ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉದ್ಯಾನ ನಗರಿಯ ಉಡುಪ ಪ್ರತಿಷ್ಠಾನ ಫೆ. 16, 17 ಮತ್ತು 18ರಂದು ಉಡುಪ ಸಂಗೀತೋತ್ಸವ 5ನೇ ಆವೃತ್ತಿಯನ್ನು ಆಯೋಜಿಸಿದೆ.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಮೂರುದಿನಗಳ ಕಾಲ ನಿತ್ಯ ಸಂಜೆ 7ಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಉತ್ಸವ ಸಂಪನ್ನಗೊಳ್ಳಲಿದ್ದು, ಕಲಾ ರಸಿಕರಿಗೆ ಗಾಯನ- ವಾದನ ರಸದೌತಣ ಲಭಿಸಲಿದೆ.
16ರ ಸಂಜೆ 7ಕ್ಕೆ ವಿಶ್ವ ವಿಖ್ಯಾತ ಪಂಡಿತ್ ಉಸ್ತಾದ್ ಝಾಕೀರ್ ಹುಸೇನ್ ತಬಲ ಮತ್ತು ಪಂಡಿತ್ ನೀಲಾದ್ರಿ ಕುಮಾರ್ ಸಿತಾರ್ ವಾದನ ಜುಗಲ್ ಬಂದಿ ಕಳೆಗಟ್ಟಲಿದೆ. 17ರ ಸಂಜೆ 6ಕ್ಕೆ ಸ್ತ್ರೀ ತಾಳ ತರಂಗದ ‘ಲಯ ರಾಗ ಸಮರ್ಪಣಂ’ ನೆರವೇರಲಿದೆ. ವಿದುಷಿ ಸುಕನ್ಯಾ ರಾಮಗೋಪಾಲ್ ಘಟ ತರಂಗ್, ವಿದುಷಿಯರಾದ ವೈ.ಜಿ. ಶ್ರೀಲತಾ ವೀಣೆ, ಜಿ. ಲಕ್ಷ್ಮೀ ಮೃದಂಗ, ಭಾಗ್ಯಲಕ್ಷ್ಮಿ ಎಂ. ಕೃಷ್ಣ ಅವರು ಮೋಚಿರ್ಂಗ್ ವಾದನ ವೈಭವ ನೀಡಲಿದ್ದಾರೆ.
Also read: ರೈತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ: ದೆಹಲಿ ಗಡಿಭಾಗದಲ್ಲಿ ಕಟ್ಟೆಚ್ಚರ | 144 ಸೆಕ್ಷನ್ ಜಾರಿ
ಸಂಜೆ 7ಕ್ಕೆ ಪ್ರಖ್ಯಾತ ವಿದ್ವಾಂಸ ಟಿ. ಎಂ. ಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ. ಪಕ್ಕವಾದ್ಯದಲ್ಲಿ ವಿದ್ವಾನ್ ಎಚ್.ಕೆ. ವೆಂಕಟರಾಮ್ ಪಿಟೀಲು, ಉಮಯಾಳ್ಪರಂ ಕೆ. ಶಿವರಾಮನ್ ಅವರು ಮೃದಂಗ, ಕಾರ್ತಿಕ್ ಘಟಂ ಸಹಕಾರ ನೀಡಲಿದ್ದಾರೆ.
18ರ ಸಂಜೆ 7ಕ್ಕೆ ವಿದುಷಿ ಅರುಣಾ ಸಾಯಿರಾಂ ಗಾಯನವಿದೆ. ತ್ರಿಲೋಕ್ ಗುರ್ತು ಅವರು ಡ್ರಮ್ಸ್, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲು, ಮಹೇಶ ಕಾಳೆ ಗಾಯನ, ಕೀತ್ ಪೀಟರ್ಸ್ ಬಾಸ್ ಗಿಟಾರ್, ಮಿಗಿಲ್ ಚೌಹಾಸ್ಕಿ ಫ್ಲಮೆಂಕೋ ಗಿಟಾರ್, ಅರುಣ್ ಕುಮಾರ್: ಡ್ರಮ್ಸ್, ಪ್ರಮಥ ಕಿರಣ್ ಪರ್ಕ್ಯೂಶನ್ಸ್ ಮತ್ತು ಸಂಗೀತ್ ಹಳದೀಪುರ ಅವರು ಕೀಬೋರ್ಡ್ ನುಡಿಸಿ ರಂಜಿಸಲಿದ್ದಾರೆ ಎಂದು ಉತ್ಸವದ ಆಯೋಜಕ ಮತ್ತು ಪ್ರಖ್ಯಾತ ಘಟ ವಿದ್ವಾಂಸ ಗಿರಿಧರ ಉಡುಪ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post