ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ನೌಕರರು ಸರ್ಕಾರದ ಮುಂದಿಟ್ಟಿದ ಬೇಡಿಕೆಗಳು ಜಾರಿಯಾಗದ ಹಿನ್ನೆಲೆ ಹಾಗೂ ಆರನೆಯ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ನಾಳೆಯಿಂದ ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಓಡಾಟ ಅನಿರ್ದಿಷ್ಟಾವಧಿಗೆ ಸ್ತಬ್ಧವಾಗಿರಲಿದ್ದು, ಇಂದು ರಾತ್ರಿಯಿಂದಲೇ ಮುಷ್ಕರ ಆರಂಭ ಆಗುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ತಬ್ಧ ಆಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ಡಿಸೆಂಬರ್ನಲ್ಲಿ ಮುಷ್ಕರ ಕೈಗೊಂಡಿದ್ದ ವೇಳೆ ನೀಡಿದ್ದ ಕೆಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಇನ್ನೂ ಜಾರಿಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ನಾಳೆಯಿಂದ ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ವೇತನ ಪರಿಷ್ಕರಣೆಗೆ ಉಪ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ಬಸ್ ಓಡಾಟಕ್ಕೆ ಅನುಮತಿ:
ಬಿಎಂಟಿಸಿ, ಕೆಎಸ್ಆರ್ಟಿಸಿ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ರೂಟ್ನಲ್ಲಿ ಖಾಸಗಿ ಬಸ್ಗಳ ಓಡಾಟಕ್ಕೆ ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು, ಬಿಎಂಟಿಸಿ, ಕೆಎಸ್ಆರ್ಟಿಸಿ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ರೂಟ್ಗಳಲ್ಲಿ ಖಾಸಗಿ ಬಸ್, ಮಿನಿಬಸ್, ಟ್ಯಾಕ್ಸಿ, ಕ್ಯಾಬ್ಗಳನ್ನು ಓಡಿಸಲು ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಖಾಸಗಿ ವಾಹನಗಳ ಮಾಲೀಕರ ಸಂಘಟನೆಯೊಂದಿಗೆ ಈಗಾಗಲೇ ಸಾರಿಗೆ ಆಯುಕ್ತರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಅನುಪಯುಕ್ತ ವಾಹನಗಳಿಗೆ 2 ತಿಂಗಳ ಅನುಮತಿ ನೀಡಬೇಕು, ವಾಹನ ವಿಮೆ ನೀಡಬೇಕು ಮತ್ತು ಎಲ್ಲಾ ವಾಹನಗಳಿಗೆ ತೆರಿಗೆ ವಿನಾಯಿತಿಗೆ ಸಂಘ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿದೆ ಎಂದು ಕರ್ನಾಟಕ ಖಾಸಗಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ ಹೇಳಿದ್ದಾರೆ.
ಹೀಗಾಗಿ ನಾಳೆಯಿಂದ ಸರ್ಕಾರಿ ರೂಟ್ನಲ್ಲಿ 1,10,000 ಮ್ಯಾಕ್ಸಿ ಕ್ಯಾಬ್ಗಳು, 2,25,000 ಕಾರುಗಳು, 35 ಸಾವಿರ ಶಾಲಾ ವಾಹನಗಳು ಸಂಚರಿಸಲಿದ್ದು, ನಮ್ಮ ಬೇಡಿಕೆ ಈಡೇರಿಸುವ ಸರ್ಕಾರಕ್ಕೆ ನಾವು ಸಹಕರಿಸುತ್ತೇವೆ ಎಂದು ಖಾಸಗಿ ವಾಹನಗಳ ಮಾಲೀಕರು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post