ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಳಗಾವಿಯಲ್ಲಿ ರುಬೆಲ್ಲಾ ಲಸಿಕೆ ಪಡೆದ ಮೂವರು ಮಕ್ಕಳ ಸಾವಿನ ಪ್ರಕರಣ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶಿಸಿದ್ದಾರೆ.
ಸಿಎಂ ಬೊಮ್ಮಾಯಿಯವರು ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ಘಟನೆ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಘಟನೆ ವಿವರ:
ರುಬೆಲ್ಲಾ ಲಸಿಕೆ ಪಡೆದ ಮೂವರು ಮಕ್ಕಳ ಸಾವಿಗೆ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್ಸಿಹೆಚ್ಒ) ಈಶ್ವರಪ್ಪ ಗಡದ್ ಅವರು ಸೋಮವಾರ ಹೇಳಿದ್ದರು.
ಆರೋಗ್ಯ ಸಿಬ್ಬಂದಿಗಳು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜ.೧೦ರಂದು ಲಸಿಕೆ ಸಂಗ್ರಹಿಸಿದ್ದಾರೆ. ಬಳಿಕ ಬಳಕೆಯಾಗದ ಲಸಿಕೆಯನ್ನೂ ಇದೇ ದಿನ ಹಿಂತಿರುಗಿಸಬೇಕಿತ್ತು. ಆದರೆ, ಲಸಿಕೆಯನ್ನು ಹಿಂತಿರುಗಿಸದೆ ಹಳೆಯ ಲಸಿಕೆಯಿಟ್ಟಿದ್ದ ಬಾಕ್ಸ್ ನಲ್ಲಿಯೇ ಲಸಿಕೆಗಳನ್ನು ಇಟ್ಟಿದ್ದಾರೆ. ನಂತರ ಜನವರಿ 11 ಮತ್ತು 12 ರಂದು ಮಕ್ಕಳಿಗೆ ಲಸಿಕೆಗಳನ್ನು ನೀಡಿದ್ದಾರೆ. ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಮುಗ್ಧ ಮಕ್ಕಳು ಪ್ರಾಣ ತೆತ್ತಿದ್ದಾರೆಂದು ಹೇಳಿದ್ದಾರೆ.
ಮಕ್ಕಳಿಗೆ ನೀಡುವ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಐಎಲ್ಆರ್ ರೆಫ್ರಿಜರೇಟರ್ನಲ್ಲಿಯೇ ಇಡಬೇಕು. 2 ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಲಸಿಕೆ ಇಡಬೇಕು. ಆದರೆ, ಲಸಿಕಾಕರಣಕ್ಕಾಗಿ ಜ.10ರಂದು ಲಸಿಕೆ ವಯಲ್ ತೆಗೆದುಕೊಂಡಿದ್ದ ಆರೋಗ್ಯ ಸಿಬ್ಬಂದಿ 2 ದಿನ ಹೋಟೆಲ್ನ ಫ್ರಿಡ್ಜ್ನಲ್ಲಿಟ್ಟಿದ್ದರು.
ಬಳಿಕ ಲಸಿಕೆ ವಾಪಸ್ ತೆಗೆದುಕೊಂಡಿರುವ ಸಿಬ್ಬಂದಿ ವಾಪಸ್ ಐಎಲ್ಆರ್ ರೆಫ್ರಿಜರೇಟರ್ನಲ್ಲಿ ಇಟ್ಟಿದ್ದರೋ ಇಲ್ಲವೋ ಎಂಬುದನ್ನು ಪರಿಶೀಲಿಸದೆ ಲಸಿಕೆಯನ್ನು ಮಕ್ಕಳಿಗೆ ನೀಡಿದ್ದಾರೆ. ಇದರ ಪರಿಣಾಮ ಜನವರಿ 12 ರಂದು ಒಂದು ಮತ್ತು ಜ.16ರಂದು ಇಬ್ಬರು ಮಕ್ಕಳು ಮೃತಪಟ್ಟಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post