ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಕೊಡುವ ಕೆಲಸ ಮಾಡಲಾಗಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪರಿಹಾರ ವಿತರಣೆ ಮಾಡಲು ಗಡುವು ನೀಡಲಾಗಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸೌಧದ ಹೊರಗಡೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬೆಳೆ ಹಾನಿ ಗುರುತು ಮಾಡಬೇಕು. ಹಿಂದೆ ನೀಡಿದ ಪರಿಹಾರ ತಿಂಗಳು, ಮೂರು ತಿಂಗಳು ಅಂತ ಕೊಡಲಾಗ್ತತ್ತಿತ್ತು. ಈಗ ಬೆಳೆ ಹಾನಿ ವರದಿ ಬಂದ ಕೂಡಲೇ ಪರಿಹಾರ ಕೊಡಲು ಸೂಚನೆ ನೀಡಿದ್ದೇನೆ ಎಂದರು.
ಈವರೆಗೂ 3ಲಕ್ಷ ರೈತರಿಗೆ 276.57 ಕೋಟಿ ಪರಿಹಾರ ನೇರವಾಗಿ ಪಾವತಿ ಮಾಡಲಾಗಿದೆ. ಇಂದು ಅನುಮೋದನೆ ನೀಡಲಾಗ್ತುದೆ. 1.61 ಲಕ್ಷ ರೈತರಿಗೆ ಸಬ್ಸಿಡಿ ಸೇರಿಸಿ ಇಂದು ರೈತರ ಖಾತೆಗೆ ಬಿಡುUಡೆ ಮಾಡಲಾಗುತ್ತಿದ್ದು, 4.61 ಲಕ್ಷ ರೈತರಿಗೆ 318.87 ಕೋಟಿ ಹಣವನ್ನು ರೈತರ ಖಾತೆಗೆ ಬಿಡುಗಡೆ ಮಾಡಿದಂತಾಗಲಿದೆ ಎಂದು ತಿಳಿಸಿದರು.
ಇದೇ ಮೊದಲಬಾರಿಗೆ ವರದಿ ಬಂದ ಬಳಿಕ ಹಣ ಸಂದಾಯ ಮಾಡಲಾಗಿದೆ. ಕೇಂದ್ರಕ್ಕೂ ಕೂಡ ವರದಿ ನೀಡಲಾಗುವುದು. ಎನ್ಡಿಆರ್ಎಫ್ ರೂಲ್ಸ್ ಅಡಿಯಲ್ಲಿ ಕೆಂದ್ರಕ್ಕೆ ಮತ್ತೆ ವರದಿ ಕೊಡಲಾಗುವುದು. ಒಟ್ಟಾರೆ ನಷ್ಟ, ರೋಡ್, ಎಲೆಕ್ಟ್ರಿಕ್ ಪೋಲ್ ಸೇರಿದಂತೆ ಹಲವು ಹಾನಿ ಬಗ್ಗೆ ಅಂದಾಜು ಮಾಡಲಾಗುತ್ತಿದೆ. ಪಿಡಿ ಅಕೌಂಟ್ ಮೂಲಕ ಹಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಯಾವುದೇ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಚುಕ್ಕಾಣಿ ಜನರ ತೀರ್ಮಾನ:
ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಆರ್. ಅಶೋಕ್, ಈಶ್ವರಪ್ಪ ತಮಾಷೆಯಾಗಿ ಹೇಳಿದ್ದಾರೆ. ರಾಜ್ಯದ ಚುಕ್ಕಾಣಿ ಯಾರು ಹಿಡಿಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಈಗ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಪದವಿ ಒಲಿದು ಬಂದಿದೆ. ಬಿಸಿಲಿನ ಕುದುರೆ ಮೇಲೆ ಹೋಗಬಾರದು. ಯಾರೂ ತಿರುಕನ ಕನಸು ಕಾಣೋದು ಬೇಡ. ನಮ್ಮ ಕೇಂದ್ರದ ನಾಯಕ ಮೋದಿ, ಅಮಿತ್ ಶಾ ಅವರು ತೀರ್ಮಾನದಂತೆ ಸಿಎಂ ಆಗಿ ಬೊಮ್ಮಾಯಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಇದನ್ನು ನಮ್ಮ ವರಿಷ್ಠರೇ ಸ್ಪಷ್ಟವಾಗಿ ಹೇಳಿದ್ದಾರೆ. ಜನ ಸಂಕಷ್ಟ ಸಂದರ್ಭದಲ್ಲಿ ಜನರ ಧ್ವನಿಯಾಗಿ ಸ್ಪಂದನೆ ಮಾಡಬೇಕು. ಬೊಮ್ಮಾಯಿಗೆ ಕಾಮನ್ ಸಿಎಂ ಅಂತ ಹೆಸರಿದೆ. ಈಗ ಬಂದಿರೋ ಎಲ್ಲಾ ಸಂಕಷ್ಟಗಳನ್ನ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.
ರಾಜ್ಯದ ಗಡಿಗಳಲ್ಲಿ ಕಠಿಣ ಕ್ರಮ:
ಕೋವಿಡ್ ವಿಚಾರವಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಗಡಿಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಎಂದು ಹೇಳಿದರು.
ಸೌತ್ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದ್ದು, ವಿದೇಶದಿಂದ ಬರುವವರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಸ್ವತಃ ಜಿಲ್ಲಾಧಿಕಾರಿಗಳು ಗಡಿಯಲ್ಲಿ ಕಾಯುವಂತೆ ಸೂಚನೆ ನೀಡಲಾಗಿದೆ. ಕೇರಳದಿಂದ ಬರುವ ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗುತ್ತಿದ್ದು, ಲಾಕ್ ಡೌನ್ ಮಾಡುವ ಪ್ರಸಂಗ ಬಂದಿಲ್ಲ ಎಂದರು.
ಕರೋನಾ ಉಲ್ಬಣಿಸಿದರೆ ಕಂದಾಯ ಇಲಾಖೆ ಡಿಸಾಸ್ಟರ್ ಮ್ಯಾನೇಜ್ಮೆಂಟ್ನಿಂದ ಹಣ ಬಿಡುಗಡೆ ಮಾಡಲಾಗುವುದು ಹಾಗೂ ಹಿಂದೆ ಆದಂತ ಎಲ್ಲಾ ಕ್ರಮ ಕೈಗೊಳ್ಳಲಿದ್ದೇವೆ. ಮಾಸ್ಕ್ ಬಳಸೋದು ಕಡ್ಡಾಯವಾಗಿ ಮುಂದುವರೆಯಲಿದೆ. ರಾಜಕೀಯ ಸಮಾರಂಭ, ಮದುವೆ ಎಲ್ಲದಕ್ಕೂ ಕೋವಿಡ್ ನಿಯಮ ಅನ್ವಯವಾಗಲಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post