ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ವಿಧಿವಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ ಬೆನ್ನಲ್ಲೇ ವಿಜಯ್ ಮೃತಪಟ್ಟಿಲ್ಲ. ಇನ್ನೂ ಚಿಕಿತ್ಸೆ ಮುಂದುವರೆದಿದೆ ಎಂದು ಅಪೋಲೊ ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿದ್ದಾರೆ.
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಂಚಾರಿ ವಿಜಯ್ ಅವರಿಗೆ ಸಂತಾಪ ಸೂಚಿಸಿ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಕುಟುಂಬಕ್ಕೆ ದೊರೆಯಲಿ ಎಂದಿದ್ದರು. ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಆಸ್ಪತ್ರೆ ವೈದ್ಯರು ವಿಜಯ್ ಅವರ ಮೆದುಳು ನಿಷ್ಕ್ರೀಯಗೊಂಡಿರುವುದು ನಿಜ. ಅವರು ಮೃತಪಟ್ಟಿರುವುದನ್ನು ನಾವು ಅಧಿಕೃತವಾಗಿ ಘೋಷಿಸಿಲ್ಲ. ಅವರಿಗೆ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಅಲ್ಲದೆ, ದೇಹದ ಇತರ ಅಂಗಗಳು ಕಾರ್ಯನಿರ್ವಹಿಸುತ್ತಿವೆ. ಮೆದುಳು ನಿಷ್ಕ್ರಿಯ ಎಂದ ಮಾತ್ರಕ್ಕೆ ಸಾವು ಸಂಭವಿಸಿದೆ ಎಂದರ್ಥವಲ್ಲ. ಹೃದಯ ಬಡಿತ ನಿಂತಾಗ ಮಾತ್ರ ಸಾವು ಸಂಭವಿಸಿದೆ ಎಂದು ಹೇಳಬಹುದು ಎಂದರು.
ಇದೇವೇಳೆ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿರುವ ಹಿರಿಯ ನಟ ಜಗ್ಗೇಶ್, ನಾನು ಐಸಿಯುಗೆ ಹೋಗಿ ನೋಡಿಕೊಂಡು ಬಂದಿದ್ದೇನೆ. ವೈದ್ಯರಿಂದಲೂ ಮಾಹಿತಿ ಪಡೆದಿದ್ದೇನೆ. ವಿಜಯ್ ಇನ್ನೂ ಉಸಿರಾಡುತ್ತಿದ್ದು, ದೇಹದ ಹಲವು ಅಂಗಾಂಗಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಬಹುತೇಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳು, ಹಿರಿಯ ಹಾಗೂ ಕಿರಿಯ ಚಲನಚಿತ್ರ ನಟರು ಸಂತಾಪ ಸೂಚಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post