ಪೈಕಿ, ಕೃಷಿಯಲ್ಲಿ ಆಸಕ್ತಿ ಉಳ್ಳವರು, ತಮ್ಮ ಮಕ್ಕಳನ್ನು ಕೂಡ ಮೇಳದಲ್ಲಿ ಪಾಲ್ಗೊಳಿಸಿ, ಬೆಳೆಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದ್ದು ವಿಶೇಷ. ಈ ಬಾರಿ ಮೇಳಕ್ಕೆ ಸ್ಥಳೀಯ ರೈತರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತಾದರೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು, ಯುವ ಕೃಷಿ ಉದ್ದಿಮೆಗಳು ಆಗಮಿಸಿದ್ದರು.
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ರೈತರು ಮೇಳಕ್ಕೆ ಭೇಟಿ ಕೊಟ್ಟಿದ್ದರು. ದೂರದ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದಲೂ ಜನರು ಬಂದಿದ್ದರು.
ಬಿಹಾರದಿಂದಲೂ ರೈತ ಕೂಟ ಭೇಟಿ
ಈ ಬಾರಿ ಮೇಳ ವೀಕ್ಷಣೆಗೆ ಬಿಹಾರದಿಂದಲೂ ರೈತರು ಆಗಮಿಸಿದ್ದರು. ಪಾಟ್ನಾ ಸಮೀಪದ ಹಳ್ಳಿಯೊಂದರ ರೈತ ಓಂಪ್ರಕಾಶ್ ಚೌತಾಲ ಮತ್ತು ಅವರ ಆಪ್ತಕೂಟ, ಈ ಮೇಳಕ್ಕೆ ಭೇಟಿ ಕೊಟ್ಟು ಮೇಳದ ಆಯೋಜನೆ ಕಂಡು ಖುಷಿಪಟ್ಟರು. ಹಾಗೂ ಐಐಎಚ್ಆರ್ ತಳಿಗಳ ಬಗ್ಗೆ ಮಾಹಿತಿ ಪಡೆದರು.
ಲಕ್ಷ ಗಡಿದಾಟಿದ ನೋಂದಣಿ
ದೇಶದ ಎಲ್ಲೆಡೆಯಿಂದ ರೈತರು, ತೋಟಗಾರಿಕೆ ಮೇಳಕ್ಕೆ ಆಗಮಿಸಿದ್ದು. ಸೋಮವಾರದಿಂದ ಶುಕ್ರವಾರದವರೆಗೆ 85 ಸಾವಿರಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡು ಮೇಳವನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಆನ್ಲೈನ್ ಮತ್ತು ಅಪ್ಲೈನ್ ನೋಂದಣಿ 15.5 ಲಕ್ಷ ದಾಖಲಾಗಿದೆ.
ಈ ಬಾರಿ ಮೇಳದ ಪ್ರತ್ಯಕ್ಷ ವೀಕ್ಷಣೆಗೆ ರಾಜ್ಯದ ರೈತರಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿತ್ತು. ಮೇಳದ ಕೊನೆಯ ದಿನ ನೋಂದಣಿ ಬಿರುಸುಗೊಂಡಿತು. ಸಂಜೆಯವರೆಗೆ ಜನರು ಬರುತ್ತಲೇ ಇದ್ದರು. ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು, ಯುವ ಕೃಷಿ ಉದ್ದಿಮೆಗಳು ಆಗಮಿಸಿದ್ದರು ಎಂದು ಐಐಎಚ್ಆರ್ ಪ್ರಧಾನ ವಿಜ್ಞಾನಿ ಹಾಗೂ ಮೇಳದ ನೋಂದಣಿ ಸಮಿತಿ ಮುಖ್ಯಸ್ಥ ಡಾ. ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು.
ರೈತರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ
ಮೇಳದ ಆರಂಭದ ಮುನ್ನ ದಿನ ಫೆ.7ರಿಂದಲೇ ಹೊರ ಜಿಲ್ಲೆಗಳು ಮತು ರಾಜ್ಯಗಳಿಂದ ಮೇಳಕ್ಕೆ ಬರುವಂತವರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ಪ್ರಗತಿಪರ ರೈತರು, ಕೃಷಿ ಆಸಕ್ತರು, ವಿಜ್ಞಾನಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ, ಮೇಳದ ಮಳಿಗೆಗಳ ಮಾಲೀಕರು ಮತ್ತು ಸಹಾಯಕರಿಗೆ ತಂಗುವ ವ್ಯವಸ್ಥೆ ಮಾಡಲಾಗಿತ್ತು.
ಹೆಸರಘಟ್ಟದ ಟಿ.ಬಿ. ಕ್ರಾಸ್ನಲ್ಲಿ ಮೂರು ಕಲ್ಯಾಣ ಮಂಟಪಗಳು, ಐಐಎಚ್ಆರ್ ಹಾಸ್ಟೆಲ್, ಐಐಸಿಆರ್ ಗೆಸ್ಟ್ಹೌಸ್, ಜಿಕೆವಿಕೆಯ ಸುವರ್ಣ ಭವನ, ರೈತ ತರಬೇತಿ ಕೇಂದ್ರದಲ್ಲಿ ವಸತಿಗೆ ಅನುವು ಮಾಡಿಕೊಡಲಾಗಿತ್ತು.
ಗುಜರಾತ್, ಒಡಿಶಾ, ಪುದುಚೇರಿ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಬಂದು ರೈತರು ವಾಸ್ತವ್ಯ ಹೂಡಿದ್ದರು. ಪ್ರತಿದಿನ 400ರಿಂದ 500 ಜನರ ವಾಸ್ತವ್ಯಕ್ಕೆ ನೆರವಾಗಲಾಗಿತ್ತು. ಐದಾರು ದಿನಗಳಿಂದ ಸರಿಸುಮಾರು ಮೂರರಿಂದ ಮೂರುವರೆ ಸಾವಿರ ಮಂದಿಗೆ ವಸತಿ ಸೌಕರ್ಯ ಕಲ್ಪಿಸಿದ್ದು ವಿಶೇಷ ಎಂದು ಐಐಎಚ್ಆರ್ ಪ್ರಧಾನ ವಿಜ್ಞಾನಿ ಹಾಗೂ ಮೇಳದ ವಸತಿ ಸಮಿತಿ ಮುಖ್ಯಸ್ಥ ಡಾ. ಟಿ.ಎಂ. ಗಜಾನನ ಹೇಳಿದರು.
ನೂಕುನುಗ್ಗಲಿಲ್ಲದೆ ಸವಿ ಸವಿ ರುಚಿ…
ಐದು ದಿನಗಳ ಈ ಮೇಳದಲ್ಲಿ ಎಂದೂ ಕೂಡ ಊಟೋಪಚಾರಕ್ಕೆ ಜನರ ನೂಕು ನುಗ್ಗಲು ಕಾಣಬರಲಿಲ್ಲ. ಊಟ, ತಿಂಡಿ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಐಐಎಚ್ಆರ್ ವತಿಯಿಂದ ಮಾಡಿಸಲಾಗಿತ್ತು. ಅತ್ಯಂತ ಕಡಿಮೆ ಬೆಲೆಗೆ ಪ್ರತಿದಿನವೂ ತುಂಬಾ ಸ್ವಾದೀಷ್ಟಕರ ತಿಂಡಿ ಮತ್ತು ಊಟ ನೀಡಲಾಯಿತು.
ಪ್ರತಿದಿನ ಬೆಳಿಗ್ಗೆ ಒಂದೂವರೆ ಸಾವಿರ ಜನರಿಗೆ ತಿಂಡಿ, 7ರಿಂದ 8 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ತಿಂಡಿಗೆ ಬಿಸಿಬೇಳೆಬಾತ್, ಟೊಮೊಟೊ ಬಾತ್, ತರಕಾರಿ ಪಲಾವು, ಗೀ ರೈಸ್, ಮೆಂತ್ಯಾ ಬಾತ್ ಹೀಗೆ ಬಗೆ ಬಗೆಯ ತಿಂಡಿಗಳನ್ನು ನೀಡಲಾಗುತ್ತಿತ್ತು. ಐದು ದಿನವೂ ಖಾಯಂ ಆಗಿ ಮೊಸರನ್ನ ಬಡಿಸಲಾಯಿತು. ಕಳೆದ ಬಾರಿ ತುಂಬಾ ನೂಕುನುಗ್ಗಲು ಇತ್ತು. ಆದರೆ, ಈ ಬಾರಿ ಎಲ್ಲೂ ಆ ದೃಶ್ಯಗಳು ಕಾಣಬರಲಿಲ್ಲ.
ಬೆಳಗ್ಗೆ 11.30ರಿಂದ ಊಟ ಶುರುವಾದರೆ ಸಂಜೆ 5.30ರ ತನಕವೂ ನಡೆಯುತ್ತಿತ್ತು. 10 ಕೌಂಟರ್ಗಳಿದ್ದವು. ಪ್ಲಾಸ್ಟಿಕ್ ಮುಕ್ತವಾಗಿದ್ದು, ತಿಂಡಿ ತಿನಿಸುಗಳನ್ನು ಸೇವಿಸಲು ಅಡಿಕೆ ಹಾಳೆ ಮತ್ತು ಸ್ಟೀಲ್ ಚಮಚಗಳ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 100ರಿಂದ 150 ಜನ ಬಾಣಸಿಗರು, ಊಟೋಪಚಾರಕ್ಕೆ ಅನುವಾಗಿದ್ದರು. ಮೇಳದ ಹತ್ತಾರು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಐಐಎಚ್ಆರ್ ಪ್ರಧಾನ ವಿಜ್ಞಾನಿ ಮತ್ತು ಊಟೋಪಚಾರ ಸಮಿತಿ ಮುಖ್ಯಸ್ಥೆ ಡಾ. ಟಿ.ಆರ್. ರೂಪ ತಿಳಿಸಿದರು.
ಅದ್ಭುತ ಹಲಸಿಗೆ ಮುಗಿಬಿದ್ದ ಜನ
ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಳಿಗೆಗಳಲ್ಲಿ ಜನ ತುಂಬಿ ತುಳುಕಿತ್ತು. ಒಂದೂವರೆ ವರ್ಷದಲ್ಲಿ ಫಲಕೊಡುವ ಅಧ್ಬುತ ಹಲಸು ಮಳಿಗೆಗೆ ಹೆಚ್ಚಿನ ಆಸಕ್ತರು ಮುಗಿಬಿದ್ದರು. ಶುಕ್ರವಾರ ಒಂದೇ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಲಸಿನ ಸಸಿಗಳು ಮಾರಾಟವಾಗಿವೆ. ಐದು ದಿನಗಳಲ್ಲಿ 7 ಸಾವಿರ ಗಿಡಗಳನ್ನು ಖರೀದಿ ಮಾಡಲಾಗಿದೆ. ಪುತ್ತೂರು ಮತ್ತು ತೈಲಾಂಡಿನ ಹಲಸಿನ ಸಸಿಗಳಿಗೆ ತುಂಬಾ ಬೇಡಿಕೆಯಿದೆ ಎಂದು ಮಳಿಗೆಯ ಮಾಲೀಕ ಜಾಕ್ ಅನಿಲ್ ಪುತ್ತೂರು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post